ಮೈಸೂರು ದಸರಾಕ್ಕೆ ಹೆಲಿಕಾಪ್ಟರ್ ಕಣ್ಗಾವಲು
ಮೈಸೂರು, ಸೆ. 22 : ಮೈಸೂರು ದಸರಾ ನೋಡಲು ದೇಶ ವಿದೇಶದ ಪ್ರವಾಸಿಗರು ಆಗಮಿಸುವುದರಿಂದ ಮೈಸೂರು ಪೊಲೀಸರು ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸೆ.24ರ ಗುರುವಾರದಿಂದ ಜಂಬೂ ಸವಾರಿ ನಡೆಯುವ ಅ.4ರ ತನಕ ವಿವಿಧ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
2014ನೇ ಸಾಲಿನ ದಸರಾ ಮಹೋತ್ಸದಲ್ಲಿ ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆಯ ತೊಂದರೆಯಾಗದಂತೆ, ಯಾವುದೇ ರೀತಿಯ ವಿಧ್ವಂಸಕ ಕೃತ್ಯಗಳು, ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹಾಗೂ ಸಾರ್ವಜನಿಕರ ಸುರಕ್ಷತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಮೈಸೂರು ದಸರಾ ಚಿತ್ರಗಳು]

ನಗರದಲ್ಲಿ ಸೆ.24ರಿಂದ ಕ್ಷಿಪ್ರ ಕಾರ್ಯಾಚರಣೆ ಪಡೆ (rapid action force) ನಿಯೋಜನೆ ಮಾಡಲಾಗುತ್ತದೆ. ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಈ ಸ್ಥಳಗಳಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್ ಕಣ್ಗಾವಲು ನಿಯೋಜಿಸಲಾಗಿದೆ. ಅ.4ರಂದು ಜಂಬೂ ಸವಾರಿ ಸಾಗುವ ಮಾರ್ಗದಲ್ಲಿಯೂ ಹೆಲಿಕಾಪ್ಟರ್ ಕಣ್ಗಾಲಿರುತ್ತದೆ. ಅರಮನೆ ಹಾಗೂ ಜಂಬೂ ಸವಾರಿಯ ಮಾರ್ಗದಲ್ಲಿ 2 ಮಾನವ ರಹಿತ ವೈಮಾನಿಕ ವಾಹನಗಳನ್ನು ನಿಯೋಜನೆ ಮಾಡಲಾಗುತ್ತದೆ.[ಅರ್ಜುನನಿಗೆ ಅಂಬಾರಿ ಹೊರುವ ತಾಲೀಮು ಆರಂಭ]
ವಿಧ್ವಂಸಕ ಕೃತ್ಯಗಳನ್ನು ನಿಗ್ರಹಿಸಲು ಆಂತರಿಕ ಭದ್ರತಾ ವಿಭಾಗದ ಕಮಾಂಡೋ ಪಡೆಯನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ರಾಜ್ಯ ಗುಪ್ತ ದಳದ ನುರಿತ ಬಾಂಬ್ ನಿಷ್ಕ್ರಿಯ ದಳವು ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ದಸರಾ ಮಹೋತ್ಸವದ ಸಮಯದಲ್ಲಿ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಅಪರಾಧಿಗಳು ಬಂದು ಮೈಸೂರು ನಗರದಲ್ಲಿ ಅಪರಾಧ ನಡೆಸುವುದನ್ನು ತಡೆಯುವ ಸಂಬಂಧ ನೆರೆ ಹೊರೆ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಹೊಸ ವ್ಯಾಪಾರಿಗಳ ಮಾಹಿತಿ ಸಂಗ್ರಹ : ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ನಗರದಲ್ಲಿ ಹೊರಗಿನಿಂದ ಬಂದು ಹೊಸದಾಗಿ ವ್ಯಾಪಾರ ಆರಂಭಮಾಡುವ ಹಾಗೂ ರಸ್ತೆ ಬದಿಯ ವ್ಯಾಪಾರಸ್ತರ ಭಾವ ಚಿತ್ರ ಹಾಗೂ ಫಿಂಗರ್ ಪ್ರಿಂಟ್ಗಳನ್ನು ತೆಗೆದುಕೊಳ್ಳಲಾಗಿದೆ. ನಗರದ ಹೋಟೆಲ್ ಮಾಲೀಕರು ಮತ್ತು ಮ್ಯಾನೆಜರ್ಗಳ ಸಭೆ ಕರೆದು ಅಪರಾಧ ತಡೆ ಸಂಬಂಧ ಸಲಹೆ ನೀಡಲಾಗಿದೆ. [ಮೈಸೂರು ವಸತಿ ವ್ಯವಸ್ಥೆ ಬಗ್ಗೆ ತಿಳಿಯಿರಿ]
ಪ್ರವಾಸಿಗರ ಅನುಕೂಲಕ್ಕಾಗಿ ನಗರದ 30 ಕಡೆ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸುಗಮ ಸಂಚಾರ ವ್ಯವಸ್ಥೆಗಾಗಿ ಖಾಸಗಿ ಬಸ್ ಚಾಲಕರು ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗಿದೆ. ಆಟೋ ಚಾಲಕರ ಸಭೆ ನಡೆಸಿ, ಅವರಿಗೆ ಸೂಕ್ತ ತಿಳುವಳಿಕೆ ನೀಡಲಾಗಿದೆ.











Click it and Unblock the Notifications