ಹುಣಸೂರು ಚುನಾವಣಾ ಚಿತ್ರಣ; ವಿಶ್ವನಾಥ್ ಎಲ್ಲರ ಟಾರ್ಗೆಟ್!
ಮೈಸೂರು, ನವೆಂಬರ್ 29 : ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಗಳನ್ನು ಕೊಟ್ಟ ಕ್ಷೇತ್ರ ಹುಣಸೂರು. ಲಕ್ಷ್ಮಣತೀರ್ಥ ನದಿಯ ತಟದಲ್ಲಿ ಹರಡಿಕೊಂಡಿರುವ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಟಾರ್ಗೆಟ್ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್.
2018ರ ಚುನಾವಣೆಯಲ್ಲಿ ಗೆದ್ದ ಬಳಿಕ ಎಚ್. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿದ್ದರು. ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಮೂಲ ಕಾರಣರು.
ಮೈಸೂರು ಜಿಲ್ಲೆಯಿಂದ ಹುಣಸೂರು ವಿಭಾಗಿಸಿ ಪ್ರತ್ಯೇಕ ಜಿಲ್ಲೆ ಮಾಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಎಚ್. ವಿಶ್ವನಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮಾನವಾಗಿ ವಿಶ್ವನಾಥ್ ದ್ವೇಷಿಸುತ್ತಿದ್ದು, ಉಪ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಹುಣಸೂರು ಉಪ ಚುನಾವಣೆ; ಬಿಜೆಪಿಯ ಅಚ್ಚರಿಯ ನಡೆ!
ಸಿದ್ದರಾಮಯ್ಯ ತಮ್ಮ ಗರಡಿಯಲ್ಲಿ ರಾಜಕೀಯಕ್ಕೆ ಬಂದ ಮಾಜಿ ಶಾಸಕ ಎಚ್. ಪಿ. ಮಂಜುನಾಥ್ ಕಣಕ್ಕಿಳಿಸಿದ್ದಾರೆ. ಜೆಡಿಎಸ್ನಿಂದ ದೇವರಹಳ್ಳಿ ಸೋಮಶೇಖರ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದ್ದು ಮತದಾರ ಯಾರ ಕೈ ಹಿಡಿಯಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹುಣಸೂರು ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅಂತಿಮ?
ಎಚ್. ವಿಶ್ವನಾಥ್ ಬಿಜೆಪಿ ಅಭ್ಯರ್ಥಿ
ಎಚ್. ವಿಶ್ವನಾಥ್ ಉಪ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು. ವಿಧಾನ ಪರಿಷತ್ ಸದಸ್ಯರಾಗುವ ಮೂಲಕ ಯಡಿಯೂರಪ್ಪ ಸಂಪುಟ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ವಿಶ್ವನಾಥ್ ಅಖಾಡಕ್ಕೆ ಇಳಿದಿದ್ದಾರೆ. ಕೊನೆಯ ಚುನಾವಣೆ ಎಂದು ಮತ ಕೇಳುತ್ತಿದ್ದಾರೆ.
ಎಚ್. ಪಿ. ಮಂಜುನಾಥ್
2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಚ್. ಪಿ. ಮಂಜುನಾಥ್ 8575 ಮತಗಳ ಅಂತದಲ್ಲಿ ಎಚ್. ವಿಶ್ವನಾಥ್ ವಿರುದ್ಧ ಸೋತಿದ್ದರು. ಎರಡು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಮಂಜುನಾಥ್ ಈ ಬಾರಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಸಿದ್ದರಾಮಯ್ಯ ಹೆಸರಿನ ಬಲ, ವಿಶ್ವನಾಥ್ ವಿರುದ್ಧ ಇರುವ ಒಕ್ಕಲಿಗರ ಮುನಿಸು ಮಂಜುನಾಥ್ 'ಕೈ' ಹಿಡಿದರೆ ಗೆಲುವು ಸುಲಭವಾಗಲಿದೆ.
ಜೆಡಿಎಸ್ ಕ್ಷೇತ್ರ ಉಳಿಸಿಕೊಳ್ಳಲಿದೆಯೇ?
ಹುಣಸೂರು ಕ್ಷೇತ್ರವನ್ನು ಜೆಡಿಎಸ್ 2018ರಲ್ಲಿ ಗೆದ್ದುಕೊಂಡಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉಪ ಚುನಾವಣೆ ಎದುರಾಗಿದೆ. ದೇವೇಗೌಡರ ಕುಟುಂಬ ಸದಸ್ಯರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಂತಿಮವಾಗಿ ದೇವರಹಳ್ಳಿ ಸೋಮಶೇಖರ್ ಎಂಬ ಉದ್ಯಮಿಗೆ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿದೆ. ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ಶತಪ್ರಯತ್ನ ಮಾಡುತ್ತಿದೆ. ಎಚ್. ಡಿ. ಕುಮಾರಸ್ವಾಮಿ ವರ್ಚಸ್ಸು ಜೆಡಿಎಸ್ ಪ್ಲಸ್ ಪಾಯಿಂಟ್.
ಜಾತಿವಾರು ಲೆಕ್ಕಾಚಾರಗಳು
ಹುಣಸೂರು ಕ್ಷೇತ್ರದಲ್ಲಿ ಒಕ್ಕಲಿಗರು 45 ಸಾವಿರ, ಪರಿಶಿಷ್ಟ ಜಾತಿ 50 ಸಾವಿರ, ಪರಿಶಿಷ್ಟ ಪಂಗಡ 30 ಸಾವಿರ, ಕುರುಬ 30 ಸಾವಿರ ಮತದಾರರು ಇದ್ದಾರೆ. ಎಚ್. ವಿಶ್ವನಾಥ್ ಕುರುಬ ಸಮುದಾಯಕ್ಕೆ ಸೇರಿದವರು. ಜಾತಿ ಲೆಕ್ಕಾಚಾರ ಚುನಾವಣೆಯಲ್ಲಿ ಹೇಗೆ ಪರಿಣಾಮ ಬೀರದಲಿದೆ? ಎಂದು ಕಾದು ನೋಡಬೇಕಿದೆ.