ಮೈಸೂರಿನಲ್ಲಿ ಕ್ಲೋರಿನ್ ಅನಿಲ ಸಿಲಿಂಡರ್ ಸೋರಿಕೆ: 11 ಮಕ್ಕಳು ಸೇರಿ 69 ಮಂದಿ ಅಸ್ವಸ್ಥ
ಮೈಸೂರು, ಮಾರ್ಚ್ 8: ಮೈಸೂರಿನ ರೈಲ್ವೆ ಕ್ವಾಟ್ರಸ್ನಲ್ಲಿ ಕ್ಲೋರಿನ್ ಅನಿಲ ಸಿಲಿಂಡರ್ ಸೋರಿಕೆಯಾದ ಪರಿಣಾಮ 11 ಮಕ್ಕಳು ಸೇರಿದಂತೆ 69 ಮಂದಿ ಅಸ್ವಸ್ಥರಾದ ಘಟನೆ ಸೋಮವಾರ ನಡೆದಿದೆ.
ಮೈಸೂರಿನ ಯಾದವಗಿರಿಯಲ್ಲಿರುವ ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಎದುರಿನ ರೈಲ್ವೆ ಇಲಾಖೆಯ ಕ್ವಾಟ್ರಸ್ನಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಅಸ್ವಸ್ಥರಾದವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ಲೋರಿನೇಷನ್ ಲೀಕ್ನಿಂದ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನೀರು ಶುದ್ಧೀಕರಣಕ್ಕಾಗಿ ಗೋದಾಮಿನಲ್ಲಿ ಇರಿಸಲಾಗಿದ್ದ ಕ್ಲೋರಿನ್ ತುಂಬಿದ ದೊಡ್ಡ ಸಿಲೆಂಡರ್ನ ವಾಲ್ವ್ ತುಂಡಾಗಿ ಕ್ಲೋರಿನ್ ಅನಿಲ ಸೋರಿಕೆಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಮೈಸೂರು-ಕೆಆರ್ಎಸ್ ರಸ್ತೆ ಬಂದ್ ಮಾಡಲಾಗಿದ್ದು, ರೈಲ್ವೆ ಕ್ವಾಟ್ರಸ್ಗೆ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೆಲ ಕಾಲ ರೈಲ್ವೆ ಕ್ವಾಟ್ರಸ್ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ನಾಲ್ಕೈದು ಅಗ್ನಿಶಾಮಕ ವಾಹನ ಆಗಮಿಸಿ ಕ್ಲೋರಿನೇಷನ್ ಮೇಲೆ ನೀರು ಹಾಕಿ, ಲೀಕೆಜ್ ಮುಚ್ಚಿದ್ದಾರೆ. ಕೆ.ಆರ್. ಆಸ್ಪತ್ರೆಯಲ್ಲಿ ಅಸ್ವಸ್ಥರಾಗಿ ದಾಖಲಾಗಿದ್ದವರ ಶಾಸಕ ಎಲ್. ನಾಗೇಂದ್ರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕ್ಲೋರಿನ್ ಅನಿಲ ಸೋರಿಕೆಯಿಂದ ನಗರ ಬಸ್ ನಿಲ್ದಾಣದಿಂದ ವಿ.ವಿ. ಪುರಂ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿದ್ದವರು, ಆಟೋ ರಿಕ್ಷಾದಲ್ಲಿ ಶಾಲೆಯಿಂದ ಮನೆಯಕಡೆಗೆ ತೆರಳುತ್ತಿದ್ದ ಮಕ್ಕಳು ಹಾಗೂ ಇತರೆ ವಾಹನದಲ್ಲಿ ಸಂಚಾರ ನಡೆಸುತ್ತಿದ್ದವರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರಲ್ಲಿ 12 ಮಕ್ಕಳು ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 27 ಮಂದಿ ಕೆ.ಆರ್. ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಮೂರು ಮಂದಿಯ ಉಸಿರಾಟದ ಸಮಸ್ಯೆ ಹೆಚ್ಚಾಗಿರುವುದರಿಂದ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರಿಗೂ ಆಕ್ಸಿಜನ್ ನೀಡಲಾಗಿದ್ದು, 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಡೀನ್ ಡಾ. ದಿನೇಶ್ ತಿಳಿಸಿದ್ದಾರೆ. ಇನ್ನೂ ಹಲವು ಮಂದಿ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
"ರೈಲ್ವೆ ಕ್ವಾಟ್ರಸ್ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಹೊರ ಬಂದಿರುವ ಅನಿಲ ಇನ್ನೂ ವಾತಾವರಣದಲ್ಲಿರುವುದರಿಂದ ಕೆಲ ಗಂಟೆಗಳ ಕಾಲ ಸಂಚಾರ ನಿರ್ಬಂಧಿಸಲಾಗುವುದು," ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮು ತಿಳಿಸಿದ್ದಾರೆ.












Click it and Unblock the Notifications