ಚುನಾವಣೆ ನಂತರ ಮೈಸೂರಿನಲ್ಲಿ ಎಲ್ಲೆಲ್ಲೂ ಸೋಲು ಗೆಲುವಿನದ್ದೇ ಮಾತು
ಮೈಸೂರು, ಏಪ್ರಿಲ್ 24: ಬಸ್, ರೈಲು, ಆಟೋ, ಮಾರ್ಕೆಟ್ ಎಲ್ಲೆಡೆ ನೋಡಿದರೂ ರಾಜಕೀಯ ಸೋಲು -ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಮಳೆ ನಿಂತರೂ ಮರದ ಹನಿಗಳು ನಿಲ್ಲಲಿಲ್ಲ ಎಂಬಂತೆ ಲೋಕಸಭೆ ಚುನಾವಣೆ ಮೈಸೂರಿನಲ್ಲಿ ಮುಗಿದು 6 ದಿನಗಳು ಕಳೆದರೂ ಜನರು ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಿಲ್ಲ.
ಎಲ್ಲೆಡೆ ನಾಲ್ಕು ಜನ ಸೇರಿದರೂ ಚುನಾವಣೆಯದೇ ಮಾತು. ಮತದಾನ ಹೇಗೆ ನಡೆದಿದೆ? ಯಾರ ಪರವಾಗಿ ಅಧಿಕ ಮತಗಳು ಚಲಾವಣೆಯಾಗಿವೆ? ಯಾರು ಗೆಲ್ಲಬಹುದು? ಎಂಬ ಪ್ರಶ್ನೆಗಳು ಎಲ್ಲೆಡೆ ಗರಿಗೆದರುತ್ತಿವೆ.
ಹೌದು, ಚುನಾವಣೆ ಮುಗಿದು ವಾರ ಸಮೀಪಿಸಿದೆ. ಫಲಿತಾಂಶಕ್ಕೆ ಒಂದು ತಿಂಗಳು ಕಾಯಬೇಕಾಗಿದೆ. ಚುನಾವಣಾ ಪ್ರಚಾರದಿಂದ ವಿಶ್ರಾಂತಿ ಪಡೆಯುತ್ತಿರುವ ಮರಿ ನಾಯಕರು ಇದೀಗ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮೈಸೂರು- ಕೊಡಗು ಕ್ಷೇತ್ರದಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆ.
ಸಚಿವ ಜಿಟಿ ದೇವೇಗೌಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಅವರಿಗೆ ಬೆಂಬಲ ನೀಡಿದರೆ, ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರ ಪ್ರೋತ್ಸಾಹದೊಂದಿಗೆ ಕಳೆದೆರಡು ತಿಂಗಳಿನಿಂದ ಮತಬೇಟೆ ನಡೆಸುತ್ತಿದ್ದರು. ಹೀಗಾಗಿ, ಫಲಿತಾಂಶ ಹುರಿಯಾಳುಗಿಂತಲೂ ಈ ಇಬ್ಬರೂ ನಾಯಕರಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಬಿಜೆಪಿಗೆ ಹೆಚ್ಚಿನ ಮತಗಳು ಬರಬಹುದು!
ಜಿಟಿ ದೇವೇಗೌಡ ಅವರ ಎದುರಾಳಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿರುವ ಮಾಜಿ ಸಿಎಂ ಸಿದ್ದರಾಯ್ಯ ಅವರು ಈ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜತೆಗೆ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದರು. ಬಿಜೆಪಿ ಅಭ್ಯರ್ಥಿಗಂತೂ ಇಡೀ ಬಿಜೆಪಿ ಮುಖಂಡರೇ ಕ್ಷೇತ್ರಕ್ಕೆ ದಾಂಗುಡಿ ಇಟ್ಟಿದ್ದರು.ಪ್ರಧಾನಿ ನರೇಂದ್ರ ಮೋದಿ ಅಲೆ, ಮುನಿಯಪ್ಪ ಅವರ ವಿರೋಧಿ ಅಲೆಯಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಮತಗಳು ಧ್ರುವೀಕರಣಗೊಂಡಿವೆ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳ ಮತಗಳು ಬಿಜೆಪಿ ಅಭ್ಯರ್ಥಿಗೆ ಬಿದ್ದಿವೆ. ಯುವ ಮತದಾರರಲ್ಲಿ ಹೆಚ್ಚಾಗಿ ಬಿಜೆಪಿ ಕಡೆಗೆ ಒಲುವು ಕಂಡುಬಂದಿದೆ. ಹೀಗಾಗಿ ಈ ಬಾರಿ ಬಿಜೆಪಿಗೆ ಹೆಚ್ಚಿನ ಮತಗಳು ಬರಲಿವೆ ಎಂಬ ರಾಜಕೀಯ ಲೆಕ್ಕಾಚಾರಗಳು ಎಲ್ಲೆಡೆ ಹರಿದಾಡುತ್ತಿವೆ.

ಸ್ಪಷ್ಟವಾಗಿ ಗೋಚರವಾಗಲಿದೆ ಚಿತ್ರಣ
ಇನ್ನು ಕುರುಬರ ಮತಗಳು ವಿಜಯ್ ಶಂಕರ್ ಗೆ ದಕ್ಕಿದೆ. ಅಲ್ಲದೆ ಅವರಿಗೆ ಜೆಡಿಎಸ್ ವೋಟುಗಳು ಬೀಳುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಫಲಿತಾಂಶ ಘೋಷಣೆಯಾದ ಬಳಿಕವಷ್ಟೇ ಮತದಾರನ ಒಲವಿನ ಚಿತ್ರಣ ಸ್ಪಷ್ಟವಾಗಿ ಗೋಚರವಾಗಲಿದೆ.

ಕೆಲವೊಂದು ಕಡೆ ಕೆಲವು ತರ ಬೆಟ್ಟಿಂಗ್
ಮತದಾನ ಮುಗಿದ ಬಳಿಕ ಬೆಟ್ಟಿಂಗ್ ಭರಾಟೆ ಜಿಲ್ಲೆಯಲ್ಲಿ ಜೋರಾಗಿ ನಡೆಯಲಾರಂಭಿಸಿದೆ. ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬೆಟ್ಟಿಂಗ್ ಗರಿಗೆದರುತ್ತಿದೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಬೆಟ್ಟಿಂಗ್ ಹೆಚ್ಚಾಗಿ ನಡೆಯುತ್ತಿಲ್ಲ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧ್ಯವೇ ಬಹುತೇಕ ಎಲ್ಲಾ ಬೆಟ್ಟಿಂಗ್ ಗಳೂ ಕೇಂದ್ರೀಕೃತವಾಗಿವೆ. ಕೆಲವೊಂದು ಕಡೆ ಬಿಜೆಪಿ ಪರವಾಗಿ, ಮತ್ತೆ ಕೆಲವೊಂದು ಕಡೆ ಮೈತ್ರಿಕೂಟದ ಪರವಾಗಿ ಬೆಟ್ಟಿಂಗ್ ನಡೆಯುತ್ತಿದೆ.

ಶೇ.10ರಷ್ಟು ಕಮಿಷನ್ ಮಧ್ಯವರ್ತಿಗೆ
ಹಣದ ಬೆಟ್ಟಿಂಗ್ ವ್ಯಾಪಕವಾಗಿದೆ. ಶೇ 10ರಷ್ಟು ಕಮಿಷನ್ ಮಧ್ಯವರ್ತಿಗೆ ಸಿಗುತ್ತದೆ. ಮಧ್ಯವರ್ತಿಗೆ ಹೆಚ್ಚಿನ ಲಾಭ ಇರುವುದರಿಂದ ಬೆಟ್ಟಿಂಗ್ ಗೆ ಇವರೇ ಹೆಚ್ಚು ಪ್ರಚೋದನೆ ನೀಡುತ್ತಿದ್ದಾರೆ. ಫಲಿತಾಂಶ ಬಂದಾಗ ಗೆದ್ದವರಿಗೆ ಶೇ 10ರಷ್ಟು ಕಮಿಷನ್ ತೆಗೆದುಕೊಂಡು ಉಳಿದ ಹಣ ನೀಡುತ್ತಾರೆ. ಈ ಜಾಲವು ಮಾಫಿಯಾದ ಹಾಗೆ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬಿಟ್ಟರೆ ಸ್ಥಳೀಯವಾಗಿಯೂ ಅಲ್ಲಲ್ಲಿ ಬೆಟ್ಟಿಂಗ್ ನಡೆಯುತ್ತಿವೆ. ಬೈಕ್ ಗಳನ್ನು, ದನಕರುಗಳನ್ನು ಪಣಕ್ಕೆ ಒಡ್ಡುತ್ತಿದ್ದಾರೆ.












Click it and Unblock the Notifications