ದಸರಾಗೆ ಬರುವವರು ಚಿತ್ರ ಸಂತೆ, ಹಸಿರು ಸಂತೆಗೂ ಭೇಟಿ ನೀಡಿ...
ಮೈಸೂರು, ಅಕ್ಟೋಬರ್ 4: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಅ.5ರಂದು ಚಿತ್ರಸಂತೆ-ಹಸಿರುಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ, ಕೃಷಿ ಇಲಾಖೆ ಸಹಯೋಗದೊಂದಿಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಚಿತ್ರಸಂತೆ ನಡೆಯಲಿದೆ. ಈ ಕಾರಣವಾಗಿ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿನ ಓರಿಯಂಟಲ್ ರಿಸರ್ಚ್ ಇನ್ಸಿಟಿಟ್ಯೂಟ್ ನಿಂದ ಮಹಾರಾಜ ಕಾಲೇಜಿನ ವೃತ್ತದವರೆಗೆ ಸಂಚಾರ ನಿರ್ಬಂಧಿಸಲಾಗುವುದು.
ಚಿತ್ರಸಂತೆಯಲ್ಲಿ ಪೇಂಟಿಂಗ್ ಪ್ರದರ್ಶನ, ಮೈಸೂರು ಇನ್ಲೆ ಕಾರ್ವಿಂಗ್, ಬಟ್ಟೆ ಚೀಲದ ಮೇಲೆ ಕಸೂತಿ ಹಾಕುವಿಕೆ, ಛಾಯಾಚಿತ್ರಗಳ ಪ್ರದರ್ಶನ, ಮ್ಯೂರಲ್, ಕ್ಯಾಲಿಗ್ರಾಫಿ, ಒರೆಗಾಮಿ, ಸ್ಯಾಂಡ್ ಕಲೆ, ಫೇಸ್ ಪೇಂಟಿಂಗ್, ಗಂಧದ ಕಡ್ಡಿ ಮಾಡುವುದು, ಮಡಿಕೆ ಮಾಡುವುದು, ಕೀಟಗಳ ಛಾಯಾಚಿತ್ರ ಪ್ರದರ್ಶನ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಚಿತ್ರಗಳ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ ವೃತ್ತಿನಿರತರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಾಗಿದೆ ಎಂದು ತಿಳಿಸಿದರು.

ಹಸಿರುಸಂತೆ: ಕೃಷಿ ಇಲಾಖೆ, ಪ್ರಾಂತೀಯ ಕೃಷಿ ಒಕ್ಕೂಟಗಳು ಜಂಟಿಯಾಗಿ ಹಸಿರುಸಂತೆಯನ್ನು ಅನುಷ್ಠಾನ ಮಾಡುತ್ತಿವೆ. ಹಸಿರು ಸಂತೆಯಲ್ಲಿ ಸಾವಯವ ಕೃಷಿ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಸಿರಿಧಾನ್ಯಗಳ ಉತ್ಪನ್ನಗಳು, ಸಾವಯವ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ರುಚಿಯಾದ, ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತದೆ.
ಎರಡು ಸಂತೆಯಿಂದ ನೂರು ಮಳಿಗೆಗಳನ್ನು ನಿರ್ಮಿಸಲಾಗಿದೆ. ಆಹಾರಮೇಳ, ಯುವ ದಸರಾದ ಹಿನ್ನೆಲೆಯಲ್ಲಿ ಸಂಚಾರದ ಒತ್ತಡ ಸಂಜೆ ಹೊತ್ತು ಜಾಸ್ತಿಯಾಗುವ ಕಾರಣ ಐದು ಗಂಟೆಗೆ ಕೊನೆಗೊಳ್ಳುವಂತೆ ಆಯೋಜಿಸಲಾಗಿದೆ. ಕಳೆದ ವರ್ಷ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಕಿಡಿಗೇಡಿಗಳ ಕಿರಿಕಿರಿಯಿಂದಾಗಿ ದಸರಾಕ್ಕೆ ಕಪ್ಪುಚುಕ್ಕೆಯಾಗಿತ್ತು. ಈ ಬಾರಿ ಹಸಿರು ಸಂತೆ ಹಾಗೂ ಚಿತ್ರಸಂತೆಯಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಗಾಳಿಪಟ ಸ್ಪರ್ಧೆ: ಪ್ರವಾಸೋದ್ಯಮ ಉಪ ಸಮಿತಿ ಅಧ್ಯಕ್ಷ ಕೆ.ಜೆ.ರಮೇಶ್ ಅ.13 ರಂದು ಲಲಿತಮಹಲ್ ಪಕ್ಕದ ಹೆಲಿಪ್ಯಾಡ್ನಲ್ಲಿಗಾಳಿಪಟ ಹಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications