ಪೌರತ್ವ ಕಾಯ್ದೆಗಾಗಿ ಬಿಜೆಪಿಯಿಂದ ಬೆದರಿಕೆ: ಯತೀಂದ್ರ ಸಿದ್ದರಾಮಯ್ಯ
ಮೈಸೂರು, ಜನವರಿ 06: ಪೌರತ್ವ ತಿದ್ದುಪಡಿ ಕಾಯ್ದೆಗೋಸ್ಕರ ಬಿಜೆಪಿಯವರು ಬೆದರಿಕೆ ಹಾಕುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಬಂದಾಗಿನಿಂದಲೂ ಬಿಜೆಪಿ ಪಕ್ಷದ ಅನೇಕ ನಾಯಕರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಬಳ್ಳಾರಿಯ ಶಾಸಕ ಸೋಮಶೇಖರ್ ರೆಡ್ಡಿಯವರು ನಾವು ಹಿಂದೂಗಳು 70% ಇದ್ದೇವೆ, ಅಲ್ಪಸಂಖ್ಯಾತರು 30% ಮಾತ್ರ ಇದ್ದೀರಿ. ನಾವು ಕತ್ತಿ ಹಿಡಿದರೆ ನಿಮ್ಮ ಕಥೆ ಮುಗಿಯುತ್ತದೆ ಎಂಬ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಲು ಬಿಜೆಪಿಯವರು ಮಿಸ್ಡ್ ಕಾಲ್ ನಂಬರ್ ಬಳಸಿಕೊಂಡು ಜನರಿಗೆ ಅನೇಕ ಆಮೀಷಗಳನ್ನು ನೀಡುತ್ತಿದ್ದಾರೆ. ನಿನ್ನೆ ರಾತ್ರಿ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಬಿಜೆಪಿಯವರೇ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ವಕ್ತಾರ ಲಕ್ಷ್ಮಣ್ ಈ ಟೋಲ್ ಫ್ರೀ ನಂಬರ್ ಗಳನ್ನು ಪ್ರಮೋಟ್ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಇಪ್ಪತ್ತಕ್ಕೂ ಹೆಚ್ಚು ಫೇಕ್ ಅಕೌಂಟ್ ಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ಉದಾಹರಣೆಗೆ ಹಿಂದಿ ನಟಿ ಆಲಿಯಾ ಭಟ್ ಅವರ ಫೇಕ್ ಅಕೌಂಟ್ ಮಾಡಿಸಿ ಈ ನಂಬರ್ ಗೆ ನೀವು ಕಾಲ್ ಮಾಡಿದರೆ ನಾನು ನಿಮ್ಮ ಭೇಟಿಗೆ ಸಿಗುತ್ತೇನೆ ಎಂದು ಹಾಗೂ ನೆಟ್ ಪ್ಲಿಕ್ಸ್ ಅನ್ನು ಆರು ತಿಂಗಳ ಕಾಲ ಉಚಿತವಾಗಿ ಪಡೆಯಲು ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಎಂದು ಸಾಮಾಜಿಕ ತಾಣಗಳಲ್ಲಿ ಹೇಳುವ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಎನ್ ಆರ್ ಸಿ, ಸಿಎಎ ಯಿಂದ ಜನರಿಗೆ ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬ ಮಾಹಿತಿ ಇರುವ ಭಿತ್ತಿ ಪತ್ರಗಳನ್ನು ಜನರಿಗೆ ತಲುಪಿಸುತ್ತೇವೆ ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ನಗರಾಧ್ಯಕ್ಷ ಆರ್ .ಮಾರ್ತಿ, ಜಿಲ್ಲಾಧ್ಯಕ್ಷ ಬಿ .ಜೆ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications