ಬಯ್ದಾಡಿ ಸೋತ ಶ್ರೀನಿವಾಸ್ ಪ್ರಸಾದ್, ಸುಮ್ಮನಿದ್ದು ಗೆದ್ದ ಸಿದ್ದರಾಮಯ್ಯ
ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್ ಈ ಬಾರಿ ನಂಜನಗೂಡು ಉಪಚುನಾವಣೆಯ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತಿತರರನ್ನು ಬಯ್ದಾಡಿದ್ದರು. ಆದರೆ ವೈಯಕ್ತಿಕ ದಾಳಿ ಬೇಡ ಎಂದು ಸೂಚಿಸಿದ್ದರು ಮುಖ್ಯಮಂತ್ರಿ.
ನಂಜನಗೂಡು, ಏಪ್ರಿಲ್ 13: ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್ ಆವರಿಗೆ ಮಾತೇ ಮುಳುವಾಯಿತಾ ಎಂಬ ಪ್ರಶ್ನೆ ಮೂಡುತ್ತಿದೆ. ಉಹುಂ, ಬರೀ ಮಾತೊಂದೇ ಮುಳುವಾಗಿರಲಿಕ್ಕಿಲ್ಲ ಎನ್ನಬಹುದು. ಏಕೆಂದರೆ ಕಾಂಗ್ರೆಸ್ ಸರಕಾರ ನಂಜನಗೂಡಿನಲ್ಲಿ ಭರಪೂರ ಯೋಜನೆಗಳನ್ನು ಘೋಷಿಸಿತು.
ಗ್ಯಾಲರಿ: ಕಾಂಗ್ರೆಸ್ಸಿನ ಡಬ್ಬಲ್ ಧಮಾಕ, 2 ಕ್ಷೇತ್ರಗಳು ಕೈವಶ
ಇದರ ಜತೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರ ವಿರುದ್ಧವೂ ವೈಯಕ್ತಿಕ ದಾಳಿ ಮಾಡಬೇಡಿ ಎಂದು ಸೂಚಿಸಿದ್ದರು. ಅದಕ್ಕೆ ತಕ್ಕ ಹಾಗೆ ಕಾಂಗ್ರೆಸ್ ಪ್ರಚಾರದಲ್ಲಿ ವೈಯಕ್ತಿಕ ನಿಂದನೆ ಹೇಳಿಕೆಗಳು ಅಷ್ಟಾಗಿರಲಿಲ್ಲ. ಸಿಎಂ ಇಬ್ರಾಹಿಂರಂಥವರು ಬಿಟ್ಟರೆ ಉಳಿದಂತೆ ಚುನಾವಣೆಯಲ್ಲಿ ಅಂಥ ವಾಗ್ದಾಳಿಯನ್ನು ಯಾರೂ ನಡೆಸಲಿಲ್ಲ.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]

ಆದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀನಿವಾಸ್ ಪ್ರಸಾದ್ ರೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಇತರ ಮುಖಂಡರ ವಿರುದ್ಧ ಏಕವಚನ ಬಳಸಿ ಮಾತನಾಡಿದರು, ಹೀಗಳೆದರು, ಹೀಯಾಳಿಸಿದರು. ಜತೆಗೆ ಹುರುಪಿನಿಂದ ಇದ್ದ ಯಡಿಯೂರಪ್ಪನವರೂ ಮುಖ್ಯಮಂತ್ರಿ ಬಗ್ಗೆ ಬಾಯಿಗೆ ಸಿಕ್ಕ ಹಾಗೆ ಮಾತನಾಡಿದರು.

ಈ ಹಿಂದೆ ಶ್ರೀನಿವಾಸ್ ಪ್ರಸಾದ್ ರನ್ನು ಹೀಗೆ ಜನ ನೋಡಿರಲಿಲ್ಲ. ತಮಗಾಗಿದ್ದು ಅವಮಾನ, ಅದಕ್ಕೆ ಸರಿಯಾದ ಉತ್ತರ ಹೇಳಬೇಕು ಎಂದುಕೊಂಡವರು ಆಯ್ಕೆ ಮಾಡಿಕೊಂಡ ಪಕ್ಷವೇ ತಪ್ಪಾಯಿತೇನೋ ಎಂಬ ಚರ್ಚೆ ಈಗ ಶುರುವಾಗಿದೆ. ಈ ಹಿಂದೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವೇ ಕಂಡಿಲ್ಲ. ಇದೀಗ ಆ ಸೋಲಿನ ಸರಣಿ ಮುಂದುವರಿದಿದೆ.

ನಂಜನಗೂಡಿನಲ್ಲಿ ಗೆದ್ದೇ ಗೆಲ್ತೀವಿ ಎಂದುಕೊಂಡಿದ್ದರೇನೋ ಬಿಜೆಪಿಯವರು. ಸಿದ್ದರಾಮಯ್ಯ-ಯಡಿಯೂರಪ್ಪನವರ ಕಾದಾಟದಲ್ಲಿ ಶ್ರೀನಿವಾಸ್ ಪ್ರಸಾದ್ ರನ್ನು ನೆಲಕ್ಕೆ ಕೆಡವಲಾಗಿದೆ. ಜೆಡಿಎಸ್ ಉಪ ಚುನಾವಣೆ ಅಖಾಡಕ್ಕೆ ಇಳಿಯದಿದ್ದದ್ದು ಆ ಪಕ್ಷದ ನಿರ್ಧಾರವೋ ಅಥವಾ ಸಿದ್ದರಾಮಯ್ಯ ಅವರ ಮನವೊಲಿಕೆಯೋ ಎಂಬುದು ಇನ್ನೂ ಚರ್ಚೆಯಲ್ಲಿದೆ.

ಚುನಾವಣೆಗೆ ಸ್ಪರ್ಧೆ ಮಾಡದಿದ್ದದ್ದು, ಜೆಡಿಎಸ್ ನ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಪರವಾಗಿ ಅಭ್ಯರ್ಥಿಯಾಗಿದ್ದು ಮತದಾರರು 'ಕೈ' ಹಿಡಿಯಲು ಒಂದು ರೀತಿ ಸಹಕಾರಿಯಾಗಿದೆ. ಮುಂದಿನ ವರ್ಷದ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿಯಾದರೆ ಏನೇನು ಮಾಡಬಹುದು ಎಂಬುದರ ಟ್ರೇಲರ್ ನೋಡಲಿಕ್ಕೆ ಸಿಕ್ಕಿದೆ.[ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ]

ಅಂತೂ ಕಾಂಗ್ರೆಸ್ ಗೆಲುವಿಗೆ ನಂಜನಗೂಡಿನಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಕೈ ಗುರುತು ಕಾಣುವಂತೆ ಹೇರ್ ಕಟ್ ಮಾಡಿಸಿ, ಗೆಲುವಿಗೆ ಖುಷಿ ಪಡುತ್ತಿದ್ದಾರೆ. ಈ ಸೋಲಿಗೆ ಶ್ರೀನಿವಾಸ್ ಪ್ರಸಾದ್ ಹೇಗೆ ಪ್ರತಿಕ್ರಿಯಿಸುತ್ತಾರೋ? ಇದು ಸ್ವಾಭಿಮಾನದ ಹೋರಾಟ ಎಂದಿದ್ದರು. ಮೌನವಾಗಿಯೇ ಸಿದ್ದರಾಮಯ್ಯ ಅವರು ಹಳೆ ದೋಸ್ತ್ ಶ್ರೀನಿವಾಸ್ ಪ್ರಸಾದ್ ರನ್ನು ಚಿತ್ ಮಾಡಿದ್ದಾರೆ.












Click it and Unblock the Notifications