ಕಾಂಗ್ರೆಸ್ ಗೆ ಬಹುಮತ ಬರೋಲ್ಲ ಎಂದು ತಾವೇ ಒಪ್ಪಿಕೊಂಡರು ಸಿದ್ದರಾಮಯ್ಯ!
ಮೈಸೂರು, ಏಪ್ರಿಲ್ 15: ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಬಹುಮತ ಪಡೆಯುವುದಿಲ್ಲ ಎಂದು ಸ್ವತಃ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಆದರೆ ಬಿಜೆಪಿಯೂ ಬಹುಮತ ಪಡೆಯುವುದಿಲ್ಲ ಎಂದು ಹೇಳಲು ಅವರು ಮರೆತಿಲ್ಲ!
ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಬಹುಮತ ಪಡೆಯುವುದಿಲ್ಲ, ಕೇಂದ್ರದಲ್ಲಿ ಅತಂತ್ರ ಲೋಕಸಭೆ ತಲೆದೋರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ "ಕೋಮುಶಕ್ತಿಗಳ ಬಗ್ಗೆ ಜನರಲ್ಲಿ ಧಿಕ್ಕಾರದ ಭಾವನೆ ಇದೆ. ಅದಕ್ಕೆಂದೇ ಜನರು ಉತ್ತರ ಪ್ರದೇಶದ ಸರ್ಕಾರವನ್ನು ಧಿಕ್ಕರಿಸುತ್ತಿದ್ದಾರೆ" ಎಂದರು.
ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ. ಆದರೆ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯುವುದು ಸಾಧ್ಯವಿಲ್ಲ. ಆದರೆ ಯುಪಿಎ ಮೈತ್ರಿಕೂಟವು ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ 28 ರಲ್ಲಿ 20 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶ ಮೇ 23 ರಂದು ಹೊರಬೀಳಲಿದೆ.












Click it and Unblock the Notifications