ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಹಂಚಲು ತಂದಿದ್ದ ತಿಂಡಿ ವಶಕ್ಕೆ
ಮೈಸೂರು, ಮಾರ್ಚ್ 23 : ನಂಜನಗೂಡಿನ ಯಾತ್ರಿ ಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅನುಮತಿ ಪಡೆಯದೆ ಊಟದ ವ್ಯವಸ್ಥೆ ಮಾಡಿದ್ದರಿಂದ ಚುನಾವಣಾ ಸಿಬ್ಬಂದಿ ಖಾಲಿ ಪಾತ್ರೆಗಳು ಹಾಗೂ ಅಡುಗೆಗೆ ಉಪಯೋಗಿಸಿದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಪೂರ್ವಭಾವಿಯಾಗಿ ಆಯೋಜಿಸಿದ್ದ ಬಿಜೆಪಿ ಪಕ್ಷದ ಮುಖಂಡರು ಕೇವಲ ಸಭೆಗೆ ಮಾತ್ರ ಅನುಮತಿ ಪಡೆದಿದ್ದು, ಊಟೋಪಚಾರಕ್ಕೆ ಅನುಮತಿ ಪಡೆದಿರಲಿಲ್ಲ. ಸಭೆಗೆ ಹಾಜರಾದ ಸಹಸ್ರಾರು ಕಾರ್ಯಕರ್ತರಿಗೆ ಇಲ್ಲಿ ಊಟ ಬಡಿಸಿದ್ದನ್ನು ತಿಳಿದ ಚುನಾವಣಾ ಸಿಬ್ಬಂದಿ ಯಾತ್ರಿ ಭವನಕ್ಕೆ ಹಾಜರಾಗಿ ಅಳಿದುಳಿದ ಊಟ ಖಾಲಿ ಪಾತ್ರೆಗಳು ಹಾಗೂ ಅಡುಗೆಗೆ ಉಪಯೋಗಿಸಿದ ಸಲಕರಣೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು, ಸಭೆಗೆ ಗ್ರಾಮೀಣ ಪ್ರದೇಶಗಳಿಂದ ನೂರಾರು ಕಾರ್ಯಕರ್ತರು ಸಹ ಆಗಮಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಾರ್ಯಕರ್ತರು ಮುಖಂಡರಿಗೆ ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಆಯೋಜಕರು ಚುನಾವಣಾಧಿಕಾರಿಗಳಿಂದ ಪರವಾನಗಿ ಪಡೆಯದೇ ಉಪಹಾರ ನೀಡಿದ್ದನ್ನು ಆಕ್ಷೇಪಿಸಿ ಉಪಹಾರ ನೀಡದಂತೆ ತಡೆ ಹಿಡಿಯಲು ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ.
ಚುನಾವಣಾ ಸಭೆಗೆ ಅಧಿಕಾರಿಗಳ ಹಾಜರಿ ಸಾಮಾನ್ಯವಾಗಿದ್ದು, ಇಲ್ಲಿ ಕಾರ್ಯಕರ್ತರು ಉಪಾಹಾರ ಪೂರ್ಣಗೊಂಡ ನಂತರ ದಾಳಿ ನಡೆಸಿದ್ದು ನಾಗರಿಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಸಭೆಗೆ ಮಾತ್ರ ಅನುಮತಿ ಪಡೆದಿದ್ದ ಬಿಜೆಪಿ ಉಪಾಹಾರಕ್ಕೆ ಅನುಮತಿ ಪಡೆದುಕೊಂಡಿರಲಿಲ್ಲ. ಅನುಮತಿ ಇಲ್ಲದೆ ಆಹಾರ ಸರಬರಾಜು ಮಾಡಿದ್ದ ಕುರಿತಂತೆ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಾಲ್ಲೂಕು ದಂಡಾಧಿಕಾರಿ ಮಹೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.












Click it and Unblock the Notifications