ಅಧಿಕಾರ ದುರ್ಬಳಕೆಯ ಆರೋಪ ತಳ್ಳಿಹಾಕಿದ ಪರಮೇಶ್ವರ
ಸ್ಟಾರ್ ಪ್ರಚಾರಕಿಯಾಗಿ ನಟಿ ಭಾವನಾ ಸೇರಿದಂತೆ ಹಲವಾರು ಜನರು ಪರಮೇಶ್ವರ್ ಜೊತೆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ರಮ್ಯಾ, ಅಂಬರೀಶ್ ಅವರಂಥ ಸ್ಟಾರ್ ಗಳಿದ್ದರೂ ಪ್ರಚಾರಕ್ಕೆ ಬರದಿರುವುದು ಸಾಕಷ್ಟು ಇರುಸುಮುರುಸು ಉಂಟುಮಾಡಿದೆ.
ಮೈಸೂರು, ಏಪ್ರಿಲ್ 3 : ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಖಡಾಖಂಡಿತವಾಗಿ ಹೇಳಿದ್ದಾರೆ.
ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರ ಪರವಾಗಿ ಮತ ಯಾಚನೆಗೆ ಸೋಮವಾರ ನಂಜನಗೂಡಿಗೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು, ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದರು.[100 ಟಿವಿ ಚಾನೆಲ್ ಗೆ 130 ರು : ಜಿ ಪರಮೇಶ್ವರ ಭರವಸೆ]

ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಪರಮೇಶ್ವರ್ ವಿಶೇಷ ಪೂಜೆ ಸಲ್ಲಿಸಿದರು. ಎರಡೂ ಕ್ಷೇತ್ರದ ಉಪ ಚುನಾವಣೆಯು ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ನಡೆಯುತ್ತಿದೆ. ಚುನಾವಣೆಯ ಯಾವುದೇ ಹಂತದಲ್ಲೂ ರಾಜ್ಯ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.[ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಎಸ್ಸೆಂ ಕೃಷ್ಣ ಶಂಖನಾದ]
ಆರ್.ಎಸ್.ಎಸ್ ನ ಹಿರಿಯ ಮುಖಂಡ ಮೋಹನ್ ಭಾಗವತ್ ರಾಷ್ಟ್ರಪತಿಯ ಹುದ್ದೆಗೆ ಸೂಕ್ತವಾದ ವ್ಯಕ್ತಿ ಎಂದು, ಕಾಂಗ್ರೆಸ್ ನ ಹಿರಿಯ ನಾಯಕ ಜಾಫರ್ ಷರೀಫ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದು ಅವರ ವೈಯಕ್ತಿಕ ವಿಚಾರ. ಜಾಫರ್ ಷರೀಫ್ ಪ್ರಧಾನಿಗೆ ಪತ್ರ ಬರೆದಿರುವುದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ ಪರ ಮತಯಾಚಿಸಿದರು. ಕಳಲೆ ಕೇಶವಮೂರ್ತಿ ಅವರು, ಈ ಕ್ಷೇತ್ರದಲ್ಲಿ ಸೋಲೇ ಕಂಡಿರದ ಬಿಜೆಪಿಯ ವಿ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಸೆಣಸುತ್ತಿದ್ದಾರೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 13ರಂದು ಫಲಿತಾಂಶ ಹೊರಬೀಳಲಿದೆ.
ಈ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕಿಯಾಗಿ ನಟಿ ಭಾವನಾ ಸೇರಿದಂತೆ ಹಲವಾರು ಜನರು ಪರಮೇಶ್ವರ್ ಜೊತೆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ರಮ್ಯಾ, ಅಂಬರೀಶ್ ಅವರಂಥ ಸ್ಟಾರ್ ಗಳಿದ್ದರೂ ಪ್ರಚಾರಕ್ಕೆ ಬರದಿರುವುದು ಸಾಕಷ್ಟು ಇರುಸುಮುರುಸು ಉಂಟುಮಾಡಿದೆ. ಅಲ್ಲದೆ, ಅವರ ಬದ್ಧತೆಯ ಬಗ್ಗೆಯೂ ಪ್ರಶ್ನೆಗಳೇಳುವಂತೆ ಮಾಡಿದೆ.












Click it and Unblock the Notifications