ಮೈಸೂರಿನ ರಮ್ಯ ಹೋಟೆಲಲ್ಲಿ ಇಡ್ಲಿ, ದೋಸೆ ಬಾರಿಸಿದ ಸಿಎಂ ಸಿದ್ದರಾಮಯ್ಯ!
ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ರಾಂತಿ ಮೂಡ್ ನಲ್ಲಿದ್ದರು. ತಮ್ಮ ಖಾಸಗಿ ಕಾರಿನಲ್ಲಿ ಮೈಸೂರಿನ ರಮ್ಯ ಹೋಟೆಲಿಗೆ ತೆರಳಿ ತಿಂಡಿ ತಿಂದರು.
ಮೈಸೂರು, ಏಪ್ರಿಲ್ 8: ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಬಹಳ ದಿನಗಳಿಂದ ರೋಡ್ ಶೋ, ಸಭೆಗಳಲ್ಲಿ ಪಾಲ್ಗೊಂಡಿದ್ದ ಅವರು ಸ್ವಲ್ಪ ಸಮಾಧಾನಚಿತ್ತರಾಗಿರುವುದು ಕಂಡು ಬಂತು.
ಹತ್ತು ದಿನಗಳಿಂದ ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಮ್ಮ ಖಾಸಗಿ ಕಾರಿನಲ್ಲಿ ಆರ್ ಟಿ ಓ ಬಳಿ ಇರುವ ರಮ್ಯ ಮಹೇಂದ್ರ ಹೋಟೆಲ್ ಗೆ ತೆರಳಿ ಇಡ್ಲಿ-ಸಾಂಬಾರ್, ದೋಸೆಯನ್ನು ಸವಿದರು.[ಸಿದ್ದು ಮಾತಿಗೆ ವಿಧಾನ ಸೌಧದಲ್ಲೂ ಬೆಲೆಯಿಲ್ಲ: ಯಡಿಯೂರಪ್ಪ]

ಹತ್ತು ದಿನಗಳಿಂದ ಸರಿಯಾಗಿ ಊಟ-ತಿಂಡಿ-ನಿದ್ರೆಯ ಕಡೆಗೆ ಗಮನ ಹರಿಸದ ಮುಖ್ಯಮಂತ್ರಿಗಳು ಶನಿವಾರ ಪ್ರಶಾಂತವದನರಾಗಿರುವುದು ಕಂಡು ಬಂತು. ತಮ್ಮ ಸ್ನೇಹಿತರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭ ಹೋಟೆಲ್ ಗೆ ಆಗಮಿಸಿದ ವಿದೇಶಿ ಪ್ರವಾಸಿಗರು ಮುಖ್ಯಮಂತ್ರಿಗಳ ಜೊತೆ ಸೆಲ್ಫಿಯನ್ನು ತೆಗೆದುಕೊಂಡರು.
ಯಡಿಯೂರಪ್ಪನವರು ಮುಖ್ಯಮಂತ್ರಿಗಳನ್ನು ಶುಕ್ರವಾರ ಅಯೋಗ್ಯ ಎಂದಿರುವುದರ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ನನಗೆ ಯಡಿಯೂರಪ್ಪನವರಿಗಿಂತ ಕೆಟ್ಟ ಪದ ಬಳಸಲು ಬರುತ್ತದೆ. ಆದರೆ ನಾನು ಅವರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.[ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಅಬ್ಬರ ಪ್ರಚಾರದ ಅಸಲಿಯತ್ತು ಏನು?]

ಯಡಿಯೂರಪ್ಪನವರಿಗೆ ರಾಜಕೀಯ ಸಂಸ್ಕೃತಿ ಗೊತ್ತಿಲ್ಲ. ನಾಲಗೆ ಮೇಲೆ ಹಿಡಿತ ಇಲ್ಲದ ವ್ಯಕ್ತಿ. ಯಡಿಯೂರಪ್ಪ.ಚುನಾವಣೆಯಲ್ಲಿ ವಿಷಯಾಧಾರಿತ ಚರ್ಚೆ ಮಾಡಬೇಕು. ಆದರೆ ಬಿಜೆಪಿಗೆ ವಿಷಯ ಇಲ್ಲದೆ ವೈಯುಕ್ತಿಕ ಟೀಕೆ ಮಾಡುತ್ತಿದ್ದಾರೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಕೊಡುಗೆ ಏನು, ಏನೂ ಅಭಿವೃದ್ಧಿ ಮಾಡದೆ ಮತ ಕೇಳಲು ಯಾವ ನೈತಿಕತೆ ಇವರಿಗಿದೆ ಎಂದು ಪ್ರಶ್ನಿಸಿದರು. ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಗಳಿಗೆ ಜೊತೆಯಿದ್ದರು.












Click it and Unblock the Notifications