ಸಿದ್ದುಗೆ ಸಡ್ಡು ಹೊಡೆಯಲು ವರುಣಾಕ್ಕೆ ನುಗ್ಗಿಬಂದರೆ ಸದಾನಂದ ಗೌಡರು!
ಮೈಸೂರು, ಜನವರಿ 6 : ಸದಾ ನಗುನಗುತ್ತಾ ಕಾಣಿಸಿಕೊಳ್ಳುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದ ವಿಷಯ ನೆನಪಿದೆಯಾ? ವರುಣಾ ಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರೊಬ್ಬರನ್ನು ನಿಲ್ಲಿಸಿ, ಸಿದ್ದರಾಮಯ್ಯ ಅವರಿಗೆ ಸೋಲುಣಿಸುವುದಾಗಿ ಘೋಷಿಸಿದ್ದರು ಡಿವಿಎಸ್.
ಆದರೆ, ಆ ಸವಾಲು ಕ್ಷಣಿಕಕ್ಕೆ ಬಂದಿದ್ದಲ್ಲ ಎಂಬುದು ಈಗ ಮನದಟ್ಟಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ದಿಢೀರ್ ಭೇಟಿ ನೀಡಿದರು. ಶನಿವಾರ ಬೆಳಗ್ಗೆ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಹದಿನಾರು ಗ್ರಾಮದಲ್ಲಿ ಬಿಜೆಪಿ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಕೇಸರಿ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಯಾವ ರೀತಿ ಕಾಂಗ್ರೆಸ್ ಅನ್ನು ಮಣಿಸಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿವಾಸದಲ್ಲಿ ಸದಾನಂದಗೌಡರು ಮಾತುಕತೆ ನಡೆಸಿದರು.

ಮೈಸೂರು - ಚಾಮರಾಜನಗರ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದ ಮಾಹಿತಿಯನ್ನು ಶ್ರೀನಿವಾಸ್ ಪ್ರಸಾದ್ ನೀಡಿದರು. ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ. ಆದರೆ ಅಲ್ಲಿನ ಬಿಜೆಪಿಯ ಮುಖಂಡರ ಭಿನ್ನಾಭಿಪ್ರಾಯ ಹೆಚ್ಚಿದೆ. ಹೀಗಾಗಿ ಬಿಜೆಪಿ ಅಲ್ಲಿ ಸೋಲು ಕಾಣುತ್ತಿದೆ. ಇನ್ನು ಮೈಸೂರು ಜಿಲ್ಲೆಯಲ್ಲಿ ವರುಣಾ ಮತ್ತು ನಂಜನಗೂಡಿನಲ್ಲಿ ಬಿಜೆಪಿಗೆ ಗೆಲುವು ಖಂಡಿತಾ ಸಿಗಲಿದೆ ಎಂದರು.
ಅದರಲ್ಲೂ ವರುಣಾದಲ್ಲಿ ಬಿಜೆಪಿಯ ಜಿ.ಪಂ, ತಾ.ಪಂ ಸದಸ್ಯರೇ ಹೆಚ್ಚಿದ್ದಾರೆ. ಅಲ್ಲಿ ನಾವು ಗೆಲುವಿನ ಗಡಿ ದಾಟಬಹುದು. ಆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ದಲಿತರ ಮತಗಳನ್ನು ಪಡೆಯುತ್ತಿದ್ದು, ಗೆಲುವು ಲೀಡ್ ನಲ್ಲಿ ಮುಂದುವರಿಯುತ್ತಿತ್ತು. ಆದರೆ ಇದೀಗ ಆ ಮತಗಳನ್ನು ವಿಭಜನೆ ಮಾಡಿ ಅಷ್ಟೊಂದು ಶೇಕಡವಾರು ಮತಗಳು ಹೋಗುವುದಕ್ಕೆ ನಾನು ಬಿಡುವುದಿಲ್ಲ ಎಂದರು.
ಹೀಗಾಗಿ ಕ್ಷೇತ್ರದ ದಲಿತ ಮುಖಂಡರನ್ನು ನಿರಂತರವಾಗಿ ಭೇಟಿ ಮಾಡುತ್ತಿದ್ದೇನೆ. ಅಪ್ಪ - ಮಕ್ಕಳನ್ನು ಸೋಲಿಸುವುದೇ ನಮ್ಮ ಗುರಿಯಾಗಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ಮೈಸೂರು ಭಾಗದ ಚುನಾವಣಾ ಸಮೀಕ್ಷೆಯನ್ನು ಡಿವಿಎಸ್ ಗೆ ತಿಳಿಸಿದರು. ಉಭಯ ನಾಯಕರು ಸುಮಾರು ಒಂದು ತಾಸುಗಿಂತ ಹೆಚ್ಚು ಕಾಲ ಚರ್ಚೆ ನಡೆಸಿದರು.












Click it and Unblock the Notifications