ಮೈಸೂರು: ಚಿಲ್ಲರೆ ರಾಜಕಾರಣ ಮಾಡಬೇಡಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಮೈಸೂರು, ಜೂನ್ 1: ವಿರೋಧ ಪಕ್ಷಗಳಿಗೆ ಟೀಕೆ ಮಾಡುವುದಕ್ಕೆ ಸರಿಯಾದ ವಿಷಯ ಸಿಗುತ್ತಿಲ್ಲ. ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
Recommended Video
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕೇಂದ್ರ ಸರ್ಕಾರದ ಸಾಧನೆ ಮತ್ತು ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಅಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ, ಕೊರೊನಾ ವೈರಸ್ ನಿಯಂತ್ರಣ, 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕುರಿತಾದ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು, ಇದು ಆ ಸಮಯವಲ್ಲ. ಕೊರೊನ ವೈರಸ್ ನಿಯಂತ್ರಣಕ್ಕಾಗಿ ನಾವು ತೆಗೆದುಕೊಂಡ ಕ್ರಮಗಳಿಗೆ ಸ್ವತಃ ವಿರೋಧ ಪಕ್ಷಗಳೇ ಅಭಿನಂದನೆ ಸಲ್ಲಿಸಿದ್ದವು.

ಆದರೆ ಇದೀಗ ಟೀಕೆ ಮಾಡಲು ಬೇರೆ ವಿಷಯಗಳಿಲ್ಲ ಎಂದು ಚಿಲ್ಲರೆ ರಾಜಕಾರಣಕ್ಕೆ ಇಳಿದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಲಸೆ ಕಾರ್ಮಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ಬಯಸಿ ಬಂದವರಿಗೆ ಪೌರತ್ವ ಕೊಡುವ ಕೆಲಸ ನಾವು ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಅತ್ಯುತ್ತಮ ಕೆಲಸವೆಂದರು.
ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಯಾರೂ ಇಲ್ಲಿಗೆ ಬಂದಿಲ್ಲ, ಬಾಂಬ್ ಇಡುವ ಕೆಲಸವನ್ನೂ ಮಾಡಿಲ್ಲ. ಈ ಮೊದಲು ವಿಜ್ಞಾನ ಭವನಕ್ಕೆ ಬಾಂಬ್ ಇಡುತ್ತಿದ್ದರು. ಕೇರಳಕ್ಕೆ ಬಂದು ಬಾಂಬ್ ಇಟ್ಟಿದ್ದರು. ಆದರೆ ಇದೀಗ ಒಂದೇ ಒಂದು ಬಾಂಬ್ ಪ್ರಕರಣ ನಡೆದಿಲ್ಲ. ಇದೆಲ್ಲವೂ ನಮ್ಮ ಸರ್ಕಾರದ ಕಾರ್ಯವೈಖರಿ ಎಂದು ತಿಳಿಸಿದರು.

ಕೊರೊನಾ ವೈರಸ್ ತೊಂದರೆ ನಿವಾರಿಸಲು 20 ಲಕ್ಷ ಕೋಟಿ ರೂ. ದೇಶಕ್ಕೆ ನೀಡಲಾಗಿದೆ. ಆತ್ಮನಿರ್ಭರ್ ಯೋಜನೆ ಮೂಲಕ ಜನರ ಜೊತೆ ನಾವು ಇದ್ದೇವೆ. ತಳವಾರ, ಪರಿವಾರ ಸಮುದಾಯಕ್ಕೂ ಅನುಕೂಲ ಮಾಡಿ ಕೊಟ್ಟಿದ್ದು, ಎಲ್ಲ ವಿಚಾರದಲ್ಲೂ ನಾವು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಕೇಂದ್ರದ ಜತೆಗೆ ರಾಜ್ಯದಲ್ಲಿಯೂ ಅತ್ಯುತ್ತಮ ಕೆಲಸ ಆಗಿದೆ ಎಂದು ರಾಜ್ಯ ಕೇಂದ್ರ ಸರ್ಕಾರಗಳನ್ನು ನಳಿನ್ ಕುಮಾರ್ ಕಟೀಲ್ ಹೊಗಳಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್ ಭಾಗಿಯಾಗಿದ್ದರು.












Click it and Unblock the Notifications