Breaking; ಡಿಸಿ ಕಾರ್ಯವೈಖರಿಗೆ ಬೇಸರ, ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆ
ಮೈಸೂರು, ಜೂನ್ 03; "ಉತ್ತಮವಾಗಿ ಕೆಲಸ ಮಾಡಿದರೂ ಟೀಕೆಗಳು ಬರುತ್ತಿದೆ. ಜಿಲ್ಲಾಧಿಕಾರಿ ಅವರು ನನ್ನನ್ನು ತುಳಿಯುವ ಪಿತೂರಿ ನಡೆಸಿದ್ದಾರೆ" ಎಂದು ಆರೋಪಿಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Recommended Video

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯ ವೈಖರಿ ಬಗ್ಗೆ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅಧಿಕಾರಿಗಳು ಸಹ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಐಎಎಸ್ ಅಧಿಕಾರಿ ಶಿಲ್ಪನಾಗ್, "ಒತ್ತಡದಿಂದ ಕೆಲಸ ಮಾಡಿ ಕಿರುಕುಳ ಅನುಭವಿಸುತ್ತಿದ್ದೇನೆ. ಅವಮಾನ ಸಾಕಾಗಿದೆ, ಪಾಲಿಕೆಯ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ವಾರ್ಡ್ ಮಟ್ಟದಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ" ಎಂದು ಹೇಳಿದರು.
"ಉತ್ತಮ ಕೆಲಸ ಮಾಡಿದರೂ ಟೀಕೆಗಳು ಬರುತ್ತಿದೆ. ಜಿಲ್ಲಾಧಿಕಾರಿ ಅವರು ನನ್ನನ್ನು ತುಳಿಯುವ ಪಿತೂರಿ ನಡೆಸಿದ್ದಾರೆ. ಇದಕ್ಕೆಲ್ಲ ಪ್ರತಿಷ್ಠೆ ಕಾರಣವಾಗಿದೆ. ಪತ್ರಿಕಾಗೋಷ್ಠಿ ನಡೆಸಲು ನನಗೆ ಶಕ್ತಿಯಿಲ್ಲ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ" ಎಂದು ತಿಳಿಸಿದರು.

ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ
"ಕೋವಿಡ್ ಮಿತ್ರ ನನ್ನ ಯೋಜನೆ ಎಂದು ಪ್ರಧಾನ ಮಂತ್ರಿ ಬಳಿ ಹೋಗಿದ್ದಾರೆ. ಕೋವಿಡ್ ಮಿತ್ರದಲ್ಲಿ ಕೆಲಸ ಮಾಡಿದ ಅನೇಕ ಅಧಿಕಾರಿ, ಸಿಬ್ಬಂದಿಗಳಿದ್ದಾರೆ. ಪ್ರತಿಯೊಂದಕ್ಕೂ ಈ ಜಾತಿ, ಆ ಜಾತಿ ಎಂಬ ಅಪಪ್ರಚಾರ ಆಗುತ್ತಿದೆ. ಇದು ನಾಯಕತ್ವದ ಗುಣ ಅಲ್ಲ. ಇಂದು ಪತ್ರಿಕಾಗೋಷ್ಠಿ ಕರೆದಿರುವ ಬಗ್ಗೆಯು ಯಾಕೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಾ? ಎಂದು ಕೇಳಿದ್ದಾರೆ" ಎಂದು ಶಿಲ್ಪನಾಗ್ ಆರೋಪಿಸಿದರು.

ದುರಹಂಕಾರದ ನಡೆ ಸರಿಯಲ್ಲ
"ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತಿದ್ದೆವೆವು. ಸೌಮ್ಯ ಸ್ವಭಾವದಲ್ಲಿದ್ದರೂ ಹೀಗೆ ಆಯಿತು.ಒಬ್ಬರ ದುರಹಂಕಾರದ ನಡೆ ಸರಿಯಿಲ್ಲ. ದಯವಿಟ್ಟು ಮೈಸೂರು ಬಿಟ್ಟು ತೊಲಗಿ. ನೀವು ಹೋಗಲಿಲ್ಲ ಅಂದ್ರೆ ನಾನೇ ಹೋಗುತ್ತೇನೆ" ಎಂದು ಶಿಲ್ಪನಾಗ್ ಹೇಳಿದರು.

ಇಂತಹ ನಡೆ ಸರಿಯಲ್ಲ ಎಂದು ಆಕ್ರೋಶ
"ಮೊನ್ನೆ ಒಂದು ದುಃಖದ ಸಂಗತಿ ಯಾಯಿತು. 3000 ಔಷಧಿ ಕಿಟ್ಗಳನ್ನು ಒಂದು ಸಂಸ್ಥೆ ನೀಡಿತು. ಪಾಲಿಕೆ ಕಚೇರಿಯ ಬೀಗ ತೆಗೆದು ಪೊಲೀಸರನ್ನು ಕಳುಹಿಸಿ ಜಿಲ್ಲಾಡಳಿತ ಔಷಧಿ ತೆಗೆದುಕೊಳ್ಳಲಾಯಿತು. ಒಬ್ಬ ಐಎಎಸ್ ಅಧಿಕಾರಿಯಿಂದ ಮತ್ತೊಬ್ಬ ಐಎಎಸ್ ಅಧಿಕಾರಿಗಳ ಮೇಲೆ ಈ ನಡೆ ಸರಿಯಿಲ್ಲ. ಜಿಲ್ಲಾಡಳಿತದ ಕೆಲವು ನಿರ್ಣಯ ಸಹಿಸಿಕೊಂಡು ಸಾಕಾಗಿದೆ. ನಮಗೆ ಯಾವುದೇ ಅನುದಾನ ನೀಡಿಲ್ಲ, ಸಿ. ಎಸ್. ಆರ್ ನಿಧಿಯಿಂದ ಎಲ್ಲಾ ಕೆಲಸ ಮಾಡುತ್ತಿದ್ದೇವೆ. ಸಿ. ಎಸ್. ಆರ್ನ ವಾಟ್ಸಾಪ್ ಗ್ರೂಪ್ನಿಂದ ನನ್ನನ್ನು ತಗೆಯುವ ಕೆಲಸ ಆಗಿದೆ" ಎಂದು ಆರೋಪಿಸಿದರು.

ಅವಮಾನ ಸಾಕಾಗಿ ಹೋಗಿದೆ
"ನಾನು ಸಹ ಸಾಕಷ್ಟು ಐಎಎಸ್ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ರೀತಿ ಎಂದು ಆಗಿಲ್ಲ. ಪ್ರತಿ ದಿನ ಈ ಅವಮಾನ ಸಾಕಾಗಿದೆ. ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಲು ಸಾಕಾಗಿದೆ. ಒಬ್ಬರ ದುರಂಹಕಾರದಿಂದ ಇಡೀ ನಗರವನ್ನು ಸುಡುವ ಕೆಲಸವಾಗುತ್ತಿದೆ. ಮೈಸೂರು ನಗರದಲ್ಲಿ ಜನರು ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ" ಎಂದು ಶಿಲ್ಪನಾಗ್ ಬೇಸರ ವ್ಯಕ್ತಪಡಿಸಿದರು.












Click it and Unblock the Notifications