ಮೈಸೂರಿನ ಕುಗ್ರಾಮದ ಸಹೋದರರು ಪಿಎಸ್ ಐ ಆದ ಕಥೆ
ಮೈಸೂರು, ಸೆಪ್ಟೆಂಬರ್ 18: ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ಕಾಡಂಚಿನ ಗ್ರಾಮ ಬೂದಿತಿಟ್ಟಲ್ಲಿ ವಾಸವಿರುವ ಬಡ ಕೂಲಿ ಕಾರ್ಮಿಕನ ಮಕ್ಕಳಿಬ್ಬರು ರಾಜ್ಯದ ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ಆಯ್ಕೆಯಾಗುವ ಮೂಲಕ ಗ್ರಾಮ ಹಾಗೂ ಓದಿದ ಶಾಲೆಗೆ ಕೀರ್ತಿ ತಂದಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಕಟ್ಟಕಡೆಯ, ಮೂಲಸೌಕರ್ಯ ವಂಚಿತ ಬೂದಿತಿಟ್ಟು ಗ್ರಾಮದ ಕೂಲಿಕಾರ್ಮಿಕ ಕರಿನಾಯಕ ಹಾಗೂ ಶಾರದಮ್ಮ ದಂಪತಿ ಪುತ್ರರಾದ ಮನು ಮತ್ತು ವಿನು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾದವರು. ಇವರು ಬೂದಿತಿಟ್ಟಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮತ್ತು ಪಿಯುಸಿಯನ್ನು ಪಿರಿಯಾಪಟ್ಟಣ ಸರ್ಕಾರಿ ಕಾಲೇಜು, ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದಿದ್ದಾರೆ.
ಮನು ಅವರು 2014ರ ಬ್ಯಾಚ್ ನಲ್ಲಿ ನಡೆದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇರ ನೇಮಕಾತಿಯಲ್ಲಿ ರಾಜ್ಯಕ್ಕೆ 30ನೇ rank ಗಳಿಸಿ ಮೈಸೂರು ಪೊಲೀಸ್ ಆಕಾಡೆಮಿಯಲ್ಲಿ ತರಬೇತಿ ಪಡೆದು ಬೆಂಗಳೂರಿನ ಕೊತ್ನಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಹೋದರ ವಿನು 2019ನೇ ಸಾಲಿನಲ್ಲಿ ನಡೆದ ಸಬ್ ಇನ್ಸ್ ಪೆಕ್ಟರ್ ನೇರ ನೇಮಕಾತಿಯಲ್ಲಿ 200 ಹುದ್ದೆಗಳಲ್ಲಿ 111 rank ಹಾಗೂ 300 ಹುದ್ದೆಗಳ ನೇರ ನೇಮಕಾತಿಯಲ್ಲಿ 89ನೇ rank ಪಡೆದಿದ್ದು, ಈಗ ತರಬೇತಿ ಪಡೆಯಲು ಅಣಿಯಾಗಿದ್ದಾರೆ.
ಎರಡು ಪರೀಕ್ಷೆಯಲ್ಲೂ ಸಹೋದರರಿಬ್ಬರು ಎಸ್.ಟಿ. ಮೀಸಲಾತಿ ಇದ್ದರೂ ಮೀಸಲಾತಿ ಪಡೆಯದೇ ಸಾಮಾನ್ಯ ಕೋಟದಡಿಯಲ್ಲಿ ಆಯ್ಕೆಯಾಗಿರುವುದು ಹೆಮ್ಮೆ ವಿಚಾರ. ಒಬ್ಬ ಬಡ ಕೂಲಿಕಾರ್ಮಿಕ ಹಾಗೂ ರಸ್ತೆ ಬದಿಯಲ್ಲಿ ಬಟ್ಟೆ ಮಾರಾಟ ಮಾಡಿ ತನ್ನ ಜೀವನ ಬಂಡಿ ಸಾಗಿಸುವುದರೊಂದಿಗೆ ತನ್ನ ಮಕ್ಕಳಿಬ್ಬರನ್ನೂ ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿಸಿ ಸಹೋದರರಿಬ್ಬರನ್ನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಡಿದ್ದಾರೆ. ಈಗಲೂ ರಸ್ತೆ ಬದಿಯ ವ್ಯಾಪಾರವನ್ನು ಬಿಡದೇ ತನ್ನ ಜೀವನ ಬಂಡಿ ಸಾಗಿಸುತ್ತಿರುವುದು ಹೆಮ್ಮೆಯ ವಿಷಯ. ಸಹೋದರರಿಬ್ಬರ ಈ ಸಾಧನೆ ನಿಜಕ್ಕೂ ಶ್ಲಾಘನೀಯ.











Click it and Unblock the Notifications