ಮೈಸೂರು ಲೋಕಸಭಾ ಕ್ಷೇತ್ರ:ಬೆಳೆಯುತ್ತಲಿದೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಮೈಸೂರು, ಫೆಬ್ರವರಿ 8: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ದಿನಕ್ಕೊಬ್ಬರು ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮೊಮ್ಮಗ ಸೂರಜ್ ಹೆಗಡೆ, ಹೈಕೋರ್ಟ್ ವಕೀಲ ಎಚ್.ಎಸ್.ಚಂದ್ರಮೌಳಿ, ಮಾಜಿ ಶಾಸಕ ವಾಸು, ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ಈ ಪ್ರತಿಷ್ಠಿತ ಕ್ಷೇತ್ರದಿಂದ ಕಾಂಗ್ರೆಸ್ ಬಿ ಫಾರಂ ಬಯಸಿದ್ದಾರೆ.
ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ ಸಿಂಹ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ, ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ನಿಗೂಢ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ನೀಡಿರುವ ಸುಳಿವು, ಲೆಕ್ಕಾಚಾರಗಳ ಪ್ರಕಾರ ಈ ಕ್ಷೇತ್ರ ಕಾಂಗ್ರೆಸ್ಗೆ ಲಭಿಸುವ ಸಾಧ್ಯತೆ ಇದೆ. ಆದರೆ, ಪಕ್ಷದ ವರಿಷ್ಠರಿಂದ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ಈ ಲೋಕಸಭಾ ಕ್ಷೇತ್ರವು ಕೊಡಗು ಜಿಲ್ಲೆಯ ಎರಡು ಕ್ಷೇತ್ರ ಸೇರಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಒಕ್ಕಲಿಗರು, ಲಿಂಗಾಯತರು, ಕುರುಬ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇದುವರೆಗೆ ಈ ಕ್ಷೇತ್ರದಲ್ಲಿ ಜೆಡಿಎಸ್ ನ ಯಾವುದೇ ಅಭ್ಯರ್ಥಿ ಗೆದ್ದಿಲ್ಲ.
2004ರಲ್ಲಿ ಎ.ಎಸ್.ಗುರುಸ್ವಾಮಿ, 1996ರಲ್ಲಿ ಜಿ.ಟಿ.ದೇವೇಗೌಡ ಎರಡನೇ ಸ್ಥಾನ ಪಡೆದಿದ್ದರು. 13 ಬಾರಿ ಕಾಂಗ್ರೆಸ್ ಜಯಭೇರಿ ಮೊಳಗಿಸಿದ್ದರೆ, ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಹೀಗಾಗಿ, ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಮುಂದೆ ಓದಿ...

ಪ್ರತಿಷ್ಠೆಯ ಕಣವಾಗಿದೆ
ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅವರ ಪಾಲಿಗೆ ಈ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ, ಮರಳಿ ಹಿಡಿತ ಸಾಧಿಸಲು ಅವರೀಗ ಟೊಂಕಕಟ್ಟಿ ನಿಂತಿದ್ದಾರೆ.

ಆತಂಕ ಶುರುವಾಗಿದೆ
ಬಿಜೆಪಿಯಿಂದ ಸ್ಪರ್ಧಿಸಿ ಎರಡು ಬಾರಿ ಸಂಸದರಾಗಿದ್ದ ವಿಜಯಶಂಕರ್ ಅವರನ್ನು ವರ್ಷದ ಹಿಂದೆ ಪಕ್ಷಕ್ಕೆ ಸೆಳೆದ ಉದ್ದೇಶವೇ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು. ಖುದ್ದಾಗಿ ಸಿದ್ದರಾಮಯ್ಯನವರೇ ಟಿಕೆಟ್ ಭರವಸೆ ನೀಡಿ ಪಕ್ಷಕ್ಕೆ ಕರೆತಂದರು. ಆದರೆ, ಆಕಾಂಕ್ಷಿಗಳು ಹೆಚ್ಚುತ್ತಿರುವುದು ನೋಡಿ ವಿಜಯಶಂಕರ್ ಎದೆಯಲ್ಲಿ ಆತಂಕ ಶುರುವಾಗಿರುವುದು ನಿಜ.

ಕಾಂಗ್ರೆಸ್ ನ ಕೆಲ ಮುಖಂಡರ ವಾದ
ವಿಧಾನಸಭೆ ಚುನಾವಣೆ ವೇಳೆ ಮಡಿಕೇರಿ ಕ್ಷೇತ್ರದಿಂದ ಕೊನೆಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿಕೊಂಡಿದ್ದ ಚಂದ್ರಮೌಳಿ ಕೂಡ ರೇಸ್ನಲ್ಲಿದ್ದಾರೆ. ಈ ಬಾರಿ ಕೊಡಗಿಗೆ ಪ್ರಾತಿನಿಧ್ಯ ನೀಡಬೇಕೆಂಬುದು ಅವರ ಮನವಿ. ಸಿದ್ದರಾಮಯ್ಯನವರೇ ಕಣಕ್ಕಿಳಿಯಬೇಕು ಎಂಬುದು ಕಾಂಗ್ರೆಸ್ನ ಕೆಲ ಮುಖಂಡರ ವಾದ.

ಇವರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆ
ಮೈತ್ರಿ ಪಕ್ಷಗಳ ಮಾತುಕತೆಯಲ್ಲಿ ಆಕಸ್ಮಾತ್ ಈ ಕ್ಷೇತ್ರವು ಜೆಡಿಎಸ್ ಗೆ ಒಲಿದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕ ಎಚ್.ವಿಶ್ವನಾಥ್, ಮೈಸೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸಚಿವ ಜಿ.ಟಿ.ದೇವೇಗೌಡ ಪುತ್ರ ಜಿ.ಡಿ.ಹರೀಶ್ ಗೌಡ ಇವರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ.












Click it and Unblock the Notifications