ಜೆಡಿಎಸ್ ಗೆ ಗುಡ್ ಬೈ ಹೇಳಿ 'ಕೈ' ಹಿಡಿದ ಅನಿಲ್ ಚಿಕ್ಕಮಾದು ಸಂದರ್ಶನ
ಮೈಸೂರು, ಜೂನ್ 8 : ಮೈಸೂರಿನ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ, ಜಾತ್ಯತೀತ ಜನತಾ ದಳದ ದಿವಂಗತ ಶಾಸಕ ಎಸ್. ಚಿಕ್ಕಮಾದು ಅವರ ಪುತ್ರ ಅನಿಲ್ ಚಿಕ್ಕಮಾದು ಅವರು ಎಚ್.ಡಿ.ಕೋಟೆ ಮೀಸಲು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.
ಅವರ ತಂದೆ ಚಿಕ್ಕಮಾದು ಅಕಾಲಿಕ ಮರಣಕ್ಕೆ ಈಡಾಗಿದ್ದರು. ಮಗ ಅನಿಲ್ ಜೆಡಿಎಸ್ ಅಭ್ಯರ್ಥಿಯಾಗುವ ಇಚ್ಛೆ ಹೊಂದಿದ್ದರು. ಆದರೆ ಇಲ್ಲಿನ ಮಾಜಿ ಶಾಸಕ ಚಿಕ್ಕಣ್ಣ ಜೆಡಿಎಸ್ ಸೇರ್ಪಡೆಯಾದ ಕಾರಣ ಟಿಕೆಟ್ ಕೈ ತಪ್ಪುವ ಸ್ಥಿತಿ ಇತ್ತು.
ಇದನ್ನು ಅರಿತ ಸಿಎಂ ಸಿದ್ಧರಾಮಯ್ಯ ಅವರು ಚಿಕ್ಕಮಾದು ಕುಟುಂಬವನ್ನು ಕಾಂಗ್ರೆಸ್ ಗೆ ಸೆಳೆದರು. ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಸ್ದರ್ಧಿಸುತ್ತಿರುವ ಅನಿಲ್ ಚಿಕ್ಕಮಾದು ಇದೇ ಮೊದಲ ಬಾರಿ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದು, ತಮ್ಮ ಮುಂದಿನ ಗುರಿಗಳನ್ನು ಒನ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಆದ್ಯತೆಗಳೇನು?
ತಂದೆ ಕಂಡಿದ್ದ ಕನಸುಗಳನ್ನು ಸಂಪೂರ್ಣ ನನಸು ಮಾಡುವುದೇ ನನ್ನ ಗುರಿ. ತಾಲೂಕಿನ ಇತಿಹಾಸದಲ್ಲೇ ನಡೆಯದಂತಹ ಉದ್ಯೋಗ ಮೇಳ ನಡೆಸಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವುದು, ಕೈಗಾರಿಕೆಗಳನ್ನು ಸ್ಥಾಪಿಸುವುದು. ಬಡವರಿಗೆ ಉದ್ಯೋಗ ನೀಡುವುದು ನನ್ನ ಆದ್ಯತೆ.
ನಮ್ಮ ತಂದೆ ಶಾಸಕರಾಗಿದ್ದಾಗ ಶೇ.70ರಷ್ಟು ಕಾಂಕ್ರೀಟ್ ರಸ್ತೆಗಳನ್ನು ಮಾಡಿದ್ದಾರೆ. ತಾಲೂಕಿನಲ್ಲಿ 3 ಜಲಾಶಯಗಳಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಅದನ್ನು ಬಗೆಹರಿಸಲು ಆದ್ಯತೆ ನೀಡುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಕ್ರಮ ಕೈಗೊಳ್ಳುತ್ತೇನೆ. ಕಬಿನಿ ಜಲಾಶಯದ ಬಳಿ ಬೃಂದಾವನ ರೀತಿ ಉದ್ಯಾನ ನಿರ್ಮಿಸುವ ಯೋಜನೆಯಿದೆ.

ಮತ ಹೇಗೆ ಯಾಚಿಸುತ್ತಿದ್ದೀರಿ?
ನಮ್ಮ ತಂದೆ ಶಾಸಕರಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಮುಖ್ಯಮಂತ್ರಿಗಳು 5 ವರ್ಷಗಳ ಅವಧಿಯಲ್ಲಿ ರೂಪಿಸಿರುವ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದ್ದೇನೆ.

ಜನರ ಒಲವು ನಿಮ್ಮ ಪರ ಇದೆಯಾ?
ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೇನೆ. ಈ ಬಗ್ಗೆ ಜನರಿಗೆ ಅರಿವಿದ್ದು, ನನ್ನನ್ನು ಸಂಪೂರ್ಣ ಬೆಂಬಲಿಸುತ್ತಿದ್ದಾರೆ. ಜಿಪಂ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಇರುವ ನನಗೆ ಶಾಸಕನಾಗಿಯೂ ಯಶಸ್ವಿಯಾಗುತ್ತೇನೆ ಎಂಬ ಭರವಸೆ ಇದೆ.

ತಂದೆಯ ಅನುಕಂಪದ ಅಲೆ ನಿಮಗೆ ಪೂರಕವಾಗಲಿದೆಯೇ?
ನಮ್ಮ ತಂದೆ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಜನತೆಗೆ ತೃಪ್ತಿ ಇದೆ. ಸಹಜವಾಗಿ ಅನುಕಂಪ ಇದ್ದೇ ಇರುತ್ತದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದರೂ ಟಿಕೆಟ್ ನೀಡಿಕೆ ಅಂತಿಮವಾದ ನಂತರ ಎಲ್ಲರೂ ಒಟ್ಟಾಗಿ ನಮ್ಮ ಜತೆ ಮತ ಯಾಚನೆ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.












Click it and Unblock the Notifications