ಸಿಎಂ ಆಗಲು ಭಗವಂತನ ಆಶೀರ್ವಾದ ಬೇಕು, 37 ಸೀಟ್ ಗೆದ್ರೂ ನಾನು ಸಿಎಂ ಆಗಿರಲಿಲ್ವಾ: ಎಚ್ಡಿಕೆ
ಮೈಸೂರು, ಆಗಸ್ಟ್ 26: ''ಯಾರಿಗೆ ಭಗವಂತನ ಅನುಗೃಹ ಇರುತ್ತದೋ ಅವರು ಅಧಿಕಾರ ಪಡೆಯುತ್ತಾರೆ. ಸಿಎಂ ಆಗುವುದಕ್ಕೆ ತಾಯಿ ಚಾಮುಂಡೇಶ್ವರಿ ದಯೇ ಬೇಕು. ಭಗವಂತನ ಆಶೀರ್ವಾದ ಬೇಕು'' ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
''ಮೇಯರ್ ಚುನಾವಣೆ ಬಗ್ಗೆ ಚರ್ಚಿಸಲು ಮೈಸೂರಿಗೆ ಆಗಮಿಸಿದ್ದ ವೇಳೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್ಡಿಕೆ, ಕಳೆದ ಬಾರಿ ಚುನಾವಣೆಯಲ್ಲಿ ನಾವು ಗೆದ್ದದ್ದು 37 ಶಾಸಕರು ಮಾತ್ರ. ಆದರೂ ನಾನು ಸಿಎಂ ಆಗಲಿಲ್ಲವೇ? ಭಗವಂತನ ಕೃಪೆ ಇದ್ದರಷ್ಟೇ ಸಿಎಂ ಆಗಬಹುದು. ಕಳೆದ ಬಾರಿ ನಾವು ಗೆದ್ದದ್ದು 37 ಶಾಸಕರು ಮಾತ್ರ. ಆದರೂ ನಾನು ಸಿಎಂ ಆಗಲಿಲ್ಲವೇ? ಭಗವಂತನ ಕೃಪೆ ಇದ್ದರಷ್ಟೇ ಸಿಎಂ ಆಗಬಹುದು'' ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
40 ಪರ್ಸೆಂಟ್ ಕಮಿಷನ್: ಗುತ್ತಿಗೆದಾರರಿಗೆ ಕುಮಾರಸ್ವಾಮಿ ಕೊಟ್ಟ ಟಿಪ್ಸ್ ಏನು?
ಶೇ.40 ಕಮಿಷನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ "ರಾಜ್ಯದಲ್ಲಿ ಇಂದಿನ ಸರಕಾರದ ನಡವಳಿಕೆ ಬಗ್ಗೆ ಗುತ್ತಿಗೆದಾರರ ಸಂಘದ ವತಿಯಿಂದ ನಿರಂತರವಾಗಿ ಆರೋಪ ಇದೆ. ಶೇ.40 ಸರಕಾರ ಎನ್ನುವುದು ಚರ್ಚೆಯಾಗುತ್ತಿದೆ. ಸಾರ್ವಜನಿಕವಾಗಿಯೂ ಸರಕಾರದ ನಡವಳಿಕೆ ಬಗ್ಗೆ ಅತ್ಯಂತ ಕೆಟ್ಟ ರೀತಿ ಜನಾಭಿಪ್ರಾಯ ಇದೆ. ಪರ್ಸೆಂಟೇಜ್ ಸಂಸ್ಕೃತ ನಾಡಿನ ಜನತೆ ಗೊತ್ತಿದೆ'' ಎಂದರು.
ಎಲ್ಲಾ ಕಾಲದಲ್ಲೂ ಪರ್ಸೇಂಟೇಜ್ ವ್ಯವಸ್ಥೆ ಇತ್ತು.
ಒಂದೊಂದು ಇಲಾಖೆಯಲ್ಲಿ ಒಂದೊಂದು ಸಂದರ್ಭದಲ್ಲಿ ತೀರ್ಮಾನವಾಗುತ್ತಿದೆ. ಸರಕಾರದ ಆಡಳಿತ ಯಂತ್ರದಲ್ಲಿ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ಮನಸ್ಸಿನ ನೋವು. ಈ ಪರ್ಸೆಂಟೇಜ್ ಬ್ರಿಟಿಷರ ಕಾಲದಿಂದಲೂ ಇತ್ತು. ಹಿಂದೆ ಶೇ 2 ರಿಂದ 3 ರಷ್ಟು ಪರ್ಸೆಂಟೇಜ್ ವ್ಯವಸ್ಥೆ ಇತ್ತು. ಸ್ವಾತಂತ್ರ್ಯ ಬಂದ ನಂತರ ಪರ್ಸಂಟೇಜ್ ಎನ್ನುವುದು ಕೇಂದ್ರದ, ರಾಜ್ಯ ಸರಕಾರದಲ್ಲೂ ಇದೆ. ಮೊದಲು ಸಣ್ಣ ಸಣ್ಣದಾಗಿ ಇತ್ತು. ಶಾಸಕರ ಮಟ್ಟದಲ್ಲಿ ಇರಲಿಲ್ಲ, ಸರಕಾರದ ಮಟ್ಟದಲ್ಲಿತ್ತು. ಆದರೆ ಬಿಜೆಪಿ ಸರಕಾರ 2008 ರಲ್ಲಿ ಬಂದ ನಂತರ ಹಣಕೊಟ್ಟು ಏನು ಬೇಕಾದರೂ ಖರೀದಿ ಮಾಡಬಹುದು ಎಂಬ ಸ್ಥಿತಿಗೆ ತಂದು ನಿಲ್ಲಿಸಿದರು. ಬಿಜೆಪಿಯವರು ಬಂದ ನಂತರ ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಕೆಂಪುಕೋಟೆ ಮೇಲೆ ಭಾಷಣ ಮಾಡುವ ಪ್ರಧಾನಿಗೆ ಕರ್ನಾಟಕದ 40% ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ?: ಎಚ್ಡಿಕೆ
ಬಿಜೆಪಿ-ಕಾಂಗ್ರೆಸ್ ನವರದು ಸೂಟ್ಕೇಸ್ ಕೊಡುವ ಸಂಸ್ಕೃತಿ
ನಾನು ಇಬ್ಬರು ಖಡಕ್ ಅಧಿಕಾರಿಗಳನ್ನು ಬಳ್ಳಾರಿಗೆ ವರ್ಗಾವಣೆ ಮಾಡಿದ್ದಕ್ಕೆ, ಬಿಜೆಪಿ ಪಕ್ಷದ ಪರಿಷತ್ ಸದಸ್ಯ ನನ್ನ ವಿರುದ್ಧವೇ 150 ಕೋಟಿ ಲಂಚದ ಆರೋಪ ಮಾಡಿದರು. ಆಗ ನಾನು ತನಿಖೆಗೆ ಆದೇಶ ಮಾಡಿದ್ದರಿಂದಲೇ ಕೆಲವರು ಜೈಲಿಗೆ ಹೋಗಿದ್ದರು. ವ್ಯವಸ್ಥೆಯೇ ಹಾಳಾಗಿರುವುದರಿಂದ ಭ್ರಷ್ಟಾಚಾರ ಈ ಹಂತ ತಲುಪಿದೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ ಮಾಡಲು ನಿರ್ಧರಿಸಿದಾಗ ಎಷ್ಟೋ ತರದ ಆಫರ್ ಬಂದವು. ಅದಕ್ಕೆ ನಾನು ಬಗ್ಗದೇ ಲಾಟರಿ ನಿಷೇಧ ಮಾಡಿದೆ. ಈ ಎರಡು ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನವರು ಸೂಟ್ಕೇಸ್ ಕೊಡುವ ಸಂಸ್ಕೃತಿ ಹೊಂದಿದ್ದು, ಇದರಿದಲೇ ಪರ್ಸೆಂಟೇಜ್ ಹೆಚ್ಚಾಗಿದೆ ಎಂದು ಟೀಕಿಸಿದರು.
5% ಕಮಿಷನ್ ಆರೋಪ ಸುಳ್ಳು
ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಬಿಲ್ಗಳನ್ನು ಪಾಸು ಮಾಡಲು 5 ಪರ್ಸೆಂಟ್ ಕಮೀಷನ್ ಪಡೆಯಲಾಗುತ್ತಿತ್ತು ಎಂಬ ಆರೋಪ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ಆರೋಪವನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಳ್ಳಿಹಾಕಿದರು. ನಾನು ಎರಡು ಅವಧಿಗಳಿಗೆ ಅಧಿಕಾರದಲ್ಲಿದ್ದಾಗ ನನ್ನ ಕಚೇರಿಯಲ್ಲಿ ಯಾವತ್ತೂ ಕಮೀಷನ್ ನಡೆದಿಲ್ಲ, ಕೆಂಪಣ್ಣನ ಎಲ್ಲಾ ಕಾಲದಲ್ಲೂ ನಡೆದುಕೊಂಡು ಬಂದಿದೆ ಎಂದಿದ್ದಾರೆ, ಅವರು ನನ್ನ ಮುಂದೆ ಈ ಮಾತು ಹೇಳಲಿ ಎಂದು ಸವಾಲು ಹಾಕಿದರು.
ಡಿಕೆಶಿ ಜೊತೆ ವೇದಿಕೆ ಹಂಚಿಕೊಳ್ಳುವುದಕ್ಕೆ ಬೇರೆ ಅರ್ಥ ಬೇಡ
ನಾನು ಡಿಕೆ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಳ್ಳುವ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನಗೆ ಅವರನ್ನು ಕಂಡರೆ ಸಿಂಪಥಿ ಏನಿಲ್ಲ. ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಮುಖಂಡರನ್ನು ಆಹ್ವಾನಿಸುತ್ತಾರೆ, ನನ್ನನ್ನೂ ಕರೆಯುತ್ತಾರೆ, ಡಿಕೆ ಶಿವಕುಮಾರ್ರನ್ನು ಕರೆಯುತ್ತಾರೆ. ಹಾಗಾಗಿ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಇದ್ದೆವು ಅಷ್ಟೇ. ಡಿ.ಕೆ ಶಿವಕುಮಾರ್ ಒಂದು ಪಕ್ಷದ ಅಧ್ಯಕ್ಷರು ಅವರು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದು, ಈ ಬಗ್ಗೆ ನಾನೇಕೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳಲಿ. ಎಲ್ಲಾ ದೇವರ ಇಚ್ಛೆ, ದೇವರು ಬಯಸಿದಂತೆ ಆಗುತ್ತದೆ. ನಾನು ಅವರ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಜನ ನನ್ನನ್ನು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಾಡಬೇಕೆಂದು ಬಯಸಿದ್ದಾರೆ ಎಂದರು.