ಚಾಮರಾಜ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ: ಗೆಲುವಿಗಾಗಿ ಮೂರು ಪಕ್ಷಗಳ ತಂತ್ರಗಾರಿಕೆ
ಮೈಸೂರು, ಡಿಸೆಂಬರ್ 5: ಬುದ್ಧಿವಂತರ ಕ್ಷೇತ್ರ ಎಂದೇ ಮೈಸೂರಿನ ಚಾಮರಾಜ ಕ್ಷೇತ್ರ ಹೆಸರು ಪಡೆದಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರ ಕೂಡ ಬಹುಕುತೂಹಲ ಮೂಡಿಸಿರುವ ಕ್ಷೇತ್ರವಾಗಿದ್ದು, ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆಗಳಿದೆ.
ಮೈಸೂರು ನಗರ ಹೃದಯಭಾಗವನ್ನು ಹೊಂದಿರುವ ಚಾಮರಾಜಕ್ಷೇತ್ರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ, ಮೈಸೂರು ವಿಶ್ವವಿದ್ಯಾಲಯ, ರಂಗಾಯಣ, ಆಯಿಷ್, ಮಹಾರಾಣಿ ಶಿಕ್ಷಣ ಸಂಸ್ಥೆ, ಗ್ರಾಮಾಂತರ ಬಸ್ ನಿಲ್ದಾಣ, ಹೆಚ್ಚು ಪಾರಂಪರಿಕ ಕಟ್ಟಡಗಳು, ಬೃಹತ್ ಅಪಾರ್ಟ್ಮೆಂಟ್ಗಳು, ಪ್ರಮುಖ ಕಟ್ಟಡಗಳು ಇವೆ. ಹೀಗಾಗಿ ವಿದ್ಯಾವಂತ ಮತದಾರರಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
ಮತ್ತೆ "ಸ್ವಚ್ಛ ನಗರಿ" ಪಟ್ಟವನ್ನು ಅಲಂಕರಿಸಲು ಸಜ್ಜಾದ ಮೈಸೂರು, ಸಿದ್ಧತೆ ವಿವರ ಇಲ್ಲಿದೆ
ಮೊದಲ ಬಾರಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ
ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲ್.ನಾಗೇಂದ್ರ ಗೆಲುವಿನ ನಗೆ ಬೀರಿದ್ದರು. ಪಾಲಿಕೆ ಸದಸ್ಯ ಹಾಗೂ ಮುಡಾ ಆಯುಕ್ತರಾಗಿ ಕೆಲಸ ಮಾಡಿದ್ದ ನಾಗೇಂದ್ರ, ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಾಸು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಇಂತಹ ಕ್ಷೇತ್ರದಲ್ಲಿ ಈ ಬಾರಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೂರು ಪ್ರಮುಖ ಪಕ್ಷಗಳು ತಮ್ಮದೇ ತಂತ್ರಗಾರಿಕೆಯನ್ನು ರೂಪಿಸುತ್ತಿವೆ. ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸ್, ಜೆಡಿಎಸ್ ಮುಂದಾಗಿದೆ. ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಮೂರು ಪಕ್ಷಗಳ ಅಭ್ಯರ್ಥಿಗಳು ಯಾರು ಎನ್ನುವ ಕುತೂಹಲವಿದೆ.
ಚುನಾವಣೆ ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ಏನು?
ಕಾಂಗ್ರೆಸ್ ಅಭ್ಯರ್ಥಿ ವಾಸು ಎರಡು ಬಾರಿ ಚಾಮರಾಜ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಚಾಮರಾಜ ಕ್ಷೇತ್ರ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರ ಮಾತೇ ಅಂತಿಮ ಎಂದು ಹೈಕಮಾಂಡ್ ತಿಳಿಸಿದೆ. ಹಾಗಾಗಿ ಮೈಸೂರು ಭಾಗದಿಂದ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಡಬೇಕಾದ ಹೊಣೆ ಸಿದ್ದರಾಮಯ್ಯ ಮೇಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ. ಎಂದಿನಂತೆ ಮಾಜಿ ಶಾಸಕ ವಾಸು ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡ ಕೆ.ಹರೀಶ್ಗೌಡ ಕ್ಷೇತ್ರದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ. ಉಳಿದಂತೆ ಕೆಲವು ಹೊಸ ಮುಖಗಳ ಕೂಡ ಇದ್ದಾರೆ. ಇವರ ಪೈಕಿ ಯಾರಿಗೆ ಸಿದ್ದರಾಮಯ್ಯ ಮಣೆ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.
ಶಂಕರಲಿಂಗೇಗೌಡ ನಿಧನದ ಬಳಿಕ ಕಾಂಗ್ರೆಸ್ ತೆಕ್ಕೆಗೆ ಜಾರಿದ ಚಾಮರಾಜ ಕ್ಷೇತ್ರ
ಒಂದು ಕಾಲದಲ್ಲಿ ಚಾಮರಾಜ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಆಗಿತ್ತು. ಶಂಕರಲಿಂಗೇಗೌಡರಿಂದ ಚಾಮರಾಜಕ್ಷೇತ್ರ ಕಮಲದ ಭದ್ರಕೋಟೆ ಆಗಿತ್ತು. ಆದರೆ, ಅವರು ನಿಧನರಾದ ನಂತರ ಕಾಂಗ್ರೆಸ್ ತೆಕ್ಕೆಗೆ ಜಾರಿತು. ಪ್ರಸ್ತುತ ಹಾಲಿ ಶಾಸಕ ಎಲ್.ನಾಗೇಂದ್ರ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಹೀಗಾಗಿ ಈ ಬಾರಿಯೂ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗುತ್ತಿದ್ದರೂ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಿಗೆ ಏನು ಕೊರತೆ ಇಲ್ಲ. ಶಂಕರಲಿಂಗೇಗೌಡರ ಪುತ್ರ, ಮಾಜಿ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷಕ್ಕಾಗಿ ದುಡಿದಿರುವ ಹಿರಿಯ ರಾಜಕಾರಣಿ ಮಾದೇಗೌಡ, ಪಕ್ಷದ ಮುಖಂಡ ಜಯಪ್ರಕಾಶ್, ಬಿಜೆಪಿ ಮಾಜಿ ನಗರಾಧ್ಯಕ್ಷ ಡಾ.ಮಂಜುನಾಥ್ ಅವರ ಹೆಸರು ಕೂಡ ಕೇಳಿ ಬಂದಿದೆ.
ಆಮ್ ಆದ್ಮಿ ಪಕ್ಷದ ಮಾಳವಿಕಾ ಗುಬ್ಬಿವಾಣಿ ಸ್ಪರ್ಧೆ
ಜೆಡಿಎಸ್ನಿಂದ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಜೊತೆಗೆ ಪಾಲಿಕೆ ಮಾಜಿ ಸದಸ್ಯ ಸಿ.ಮಹದೇವ್ (ಅವ್ವ ಮಾದೇಶ), ಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು ಆಕಾಂಕ್ಷಿಯಾಗಿದ್ದಾರೆ. 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಚುನಾವಣಾ ಕಣದಿಂದ ದೂರ ಸರಿದಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದ ಮಾಳವಿಕಾ ಗುಬ್ಬಿವಾಣಿ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಈ ಬಾರಿ ಮೂರು ಪಕ್ಷಗಳ ನಡುವಿನ ಜಟಾಪಟಿ ಜೋರಾಗುವ ಸಾಧ್ಯತೆ ಇದೆ.