ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿದ್ದರಾಮಯ್ಯ
ಮೈಸೂರು, ಮೇ 09 : ಅಕ್ಷಯ ತದಿಗೆ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟರು. ' ಮೇ ತಿಂಗಳ ಅಂತ್ಯದೊಳಗೆ ಸಂಪುಟ ಪುನಾರಚನೆ ಮಾಡುತ್ತೇವೆ ' ಎಂದು ಹೇಳಿದರು.
ಸೋಮವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಶೀಘ್ರವೇ ಸಂಪುಟ ಪುನಾರಚನೆ ಮಾಡುತ್ತೇವೆ. ಈ ವೇಳೆ ಕೆಲವು ಸಚಿವರನ್ನು ಕೈ ಬಿಟ್ಟು, ಹೊಸಬರಿಗೆ ಅವಕಾಶ ನೀಡುತ್ತೇವೆ' ಎಂದರು. [ಸಚಿವ ಸ್ಥಾನ ಬೇಕಾದರೆ ಮುಂಗಾರು ಮಳೆ ಬರಬೇಕು!]

'ಮೂರು ವರ್ಷಗಳ ಆಡಳಿತ ತೃಪ್ತಿ ತಂದಿದೆ' ಎಂದು ಹೇಳಿ ಸಿದ್ದರಾಮಯ್ಯ ಅವರು, 'ನಮ್ಮ ಸರ್ಕಾರದ ವಿರುದ್ಧ ಯಾವುದೇ ಗುರುತರ ಆರೋಪಗಳಿಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಆರೋಪ ಮಾಡಲಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಜೊತೆ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ' ಎಂದು ಹೇಳಿದರು. [ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ]
ಮೂರು ತಿಂಗಳು ವಿಸ್ತರಣೆ : ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಹೈಕಮಾಂಡ್ ಸೂಚನೆಯಂತೆ ನಿಗಮ ಮಂಡಳಿ ಅಧ್ಯಕ್ಷರ ಅವಧಿಯನ್ನು 3 ತಿಂಗಳು ವಿಸ್ತರಿಸಲಾಗಿದೆ. 3 ತಿಂಗಳ ಬಳಿಕ ಹೊಸಬರಿಗೆ ಅವಕಾಶ ನೀಡುತ್ತೇವೆ' ಎಂದರು. ['ಯುಗಾದಿ ಬಳಿಕ ಹೊಸ ಖುರ್ಚಿ, ಹೊಸ ಮಂತ್ರಿ ನೋಡೋಣ']
ಮಳೆ ಬರಲಿ ಎಂದು ಹೇಳಿದ್ದರು : ಏಪ್ರಿಲ್ 22 ರಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ರಾಜ್ಯದಲ್ಲಿನ ಭೀಕರ ಬರಗಾಲದ ಪರಿಸ್ಥಿತಿ ಹಿನ್ನಲೆಯಲ್ಲಿ ಬಹು ನಿರೀಕ್ಷಿತ ಸಂಪುಟ ಪುನಾರಚನೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಚಿಂತನೆ ನಡೆಸಲಾಗುತ್ತದೆ' ಎಂದು ಹೇಳಿದ್ದರು.
'ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬರ ಪರಿಹಾರ ಕಾರ್ಯಕ್ಕೆ ಈಗ ಆದ್ಯತೆ ನೀಡಬೇಕಾಗಿದೆ. ತಾವು ಸಂಪುಟ ಸೇರಬೇಕೆಂಬ ಹಿನ್ನಲೆಯಲ್ಲಿ ಶಾಸಕರು ಒತ್ತಡ ಹೇರುತ್ತಿರಬಹುದು. ಆದರೆ, ಸಂಪುಟ ಪುನಾರಚನೆಗೆ ಇದು ಸಕಾಲವಲ್ಲ ಎಂದು' ಮುಖ್ಯಮಂತ್ರಿಗಳು ತಿಳಿಸಿದ್ದರು.












Click it and Unblock the Notifications