ಮೈಸೂರಿನಲ್ಲಿ ವಿಶೇಷವಾಗಿ ಹೊಸ ವರ್ಷ ಆಚರಿಸಿದ ಸಿಸಿ ಪಾಟೀಲ್
ಮೈಸೂರು, ಜನವರಿ 01: ಅರಣ್ಯ ಸಚಿವ ಸಿ.ಸಿ.ಪಾಟೀಲ್ ಇಂದು ಮೈಸೂರಿನಲ್ಲಿ ವಿಶೇಷವಾಗಿ ಹೊಸ ವರ್ಷವನ್ನು ಆಚರಿಸಿದರು. ಮೊದಲು ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಅಸ್ಸಾಂನಿಂದ ಬಂದಿದ್ದ ಎರಡು ಹೂಲಾಕ್ ಗಿಬ್ಬನ್ ಗಳನ್ನು ಸಾರ್ವಜನಿಕ ವೀಕ್ಷಣೆಗೆ ಚಾಲನೆ ನೀಡಿದರು.
ಮೈಸೂರಿನ ಶಾರದಾದೇವಿ ನಗರದಲ್ಲಿರುವ ಕರುಣಾಮಯಿ ಫೌಂಡೇಶನ್ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ ಸಚಿವ ಸಿಸಿ ಪಾಟೀಲ್ ಅವರು ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಿಸಿದರು. "ವಿಶೇಷ ಮಕ್ಕಳೊಂದಿಗೆ ಹೊಸ ವರ್ಷ ಸಂಭ್ರಮಿಸಿದ್ದು ವಿಶೇಷ ಅನುಭವ. ಮಕ್ಕಳ ಜೊತೆ ಸಮಯ ಕಳೆದಿದ್ದು ಸಂತಸ ತಂದಿದೆ. ಈ ಮಕ್ಕಳ ಶಾಲೆಗೆ ಹೆಚ್ಚಿನ ಅನುದಾನ ಕೊಡಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ" ಎಂದು ಭರವಸೆ ನೀಡಿದರು.
ಕಳೆದ ವರ್ಷ ಬಂಡೀಪುರದಲ್ಲಿ ಬೆಂಕಿ ಅವಘಡ ಸಂಭವಿಸಿದ ವಿಚಾರವಾಗಿ ಮಾಹಿತಿ ಹಂಚಿಕೊಂಡ ಅವರು, "ಈ ಬಾರಿ ಮುಂಜಾಗ್ರತಾ ಕ್ರಮವಾಗಿ ವಿಶೇಷ ಸೇನಾ ಹೆಲಿಕಾಪ್ಟರ್ ಬಳಸಲು ಚಿಂತಿಸಲಾಗಿದೆ. ಇದಕ್ಕೆ ಹೆಚ್ಚು ಹಣ ಖರ್ಚಾಗಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ಬಾರಿ ಬೆಂಕಿ ರೇಖೆ ನಿರ್ಮಾಣವಾಗದೆ ಅವಘಡ ಸಂಭವಿಸಿತ್ತು. ಆದರೆ ಈ ಬಾರಿ ಸಂಪೂರ್ಣ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ" ಎಂದರು.

ಮಾನವ ಮತ್ತು ವನ್ಯಜೀವಿ ಸಂಘರ್ಷದ ಕುರಿತು ಮಾತನಾಡಿ, "ವನ್ಯಪ್ರಾಣಿಗಳಿಂದ ಆಗುತ್ತಿರುವ ಅವಘಡಗಳನ್ನು ತಪ್ಪಿಸಲು 100 ಕೋಟಿ ವೆಚ್ಚದಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಆನೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ರೈಲ್ವೆ ಕಂಬಿಗಳು, ಸೋಲಾರ್ ಬೇಲಿಗಳು ಹಾಗೂ ಕಂದಕಗಳ ಮೂಲಕ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವ ಕಡೆ ರೂಪಿಸಲಾಗುತ್ತದೆ. ನಂತರ ಉಳಿದ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ" ಎಂದು ಮಾಹಿತಿ ನೀಡಿದರು.












Click it and Unblock the Notifications