ವಿಷ ಪ್ರಸಾದ ಸೇವನೆ: ಆಸ್ಪತ್ರೆಯಲ್ಲಿರುವ 29 ಮಂದಿ ಸ್ಥಿತಿ ಗಂಭೀರ
ಮೈಸೂರು, ಡಿಸೆಂಬರ್ 15: ಚಾಮರಾಜನಗರ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ದೇವಾಲಯದಲ್ಲಿ ಪ್ರಸಾದ ಸೇವಿಸಿ ಈಗಾಗಲೇ 11 ಮಂದಿ ಮೃತಪಟ್ಟಿದ್ದು, ವಿವಿಧ ಆಸ್ಪತ್ರೆಗಳಲ್ಲಿರುವ 29 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
122 ಮಂದಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಕೆ ಆರ್ ಆಸ್ಪತ್ರೆಯಲ್ಲಿ 34, ಕಾವೇರಿ ಆಸಪತ್ರೆಯಲ್ಲಿ 15, ಭಾನವಿ ಆಸ್ಪತ್ರೆಯಲ್ಲಿ ಓರ್ವ, ಜೆಎಸ್ಎಸ್ ಆಸ್ಪತ್ರೆಯಲ್ಲಿ 19, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ 8, ಅಪೋಲೋ ಆಸ್ಪತ್ರೆಯಲ್ಲಿ 24 , ಸುಯೋಗ ಆಸ್ಪತ್ರೆಯಲ್ಲಿ 13 ಹಾಗೂ ಗೋಪಾಲಗೌಡ ಆಸ್ಪತ್ರೆಯಲ್ಲಿ 2 ಮಂದಿಗೆ ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತದೆ.

29 ಮಂದಿ ಸ್ಥಿತಿ ಗಂಭೀರ
ಒಟ್ಟಾರೆ ಸಾಮಾನ್ಯ ಸ್ಥಿತಿಯಲ್ಲಿ 93 ಜನ ಹಾಗೂ ಐಸಿಯೂನಲ್ಲಿ 29 ಜನರು ದಾಖಲಾಗಿದ್ದಾರೆ. ಇನ್ನು ಚೆಲುವಾಂಬ ಆಸ್ಪತ್ರೆಯಲ್ಲಿ ಮೂರು ಮಕ್ಕಳಿಗೂ ವೆಂಟಿಲೇಶ ನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.. ಮೂವರಲ್ಲಿ ಒಬ್ಬ ಮಗುವನ್ನು ಒಂದು ಅಬ್ಸರ್ವರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಇತರೆ ಆಸ್ಪತ್ರೆಗಳಲ್ಲಿ ಎಂ ಐ ಸಿಯೂ ನಲ್ಲಿ ಇಬ್ಬರನ್ನು ಅಬ್ಸರ್ವರ್ ನಲ್ಲಿ ಇಡಲಾಗಿದೆ. ಮಕ್ಕಳ ವೈದ್ಯೆ ಶೃತಿ ಮಾತನಾಡಿ ಮಕ್ಕಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಪ್ರಸಾದದಲ್ಲಿ ಸೇರಿರುವ ವಿಷ ಯಾವುದು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಸದ್ಯ ಮಕ್ಕಳ ಮೂತ್ರ, ರಕ್ತ, ಎಲ್ಲವನ್ನೂ ಪರಿಶೀಲನೆಗೆ ಕಳುಹಿಸಲಾಗಿದೆ. ಮಕ್ಕಳ ಆರೋಗ್ಯ ಸುಧಾರಣೆ ಆಗೋವರೆಗೂ ನಾವು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದೇವೆ. ಮಕ್ಕಳ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಗಣ್ಯರ ಭೇಟಿಯಿಂದ ರೋಗಿಗಳಿಗೆ ಮುಜುಗರ
ಕೆ. ಆರ್ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಲು ಹಲವು ಗಣ್ಯರು ಭೇಟಿ ನೀಡುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ವೈದ್ಯರಿಗೆ ಭಾರೀ ಕಿರಿಕಿರಿಯಾಗುತ್ತಿದೆ. ಮುಖಂಡರ ಜೊತೆಗೆ ಅವರ ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಆಸ್ಪತ್ರೆಯಲ್ಲಿ ಜನ ಜಂಗುಳಿ ಉಂಟಾಗಿದೆ. ಇದರ ಮಧ್ಯೆ ಗಂಭೀರ ಸ್ಥಿತಿಯಲ್ಲಿರುವ 20ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ಸುಧಾರಣೆ ಮಾಡಲು ವೈದ್ಯರಿಗೆ ಭಾರೀ ಕಿರಿಕಿರಿ ಉಂಟಾಗುತ್ತಿದೆ. ಇತ್ತ ಗಣ್ಯರನ್ನು ನಿಭಾಯಿಸಲು ನಿಯೋಜಿಸಿದ ಪೊಲೀಸರಿಗೂ ಪ್ರಯಾಸವಾಗುತ್ತಿದೆ.

ಆಸ್ಪತ್ರೆ ಮುಂದೆ ಸಾರ್ವಜನಿಕರ ಜಮಾವಣೆ :
ಆಸ್ಪತ್ರೆಗೆ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ತಿಳಿದು ಆಸ್ಪತ್ರೆ ಬಳಿ ಸಾರ್ವಜನಿಕರು ಜಮಾಯಿಸುತ್ತಿದ್ದಾರೆ. ಹೀಗಾಗಿ ದೇವರಾಜ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಬ್ಯಾರಿಕೆಡ್ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸಾರ್ವಜನಿಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

11 ಮಂದಿ ಮೃತರ ಸಂಪೂರ್ಣ ವಿವಿರ ಇಂತಿದೆ :
ಮಾರಮ್ಮ ದೇವಿಯ ಪ್ರಸಾದ ಸೇವಿಸಿ 11 ಜನರು ಮೃತಪಟ್ಟಿದ್ದು, ಮೃತಪಟ್ಟವರ ಗುರುತು ಪತ್ತೆಯಾಗಿದೆ. ಪಾಪಣ್ಣ(70), ರಾಚಯ್ಯ(58), ಶಕ್ತಿವೇಲು, ಶಾಂತರಾಜು(30), ಗೋಪಿಯಮ್ಮ(40), ಅನಿತಾ(12), ಅಣ್ಣಯ್ಯಪ್ಪ, ಶಿವು(30), ಕೃಷ್ಣನಾಯ್ಕ(40), ದೊಡ್ಡಮಾದಯ್ಯ ಹಾಗೂ ಪ್ರೀತನ್(7) ಮೃತ ದುರ್ದೈವಿಗಳು.
ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications