"ಕನ್ನಡಕ್ಕಾಗಿ ತುಂಗಭದ್ರಾ ನದಿಗೆ ಹಾರಿದ್ದರು ಚಿದಾನಂದ ಮೂರ್ತಿ"
ಮೈಸೂರು, ಜನವರಿ 14: "ಕನ್ನಡಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಡಾ.ಎಂ.ಚಿದಾನಂದ ಮೂರ್ತಿ ಅವರು ಕನ್ನಡಕ್ಕಾಗಿ ನದಿಗೆ ಹಾರಿದ್ದರು" ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್ ಹೇಳಿದ್ದಾರೆ.
ಜ್ಞಾನಬುತ್ತಿ ವತಿಯಿಂದ ಲಕ್ಷ್ಮೀಪುರಂ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ನಿನ್ನೆ ಆಯೋಜಿಸಿದ್ದ "ಡಾ.ಎಂ.ಚಿದಾನಂದ ಮೂರ್ತಿ ಅವರ ನುಡಿ ನಮನ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
"ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕಾಗಿ ಜೀವನದುದ್ದಕ್ಕೂ ಹೋರಾಟ ನಡೆಸಿದ ಚಿಮೂ ಕಾವೇರಿ ನೀರು ಮತ್ತು ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಸದಾ ಹೋರಾಟಕ್ಕೆ ಸಿದ್ಧರಿರುತ್ತಿದ್ದರು. ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ಅನ್ಯಾಯವಾದರೆ ಅವರು ಸಹಿಸುತ್ತಿರಲಿಲ್ಲ. ಕನ್ನಡದ ಉಳಿವಿಗಾಗಿ ಬೆಂಗಳೂರಿನಿಂದ ಹಂಪಿಯವರೆಗೆ ಪಾದಯಾತ್ರೆ ನಡೆಸಿದ ಸಂದರ್ಭ ಕನ್ನಡ ಉಳಿಯಬೇಕೆಂದು ತುಂಗಾ-ಭದ್ರ ನದಿಗೆ ಹಾರಿದ್ದರು. ಅದೃಷ್ಟದಿಂದ ಅವರು ಬದುಕುಳಿದರು. ಈ ಮೂಲಕ ಅವರು ಕನ್ನಡಕ್ಕಾಗಿ ಆತ್ಮ ಅರ್ಪಿಸಿಕೊಂಡಿದ್ದರು" ಎಂದು ಚಿಮೂ ಹೋರಾಟದ ಹಾದಿಯನ್ನು ಸ್ಮರಿಸಿದರು.

"ಚಿಮೂ ಅವರು ಯಾವುದೇ ಹುದ್ದೆ, ಅಧಿಕಾರಕ್ಕೆ ಆಸೆಪಟ್ಟವರಲ್ಲ. ಅವರು ಮನಸ್ಸು ಮಾಡಿದ್ದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದ ಚಿಮೂ ಪ್ರಥಮ ಕುಲಪತಿಯಾಗಬಹುದಿತ್ತು. ಮನೆ ಬಾಗಿಲಿಗೆ ಎಂಎಲ್ ಸಿ ಅವಕಾಶ ಬಂದಾಗ ನಯವಾಗಿ ತಿರಸ್ಕರಿಸಿದರು. ಅಧಿಕಾರದ ಹಿಂದೆ ಬೀಳದೆ ಕನ್ನಡದ ಏಳಿಗೆಗಾಗಿ ನಿಷ್ಠೆಯಿಂದ ದುಡಿದರು" ಎಂದರು.
"ಚಿಮೂ ಕನ್ನಡಕ್ಕಾಗಿ ಹೋರಾಟ ನಡೆಸುವ ಸಂದರ್ಭ, ನಮಗೆಲ್ಲ ಮಹಾರಾಷ್ಟ್ರದ ಬಾಳೆ ಠಾಕ್ರೆ ಆದರ್ಶವಾಗಬೇಕೆಂದು ಹೇಳುತ್ತಿದ್ದರು. ಠಾಕ್ರೆ ಮಹಾರಾಷ್ಟ್ರದ ಜನತೆಗಾಗಿ ದುಡಿಯುತ್ತಿರುವ ಮಾದರಿಯಲ್ಲೇ ನಾವೆಲ್ಲ ಕನ್ನಡಕ್ಕಾಗಿ ದುಡಿಯಬೇಕೆಂದು ಹೇಳುತ್ತಿದ್ದರು" ಎಂದು ನೆನಪಿಸಿಕೊಂಡರು.












Click it and Unblock the Notifications