ಮೈಸೂರಿನಲ್ಲಿ ಹಿಂದೂ ಧರ್ಮದ ಅಗ್ಗಳಿಕೆ ಕೊಂಡಾಡಿದ ಅಡ್ವಾಣಿ
ಮೈಸೂರು, ಡಿಸೆಂಬರ್ 1: ಹಿಂದೂ ಧರ್ಮ ಸನಾತನವಾದದ್ದು ಹಾಗೂ ಸರ್ವ ಶ್ರೇಷ್ಠವಾದದ್ದು ಎಂದು ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದರು.
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹನುಮಾನ್ ತ್ರೀ ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂ ಧರ್ಮ ವಿಶ್ವದಲ್ಲಿ ಸನಾತನ ಧರ್ಮ. ಈ ಧರ್ಮಕ್ಕೆ ಎಲ್ಲ ಧರ್ಮಗಳ ಅಂಶಗಳನ್ನು ಸ್ವೀಕರಿಸುವ, ಅಪ್ಪಿಕೊಳ್ಳುವ ಗುಣವಿದೆ. ಇದು ಸಾರ್ವಕಾಲಿಕ ಶ್ರೇಷ್ಠ ಧರ್ಮ ಎಂದು ಹೇಳಿದರು.

ಇಂದಿನ ಯುವ ಜನಾಂಗ ತಾಂತ್ರಿಕತೆಯ ಮೂಲಕ ಇಂತಹ ಧಾರ್ಮಿಕ ಕೈಂಕರ್ಯಗಳನ್ನು ಪ್ರಚುರಪಡಿಸಿ, ಧಾರ್ಮಿಕತೆಯನ್ನು ಉಳಿಸಿ, ಹಿಂದೂ ಧರ್ಮವನ್ನು ಬೆಳೆಸಬೇಕಿದೆ. ಸಾಂಸ್ಕೃತಿಕ ನಗರಿ ಪ್ರವಾಸಿಗರಿಗೆ ಮೆಚ್ಚಿನ ತಾಣವಾಗಿದೆ. ತ್ರೀ ಡಿ ಮ್ಯಾಪಿಂಗ್ ಹನುಮಾನ್ ಮೂರ್ತಿ ನೋಡಲು ಮತ್ತಷ್ಟು ಪ್ರವಾಸಿಗರು ಆಗಮಿಸಲಿದ್ದಾರೆ ಎಂದರು.
ಬಳಿಕ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ತೆರಳಿದ ಆಡ್ವಾಣಿ, ಹನುಮ 3ಡಿ ಪ್ರೊಜೆಕ್ಷನ್ ಟೆಕ್ನಾಲಜಿ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿದರು. ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಶ್ರಮದಲ್ಲಿನ 45 ಅಡಿ ಎತ್ತರದ ಕಾರ್ಯಸಿದ್ಧಿ ಆಂಜನೇಯ ವಿಗ್ರಹಕ್ಕೆ ತುಲಸೀದಾಸ್ ರಚಿತ ಹನುಮಾನ್ ಚಾಲೀಸಾ ಶ್ಲೋಕ ಆಧರಿಸಿ, ಸುಮಾರು 8 ನಿಮಿಷಗಳ ಕಾಲ ಪ್ರೊಜೆಕ್ಷನ್ ಮ್ಯಾಪಿಂಗ್ ಟೆಕ್ನಾಲಜಿ ಮೂಲಕ ವಿಶೇಷ ಪ್ರದರ್ಶನ ನೀಡಲಾಯಿತು.

ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತುಂತುರು ಮಳೆ ಸುರಿಯುತ್ತಿದ್ದು, ಮಳೆಯಲ್ಲಿಯೇ ಛತ್ರಿ ಅಡಿಯಲ್ಲಿ ಕುಳಿತು ಜನರು ಎಲ್ಲವನ್ನೂ ವೀಕ್ಷಿಸಿದರು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಡ್ವಾಣಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು












Click it and Unblock the Notifications