ಮೈಸೂರು – ಕೊಡಗು ಕೈ ಅಭ್ಯರ್ಥಿ ಹುಡುಕಾಟಕ್ಕಾಗಿ ಶುರುವಾಯ್ತು ಜಾತಿ ಲೆಕ್ಕಾಚಾರ
ಮೈಸೂರು, ಮಾರ್ಚ್ 15: ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೈತ್ರಿ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕೆಂಬ ಜಾತಿ ಲೆಕ್ಕಾಚಾರ ಈಗಾಗಲೇ ಶುರುವಿಟ್ಟುಕೊಂಡಿದೆ.
ಮೈಸೂರು ಭಾಗದ ಹಲವೆಡೆ ಪ್ರಮುಖವಾಗಿ ಜಾತಿ ಲೆಕ್ಕಾಚಾರ ಮುನ್ನೆಲೆಗೆ ಬಂದಿದೆ. ಆದ್ದರಿಂದ ಟಿಕೆಟ್ ಹಂಚಿಕೆಯಲ್ಲಿ ಇದೇ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಈ ಭಾಗದಲ್ಲಿ ಕುರುಬರ ಹಾಗೂ ಒಕ್ಕಲಿಗರ ಮತಗಳು ವಿಭಜನೆಗೊಂಡಿದ್ದವು. ಅದಕ್ಕೆ ಕಾರಣ ಸಿದ್ದರಾಮಯ್ಯ ಅವರ ನಿಲುವು.
ಈ ಭಾಗದಲ್ಲಿ ಅವರು ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್ ಮೇಲೆ ವಾಗ್ದಾಳಿ ನಡೆಸುತ್ತಾ ಪ್ರಚಾರ ಕೈಗೊಂಡಿದ್ದರು. ಪರಿಣಾಮವೇನಾಯಿತು ಎಂಬುದಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಫಲಿತಾಂಶವೇ ಸಾಕ್ಷಿ. ಆದರೆ, ಈಗ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಗಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರ ಸ್ಥಾನದಲ್ಲಿ ಲಿಂಗಾಯತ, ಕುರುಬ ಸಮುದಾಯದವರು ಇದ್ದಾರೆ. ಹಾಲಿ ಸಂಸದ ಒಕ್ಕಲಿಗ ಸಮುದಾಯದ ಪ್ರತಾಪಸಿಂಹ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಹೀಗಾಗಿ, ಯಾವ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬ ತಲೆನೋವು ಕಾಂಗ್ರೆಸ್ ವರಿಷ್ಠರಿಗೆ ಶುರುವಾಗಿದೆ. ಈ ಕ್ಷೇತ್ರಕ್ಕೆ ನಾಲ್ವರ ಹೆಸರನ್ನು ಕೆಪಿಸಿಸಿ ಪರಿಶೀಲನಾ ಸಮಿತಿಯು ಎಐಸಿಸಿಗೆ ನೀಡಿದೆ.
ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೆಸರು ಪಟ್ಟಿಯಲ್ಲಿದೆ.

2 ಬಾರಿ ಸಂಸದರಾಗಿದ್ದ ವಿಜಯ ಶಂಕರ್
ಕುರುಬ ಸಮುದಾಯದ ವಿಜಯ ಶಂಕರ್ ಎರಡು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿದ್ದವರು. ಒಮ್ಮೆ ಮಾತ್ರ ಸೋಲು ಕಂಡಿದ್ದಾರೆ. ಬಿಜೆಪಿಯಲ್ಲಿದ್ದ ಅವರನ್ನು ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಿಯೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಕರೆತಂದಿದ್ದರು. ಜೆಡಿಎಸ್, ಬಿಜೆಪಿ, ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಅವರ ನಡುವಿನ ಮತಗಳನ್ನು ವಿಭಜಿಸಬಹುದು ಎಂಬುದು ಅವರ ಆಗಿನ ಲೆಕ್ಕಾಚಾರವಾಗಿತ್ತು.

ಪಟ್ಟು ಹಿಡಿದ ಸಿದ್ದರಾಮಯ್ಯ
ಈಗಿನ ವಿದ್ಯಮಾನವೇ ಬೇರೆ. ಕಾಂಗ್ರೆಸ್- ಜೆಡಿಎಸ್ ಒಂದುಗೂಡಿವೆ. ಮೂಲಗಳ ಪ್ರಕಾರ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಟಿಕೆಟ್ ಕೇಳಲು ಹೋದ ಬೇರೆ ಸಮುದಾಯದ ಅಭ್ಯರ್ಥಿಗಳಿಗೆ ಇದೇ ಮಾತು ಹೇಳಿ ಕಳಿಸಿದ್ದಾರೆ. ಪಟ್ಟಿಯಲ್ಲಿರುವ ಇನ್ನಿಬ್ಬರಾದ ಸೂರಜ್, ಹಿಂದುಳಿದ ವರ್ಗ. ಬ್ರಿಜೇಶ್ ಅವರು ಕೊಡವ ಸಮುದಾಯಕ್ಕೆ ಸೇರಿದವರು.

ಕೈ ಮುಖಂಡರ ವಿಶ್ಲೇಷಣೆ
ಒಕ್ಕಲಿಗ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುವುದು ಬಹುತೇಕ ಖಚಿತ. ಆಕಸ್ಮಾತ್ ನಮ್ಮ ಪಕ್ಷವು ಕುರುಬ ಸಮುದಾಯದವರನ್ನು ಕಣಕ್ಕಿಳಿಸಿದರೆ ಒಕ್ಕಲಿಗರ ಮತಗಳು ಧ್ರುವೀಕರಣಗೊಂಡು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಕ್ಷೇತ್ರಗಳು ಯಾವ ಸಮುದಾಯದ ಅಭ್ಯರ್ಥಿಗಳ ಪಾಲಾಗಲಿವೆ ಎಂಬುದರ ಮೇಲೆ ಮೈಸೂರು ಕ್ಷೇತ್ರ ನಿಂತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ವಿಶ್ಲೇಷಿಸುತ್ತಾರೆ.

ಕಳೆದ ಬಾರಿ ಜೆಡಿಎಸ್ ಗೆ 3ನೇ ಸ್ಥಾನ
2014ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ಕುರುಬ ಸಮುದಾಯದ ಎಚ್.ವಿಶ್ವನಾಥ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಪ್ರತಾಪ ಸಿಂಹ ಗೆಲುವು ಸಾಧಿಸಿದ್ದರು. ಮೂರನೇ ಸ್ಥಾನ ಜೆಡಿಎಸ್ ಪಾಲಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನಿಂದ ಹತಾಶರಾಗಿದ್ದ ಅವರು ಈ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆ ಹಾಗೂ ಸವಾಲಾಗಿ ಸ್ವೀಕರಿಸಿದ್ದರು. ಅಷ್ಟೇ ಅಲ್ಲ, ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಈ ಕ್ಷೇತ್ರವನ್ನು ಕಾಂಗ್ರೆಸ್ಗೆ ಒಲಿಸಿಕೊಳ್ಳುವುದಾಗಿ ಕಾರ್ಯಕರ್ತರ ಸಭೆಯಲ್ಲಿ ಭರವಸೆ ನೀಡಿದ್ದರು.












Click it and Unblock the Notifications