ಎಂಬಿಬಿಎಸ್ ಸೀಟು ಸಿಗದೆ ಲಾ ಓದಿದೆ ಎಂದ ಸಿಎಂ ಸಿದ್ದರಾಮಯ್ಯ
ಮೈಸೂರಿನಲ್ಲಿ ಜಿಸಿ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪ್ರಥಮ ರೋಬೋಟಿಕ್ ಕೀಲು ಮರುಜೋಡಣೆ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಎಂಬಿಬಿಎಸ್ ಸೀಟು ಸಿಗದೆ ಲಾ ಓದಿದೆ. ಈಗ ಸಿಎಂ ಆಗಿದ್ದೇನೆ. ಡಾಕ್ಟರ್ ಆಗಿದ್ದರೆ ನಾನಿಂದು ಸಿಎಂ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ರೋಬೋಟಿಕ್ ಮೊಣಕಾಲು ಮರುಜೋಡಣೆ ಕೇಂದ್ರ ಇದೇ ಮೊದಲ ಬಾರಿಗೆ ಮೈಸೂರು ನಗರದಲ್ಲಿ ಸ್ಥಾಪನೆ ಆಗುತ್ತಿದೆ. ನಮ್ಮೂರಿನ ಪಕ್ಕದವರು ಈ ಸಾಧನೆ ಮಾಡಿದ್ದಕ್ಕೆ ಖುಷಿ ಆಯಿತು. ಇಂದು ಕೀಲು ನೋವು ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ತಂತ್ರಜ್ಞಾನದಿಂದ ಇದೀಗ ಎಲ್ಲವೂ ಸರಳವಾಗುತ್ತಿದೆ ಎಂದರು.
ಸಮಾಜದಲ್ಲಿ ಸಿರಿವಂತರು ಇರುವಂತೆ ಬಡವರು ಇರುತ್ತಾರೆ. ಹಾಗಾಗಿ ವೈದ್ಯರು ಅವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಬೇಕು. ವೈದ್ಯ ವೃತ್ತಿ ಇರುವುದೆ ಸೇವೆ ಮಾಡಲು. ಕಷ್ಟದಲ್ಲಿ ಸಹಾಯ ಮಾಡಿದರೆ ಯಾವಾಗಲೂ ಜನರು ವೈದ್ಯರನ್ನು ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ವೈದ್ಯರು ಸಮಾಜಮುಖಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮೊದಲೆಲ್ಲಾ ಅರವಳಿಕೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರಿಂದ ಅರವಳಿಕೆ ಮೂಲಕ ಸರ್ಜರಿ ಮಾಡಬಹುದಾಗಿದೆ. ಸರಳ ರೀತಿಯಲ್ಲಿ ಹೆರಿಗೆ ಮಾಡಬಹುದು. ಇದೀಗ ರೋಬೋಟಿಕ್ ಮೂಲಕ ಮೊಣಕಾಲು ಚಿಕಿತ್ಸೆ ನೀಡುವುದು ಉತ್ತಮ ಬೆಳವಣಿಗೆ ಎಂದರು.












Click it and Unblock the Notifications