ಮೈಸೂರಿಗೆ ಮಾಯಾವತಿ:ರಾಜ್ಯದಲ್ಲಿ ನಡೆಯಲಿದೆ ಬಿಎಸ್ಪಿಯ ಏಕೈಕ ಸಮಾವೇಶ
ಮೈಸೂರು, ಏಪ್ರಿಲ್ 10:ಮಂಗಳವಾರವಷ್ಟೇ(ಏ.09) ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶ ನಡೆದು ಪ್ರಧಾನಿ ಮೋದಿಯ ಭಾಷಣ ಕೇಳಿದ ಜನರಿಗೆ ಇಂದು ಬಿಎಸ್ಪಿ ಅಧಿನಾಯಕಿ ಮಾಯಾವತಿಯ ಭಾಷಣ ಕೇಳುವ ಸಮಯ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು. ಇಂದು ಬುಧವಾರ ಬಹುಜನ ಸಮಾಜ ಪಾರ್ಟಿ ವರಿಷ್ಠರಾದ ಮಾಯಾವತಿ ಮಧ್ಯಾಹ್ನ 12.30ಕ್ಕೆ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರ ನಡೆಸುವರು.
ಕರ್ನಾಟಕದತ್ತ ದೃಷ್ಟಿ ನೆಟ್ಟಿರುವ ಮಾಯಾವತಿಯ ನಿರೀಕ್ಷೆಗಳೇನು?
ಪ್ರಸಕ್ತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಡೆಯುವ ಬಿಎಸ್ಪಿಯ ಏಕೈಕ ಸಮಾವೇಶ ಇದಾಗಿರುವುದರಿಂದ ಈ ಸಮಾವೇಶ ಮಹತ್ವ ಪಡೆದಿದೆ. ನಗರಕ್ಕೆ ನಿನ್ನೆಯೇ ಬಂದಿರುವ ಅವರು ಹೋಟೆಲ್ನಲ್ಲಿ ತಂಗಿದ್ದು, ಸಮಾವೇಶದಲ್ಲಿ ಭಾಗವಹಿಸಿ ನಂತರ ಸಂಜೆ 4.30ಕ್ಕೆ ಚೆನ್ನೈಗೆ ಹೊರಡಲಿದ್ದಾರೆ.
ಮಂಗಳವಾರ ಬಿಜೆಪಿ ಸಮಾವೇಶ ನಡೆದಿರುವ ವೇದಿಕೆಯಲ್ಲಿಯೇ ಬಿಎಸ್ಪಿ ಸಮಾವೇಶವೂ ನಡೆಯುತ್ತಿರುವುದು ವಿಶೇಷ ಎನಿಸಿದೆ. ಇಡೀ ಮೈದಾನ ಸ್ವಚ್ಛಗೊಳಿಸಲು ಸಮಯ ಬೇಕಾಗಿರುವುದರಿಂದ, ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಲಿರುವುದರಿಂದ 11ಕ್ಕೆ ನಿಗದಿಯಾಗಿದ್ದ ಸಮಾವೇಶ ಮಧ್ಯಾಹ್ನದ ಹೊತ್ತಿಗೆ ಆರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರೈಲಿನಲ್ಲಿಯೇ ಕಾರ್ಯಕರ್ತರನ್ನು ಕರೆದುಕೊಂಡು ಬರಲು ಪಕ್ಷದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಉಳಿದಂತೆ, ಚಾಮರಾಜನಗರದಿಂದ ಸುಮಾರು 45 ಬಸ್ಗಳು ಹಾಗೂ ರೈಲುಗಳಲ್ಲಿ ಕಾರ್ಯಕರ್ತರು ಬರಲಿದ್ದಾರೆ.
ಮುಸ್ಲಿಮರೇ ದಯವಿಟ್ಟು ಕಾಂಗ್ರೆಸ್ಸಿಗೆ ಮತಹಾಕಬೇಡಿ: ಮಾಯಾವತಿ
ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಇಡೀ ವೇದಿಕೆ ಹಾಗೂ ಮೈದಾನ ಕೇಸರಿಮಯವಾಗಿತ್ತು. ಇದೀಗ ಇಂದು ನಡೆಯಲಿರುವ ಸಮಾವೇಶದಲ್ಲಿ ನೀಲಿ ಬಣ್ಣ ರಾರಾಜಿಸಲಿದೆ. ರಾತ್ರಿಯಿಡೀ ವೇದಿಕೆಯ ವಿನ್ಯಾಸ ಬದಲಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಒಂದೇ ಒಂದು ಕೇಸರಿ ಧ್ವಜ ಕಾಣದ ಹಾಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ.
ರಾಜ್ಯದ ಎಲ್ಲಾ 28 ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳು ವೇದಿಕೆ ಮೇಲೆ ಆಸೀನರಾಗಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇವರೊಂದಿಗೆ ಪಕ್ಷದ ವರಿಷ್ಠರಾದ ಮಾಯಾವತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾದ ಸತೀಶ್ ಚಂದ್ರ ಮಿಶ್ರಾ, ಡಾ.ಅಶೋಕಸಿದ್ಧಾರ್ಥ, ಪಕ್ಷದ ರಾಜ್ಯ ಉಸ್ತುವಾರಿ ಎಂ.ಎಲ್. ತೋಮರ್, ಶಾಸಕ ಎನ್.ಮಹೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ.