ಯಡಿಯೂರಪ್ಪ ಸಂದರ್ಶನ: 'ನಾನು ಸಾವಿನ ಮನೆಯಲ್ಲಿ ರಾಜಕಾರಣ ಮಾಡಲ್ಲ'
ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸಂದರ್ಶನ ಮಾಡಿದ್ದಾರೆ ಒನ್ಇಂಡಿಯಾ ಕನ್ನಡ ವರದಿಗಾರ್ತಿ ಎಂಕೆ ಯಶಸ್ವಿನಿ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಲ್ಲ ಎಂದು ಬಿಎಸ್ ವೈ ಹೇಳಿದ್ದೇಕೆ
ಮೈಸೂರು, ಏಪ್ರಿಲ್ 3: ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಮತದಾನಕ್ಕೆ ಇನ್ನೇನು ಬೆರಳೆಣಿಕೆಯಷ್ಟೇ ದಿನ ಬಾಕಿಯಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಚುನಾವಣೆ ಪ್ರಚಾರದಲ್ಲೇ ಪೈಪೋಟಿ ಎದ್ದು ಕಾಣುತ್ತಿದೆ. ಇಂಥ ಸನ್ನಿವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂದರ್ಶನವನ್ನು ಮಾಡಲಾಗಿದ್ದು, ಅದರ ಪೂರ್ಣ ಪಾಠ ಇಲ್ಲಿದೆ.

ಪ್ರಶ್ನೆ: ಗೀತಾ ಮಹದೇವಪ್ರಸಾದ್ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯ ಏನಿದು?
ಉತ್ತರ: ಅವರ ಮನೆಗೆ ನಾನು ಹೋಗಿದ್ದು ಮಹದೇವ ಪ್ರಸಾದ್ ನಿಧನದ ವೇಳೆಯೇ. ಸಾಂತ್ವನ ಹೇಳಿದ್ದು ಎರಡೇ ನಿಮಿಷ. ಅದೂ ಧೈರ್ಯ ಹೇಳಿದೆ ಅಷ್ಟೇ. ಸಾವಿನ ಮನೆಯಲ್ಲಿ ರಾಜಕೀಯ ಮಾತನಾಡುವವನು ನಾನಲ್ಲ. ಅವರು ನಮ್ಮ ಸಹೋದರಿ. ಆದರೆ ಅವರು ಅನುಕಂಪ ಗಳಿಸಿ ಮತ ಪಡೆಯುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ.

ಪ್ರಶ್ನೆ: ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯೇ ಠಿಕಾಣಿ ಹೂಡಿದಂತಿದ್ದೀರಿ, ಏಕೆ ನಿಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ನಂಬಿಕೆ ಇಲ್ಲವೇ?
ಉತ್ತರ: ಛೇ..ಛೇ ಖಂಡಿತಾ ಹಾಗಲ್ಲ. ನಾನು ಯಾವತ್ತಿಗೂ ಉಪ ಚುನಾವಣೆಗಳನ್ನು ಇಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ನನ್ನ ಸ್ನೇಹಿತರು ಹಾಗೂ ಹಿರಿಯರು ಆದ ಶ್ರೀನಿವಾಸ್ ಪ್ರಸಾದ್ ಅವರಿಗಾದ ಅಪಮಾನ ನನಗೆ ಸರಿಯೆನಿಸಲಿಲ್ಲ. ಅವರ ಕಾರ್ಯ ಜನ ಮೆಚ್ಚುವಂತಹದ್ದು. ಹಾಗಾಗಿ ಇಷ್ಟು ದಿನ ಕಾಂಗ್ರೆಸ್ ಅಧಿಕಾರದಿಂದಾಗಿ ಜನ ಬೇಸತ್ತಿದ್ದಾರೆ. ಇನ್ನಾದರೂ ಸಿದ್ದರಾಮಯ್ಯ ತಿದ್ದಿಕೊಳ್ಳುವುದನ್ನು ಕಲಿಯಲಿ. ಅವರಿಗೆ ತಕ್ಕ ಪಾಠ ಕಲಿಸಲು ನಮ್ಮ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ.[ಉಪ ಚುನಾವಣೆ ಗೆಲ್ಲಲು ಪ್ರಯತ್ನ ಸಾಲದು ಅಮಿತ್ ಶಾ ಚಾಟಿ]

ಪ್ರಶ್ನೆ: ಜನರ ಪ್ರತಿಕ್ರಿಯೆ ನಿಮಗೆ ಹೇಗನಿಸುತ್ತದೆ?
ಉತ್ತರ: ಮೂರು ವಾರದಿಂದ ಪ್ರಚಾರದಲ್ಲಿ ತೊಡಗಿದ್ದೇನೆ. ಯಾವುದೇ ಹಳ್ಳಿಗೆ ಹೋದರೂ ಜನ ಸಂಭ್ರಮದಂತೆ ಹಿಂದೆಯೇ ಬರುತ್ತಾರೆ. ಜಾತಿ ಭೇದ ಮರೆತು ದಲಿತರು, ವೀರಶೈವರು ಸೇರಿದಂತೆ ಪ್ರತಿ ಹಳ್ಳಿಯಲ್ಲೂ ಐನೂರಕ್ಕೂ ಹೆಚ್ಚು ಜನ ಸೇರುತ್ತಿದ್ದಾರೆ. ಹಳ್ಳಿಯ ವಾತಾವರಣ ಬದಲಾಗಿದೆ. ಇದರಿಂದ ಹೊಸ ಗಾಳಿ ಬೀಸಿದೆ. ಮುಸ್ಲಿಮರು ಕೂಡ ಬಹು ಸಂಖ್ಯೆಯಲ್ಲೇ ಜಮಾಯಿಸುತ್ತಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ತೋರಿಸುತ್ತಿದ್ದಾರೆ.

ಪ್ರಶ್ನೆ: ಕಾಂಗ್ರೆಸ್ ನವರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸುತ್ತಿದ್ದೀರಲ್ಲಾ?
ಉತ್ತರ: ಖಂಡಿತಾ ನಿಜ. ತಾವು ಮಾಡಿದ ಎಡವಟ್ಟಿನಿಂದಾಗಿ ಸೋತು ಹೋಗುತ್ತೇವೆ ಎಂಬ ಭಯದಲ್ಲಿ ಕಾಂಗ್ರೆಸ್ ನಾಯಕರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಅದರಿಂದಾದರೂ ಗೆಲ್ಲಬೇಕೆಂಬ ಹಠ ಅವರದ್ದು.

ಪ್ರಶ್ನೆ: ಇಂಥ ಅಬ್ಬರದ ಪ್ರಚಾರ ಬೇಕಿತ್ತಾ?
ಉತ್ತರ: ನಾನೆಂದೂ ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸದವನಲ್ಲ. ನಾನು ಪ್ರಚಾರ ನಡೆಸಿದರೆ ಜನರ ಕಷ್ಟ ಗ್ರಾಮ ಮಟ್ಟದಲ್ಲಿ ತಿಳಿಯಲಿದೆ. ಇದು ಮುಂದಿನ ಚುನಾವಣೆಗೆ ಅಡಿಪಾಯವಾಗಲಿದೆ. ಹಾಗಾಗಿ ಪ್ರಚಾರದಲ್ಲಿ ತೊಡಗಿದ್ದೇನೆ.[ಉಪಚುನಾವಣೆಯಲ್ಲಿ 'ಕೈ' ತಂತ್ರ ಸಫಲವಾಗುತ್ತಾ?]

ಪ್ರಶ್ನೆ: ಬಿಜೆಪಿ ಪ್ರಚಾರ ಕಾಂಗ್ರೆಸ್ ಗಿಂತ ಪೇಲವವಾದಂತೆ ಕಾಣುತ್ತಿದ್ದೆಯೇ?
ಉತ್ತರ: ಖಂಡಿತಾ ಇಲ್ಲ. ಕಾಂಗ್ರೆಸ್ ನಾಯಕರು ಎಂದಿಗೂ ಇಂತಹ ಹಳ್ಳಿಗಳಿಗೆ ತೆರಳಿದವರಲ್ಲ. ನಮ್ಮ ನಾಯಕರು ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಎಸ್.ಎಂ.ಕೃಷ್ಣ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ನಮ್ಮ ಶ್ರೀರಕ್ಷೆ. ಯಾರು ಕೂಡ ಪ್ರಚಾರ ನೋಡಿ ಮತ ಹಾಕುವುದಿಲ್ಲ. ಮಾಡುವ ಹಾಗೂ ಮಾಡಿದ ಕಾಯಕಕ್ಕೆ ಮಾತ್ರ ಮತ ಹಾಕೋದು. ಪ್ರಚಾರ ಮಾಡುವುದು ನಮ್ಮ ನಾಯಕರು ಮಾಡಿದ ಕಾಯಕವನ್ನು ಜನರಿಗೆ ತಿಳಿಸುವುದಕ್ಕಷ್ಟೇ. ನಮ್ಮದು ಹಣ, ಹೆಂಡದ ರಾಜಕಾರಣವಲ್ಲ.

ಪ್ರಶ್ನೆ: ಈ ವಯಸ್ಸಿನಲ್ಲೂ ಇಂಥ ಬಿಡುವಿಲ್ಲದ ಪ್ರಚಾರ ಹೇಗೆ ಸಾಧ್ಯ? ನಿಮಗೆ ಆಯಾಸ ಎನಿಸುವುದಿಲ್ಲವೇ?
ಉತ್ತರ: ಹ್ಹ..ಹ್ಹ..ಹ್ಹ..(ದೊಡ್ಡದಾಗಿ ನಗು). ಆಯಾಸವಾ...ಹಾಗಂದರೆ ಏನು? ನಮ್ದು ಮುದ್ದೆ ತಿಂದು ಬೆಳೆದ ದೇಹ. ಕಳೆದ 40 ವರುಷಗಳಿಂದಲೂ ರಾಜಕೀಯದಲ್ಲಿ ಇರುವವನು ನಾನು. 74 ವರ್ಷ ವಯಸ್ಸಾದರೂ ಎಂದಿಗೂ ಆಯಾಸ ಪಟ್ಟವನ್ನಲ್ಲ. ಅಚ್ಚುಕಟ್ಟಾಗಿ ಊಟ, ತಿಂಡಿ ಮಾಡುತ್ತೇನೆ. ಆದರೆ ಹಿತ- ಮಿತ ಆಹಾರ ನನ್ನದು. ಹಾಗಾಗಿ ಆರೋಗ್ಯವಾಗಿದ್ದೇನೆ. ವಯಸ್ಸಾಯಿತಲ್ಲ ಎಂದುಕೊಂಡರೆ ಕುಗ್ಗುವುದು ಜಾಸ್ತಿ. ಇಲ್ಲವಾದರೆ ಸಾಮಾನ್ಯುವಾಗಿ ಇರಬಹುದು. ನನಗೆ ಜನರೇ ಡಾಕ್ಟರ್. ಅವರು ನಮ್ಮನ್ನು ಗೆಲ್ಲಿಸಿದರೆ ಟ್ಯಾಬ್ಲೆಟ್. ಹಾಗಾಗಿ ನನಗೆ ಎಂದೂ ಆಯಾಸ ಆಗುವುದಿಲ್ಲ.[ಜಗ್ಗೇಶ್ ಪ್ರಚಾರಕ್ಕೂ ಮೊದಲು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ]

ಪ್ರಶ್ನೆ: ಮೋದಿ ಅಲೆಯಿಂದ ಬಿಜೆಪಿ ಗೆಲ್ಲಬಹುದೇ...?
ಉತ್ತರ: ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಯಾವ ರೀತಿ ಕಾರ್ಯ ಮಾಡಿದ್ದಾರೆಂಬುದು ಜನಕ್ಕೆ ಈಗಾಗಲೇ ಗೊತ್ತಿದೆ. ಈ ಬಾರಿಯ ಗೆಲುವು ಮೋದಿ ಅಲೆಯಿಂದಲೇ. ಕಮಲ ಪಾಳಯ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ.












Click it and Unblock the Notifications