ಧರ್ಮದ ಆಧಾರದಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಿಲ್ಲ: ಪ್ರತಾಪ್ ಸಿಂಹ ಹೇಳಿಕೆಗೆ ರಾಮದಾಸ್ ಸ್ಪಷ್ಟನೆ
ಮೈಸೂರು, ನವೆಂಬರ್, 15: ಬಸ್ ನಿಲ್ದಾಣ ಗುಂಬಜ್ ರೀತಿ ಇದೆ. ಅದನ್ನು ಒಡೆಯುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಇದೀಗ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ನೀಡಿದ್ದು, ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ನಗರ ಪ್ರದೇಶಗಳಲ್ಲಿ, ಅಭಿವೃದ್ಧಿ ಕಾರ್ಯ ನಿರಂತರ ನಡೆಯುತ್ತವೆ. ಈ ನಿಟ್ಟಿನಲ್ಲಿ ಹಲವಾರು ಸ್ಥಳಗಳಲ್ಲಿ ಬಸ್ ತಂಗುದಾಣದ ಅವಶ್ಯಕತೆಯಿದೆ. ಆದ್ದರಿಂದ ಶಾಸಕರ ನಿಧಿಯಿಂದ ವಿವಿಧ ವಿನ್ಯಾಸಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ ನಿಲ್ದಾಣದ ಬಗ್ಗೆ ರಾಮದಾಸ್ ಸ್ಪಷ್ಟನೆ
ಮಾಧ್ಯಮಗಳ ಮೂಲಕ ಬಸ್ ತಂಗುದಾಣಕ್ಕೆ ಸಂಬಂಧಿಸಿದಂತೆ ಸುದ್ದಿಯನ್ನು ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಬಸ್ ತಂಗುದಾಣಕ್ಕೆ ಸಂಬಂಧಿಸಿದಂತೆ ನಿಜವಾದ ಅಂಶಗಳ ಮಾಹಿತಿಯನ್ನು ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಪಾರಂಪರಿಕ ನಗರಿ ಆಗಿದೆ. ಇದರ ಮಹತ್ವವನ್ನು ಸಾರುವ ದೃಷ್ಠಿಯಲ್ಲಿ ಬಸ್ ತಂಗುದಾಣಗಳನ್ನು ಅರಮನೆ ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಿದ್ದೆವು.
ಬಸ್ ನಿಲ್ದಾಣದ ಮೇಲಿನ ಗುಂಬಜ್ ಒಡೆಯಲು ಪ್ರತಾಪ ಸಿಂಹ ಯಾರು: ಸಿದ್ದರಾಮಯ್ಯ ಕಿಡಿ
ವಿವಿಧ ವಿನ್ಯಾಸಗಳಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬಸ್ ತಾಂಗುದಾಣಗಳನ್ನು ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಶೇಕಡಾ 60ರಷ್ಟು ಕಾಮಗಾರಿ ಮುಕ್ತಾಯ
ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ (ಊಟಿ ರಸ್ತೆ) ವಾರ್ಡ್ ನಂ 54ರ ವ್ಯಾಪ್ತಿಗೆ ಬರುವ ಬಸ್ ತಂಗುದಾಣವನ್ನು ಅರಮನೆ ಮಾದರಿಯಲ್ಲಿ ವಿನ್ಯಾಸ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಶೇಕಡಾ 60ರಷ್ಟು ಕಾಮಗಾರಿ ಮುಗಿಸಲಾಗಿದ್ದು, ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. ಮೈಸೂರಿನ ಪಾರಂಪರಿಕತೆಯನ್ನು ತೋರಿಸುವ ದೃಷ್ಟಿಯಲ್ಲಿ ಅರಮನೆಯ ಮಾದರಿಯ ಬಸ್ ತಂಗುದಾಣವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮಸೀದಿ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಈ ಕಾಮಗಾರಿಯ ಗುತ್ತಿಗೆಗಾರ ಒಬ್ಬ ಮುಸ್ಲಿಂ ಆಗಿದ್ದಾನೆ. ಇವನು ಮಸೀದಿ ರೀತಿಯಲ್ಲಿ ಕಾಮಗಾರಿ ಮಾಡಿರುತ್ತಾನೆ ಎಂದು ಹಬ್ಬಿಸುವ ಹುನ್ನಾರ ನಡೆದಿದೆ. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ಮೈಸೂರು ನಗರದ ಪೊಲೀಸ್ ಕಮಿಷನರ್ ಅವರಿಗೆ ಪತ್ರದ ಮೂಲಕ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ.
ವಿವಿಧ ವಿನ್ಯಾಸದೊಂದಿಗೆ ತಂಗುದಾಣ ನಿರ್ಮಾಣ
ಮೈಸೂರಿನಲ್ಲಿ ಈಗಾಗಲೇ ಹಲವಾರು ಸ್ಥಳಗಳಲ್ಲಿ ಇದೇ ಮಾದರಿಯ ಬಸ್ ತಂಗುದಾಣಗಳಿವೆ. ಅದರ ವಿನ್ಯಾಸದ ಆಧಾರದ ಮೇಲೆ ನಮ್ಮ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸದೊಂದಿಗೆ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು. ಬಸ್ ತಂಗುದಾಣದ ಕಾಮಗಾರಿಯನ್ನು ಗುತ್ತಿಗೆದಾರನಾದ ಮಹದೇವ್ ಅವರು ನಿರ್ಮಿಸುತ್ತಿದ್ದಾರೆ.
ಕಾಮಗಾರಿ ಪ್ರಗತಿಯಲ್ಲಿದ್ದು, ತಂಗುದಾಣದ ಒಳಗೆ ಎಲ್.ಇ.ಡಿ ಸ್ಕ್ರೀನ್ ಕೂಡ ಅಳವಡಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳೊಂದಿಗೆ ವಿಶೇಷವಾಗಿ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. ಪ್ರಸ್ತುತ ಕಾಮಗಾರಿಯಲ್ಲಿ ಕೇವಲ ಶೇಕಡಾ 60ರಷ್ಟು ಮಾತ್ರ ಮುಗಿದಿದ್ದು, ಹಂತಹಂತವಾಗಿ ಕಾಮಗಾರಿ ನಡೆಯುತ್ತಿದೆ. ಕೆಲವು ಮಾಧ್ಯಮಗಳಲ್ಲಿ ಮಾನ್ಯ ಸಂಸದರು ಹೇಳಿಕೆ ನೀಡಿದ ನಂತರ ರಾತ್ರೋರಾತ್ರಿ ಕಳಶ ಅಳವಡಿಸಲಾಗಿದೆ ಎಂದು ಬಂದಿದೆ. ಆದರೆ ವಾಸ್ತವಾಂಶ ಎಂದರೆ ಕಳೆದ ವಾರವೇ ಇದನ್ನು ಅಳವಡಿಸಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.