ಸುಳ್ಳು ದಾಖಲೆ ನೀಡಿ ನಿವೇಶನ ಖರೀದಿಸಿದ ಬಿಎಸ್ ಎನ್ ಎಲ್ ಅಧಿಕಾರಿ
ಮೈಸೂರು, ಡಿಸೆಂಬರ್ 26: ಬಿಎಸ್ ಎನ್ಎಲ್ ಅಧಿಕಾರಿಯೊಬ್ಬರು ಸುಳ್ಳು ಪ್ರಮಾಣ ಪತ್ರ ನೀಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬರೋಬ್ಬರಿ ಮೂರು ನಿವೇಶನಗಳನ್ನು ಪಡೆದಿರುವುದರ ವಿರುದ್ಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಸ್ ಎನ್ಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎನ್.ರಾಮಕೃಷ್ಣ ವಿರುದ್ಧ ಮುಡಾದ ವಿಶೇಷ ತಹಶೀಲ್ದಾರ್ ಆರ್.ಬಿ.ಶಿವಕುಮಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
110 ಕೋಟಿ ರುಪಾಯಿ ಹಗರಣ; ಸಿಬಿಐ ಬಲೆಗೆ ಬಿದ್ದ ಕಟ್ಟರ್
ಮುಡಾ ಆಯುಕ್ತ ಕಾಂತರಾಜು ಅವರು ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ, ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಎಸ್ ಎನ್ಎಲ್ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ.
ರಾಜ್ಯದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲಿ ಅಥವಾ ಯಾವ ಸಂಘ ಸಂಸ್ಥೆಗಳಿಂದಾಗಲಿ ನಿವೇಶನ/ಮನೆ ಪಡೆದುಕೊಂಡಿಲ್ಲ ಎಂದು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ದೇವನೂರು 2ನೇ ಹಂತ (ನಿವೇಶನ ಸಂ. 2428), ವಿಜಯನಗರ 4ನೇ ಹಂತ (ನಿ.ಸಂ. 712) ಮತ್ತು ದಟ್ಟಗಳ್ಳಿ 3ನೇ ಹಂತ (ನಿ.ಸಂ. 168) ದಲ್ಲಿ ತಲಾ ಒಂದು ನಿವೇಶನಗಳನ್ನು ಪಡೆದು ಪ್ರಾಧಿಕಾರಕ್ಕೆ ವಂಚಿಸಿದ್ದರು.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ಅವರು ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.