ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್; ಎಸ್. ಎ. ರಾಮದಾಸ್
ಮೈಸೂರು, ಆಗಸ್ಟ್ 10; "ಕೆ. ಆರ್. ಕ್ಷೇತ್ರವೇ ನನ್ನ ದೇಶ, ರಾಜ್ಯ, ಜಿಲ್ಲೆ. ಅದನ್ನು ಮಾದರಿ ಮಾಡಲು ನಾನು ಕೆಲಸ ಮಾಡುತ್ತಿದ್ದೇನೆ. ಸಚಿವ ಸ್ಥಾನ ತಪ್ಪಿಸಿದವರ ಬಗ್ಗೆ ನನಗೆ ಯಾವುದೇ ಬೇಜಾರು ಇಲ್ಲ. ಅವರು ನನ್ನ ಲವರ್" ಎಂದು ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಹೇಳಿದರು.
ಮೈಸೂರಿನ ಕೆ. ಆರ್. ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ಬಸವರಾಜ ಬೊಮ್ಮಾಯಿ ಸಂಪುಟ ಸೇರಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಅವರ ಹೆಸರು ಇತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿತ್ತು. ಸಚಿವ ಸ್ಥಾನ ಕೈತಪ್ಪಿತ್ತು.
ಮಂಗಳವಾರ ಎಸ್. ಎ. ರಾಮದಾಸ್ ಈ ಕುರಿತು ಪ್ರತಿಕ್ರಿಯೆ ನೀಡಿದರು. "ನಾನು ಯಾವುದೇ ಚರ್ಚೆ ಬಂದರೂ ಸ್ವಾಗತ ಮಾಡುತ್ತೇನೆ. 1994ರಲ್ಲಿ ನಾನು ಮೈಸೂರು ಮಹಾನಗರದ ಯುವಮೋರ್ಚಾ ಅಧ್ಯಕ್ಷನಾಗಿದ್ದೆ. ಆಗ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಬೇಕು ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಪೇಕ್ಷೆ ಮಾಡಿದ್ದರು. ನವೆಹಲಿಯ ನಾಯಕರಿಗೂ ನನಗೆ ಟಿಕೆಟ್ ಬೇಕು ಎಂದುದ ಹೇಳಿದ್ದರು" ಎಂದು ರಾಮದಾಸ್ ಹೇಳಿದರು.

"ಆಗಲೂ ಸಹ ನಮ್ಮ ಪರವಾಗಿರುವವರೇ ಟಿಕೆಟ್ ತಪ್ಪಿಸಲಿದ್ದಾರೆ ಎಂಬಂತಹ ಮಾತುಗಳು ಕೇಳಿ ಬರುತ್ತಿತ್ತು. ಪಕ್ಷದ ನಿಷ್ಠಾವಂತ ಎಂದು ಆಗಲೂ ಹೇಳಿದ್ದೆ. ಪಕ್ಷ ಏನು ಹೇಳಿದರೂ ಕೇಳಿಕೊಂಡು ಹೋಗುವೆ ಎಂದಿದ್ದೆ. ಆಗ ಟಿಕೆಟ್ ಕೊಡದಿದ್ದರೆ ಪಕ್ಷಕ್ಕೆ ರಾಜೀನಾಮೆ ಕೊಡುವೆ ಎಂದರು, ಒಡೆಯರ್ ರಾಜೀನಾಮೆ ಕೊಟ್ಟರು" ಎಂದರು.
"ಆಗ ಪಕ್ಷ ಒಬ್ಬ ಸಾಮಾನ್ಯ ಯುವಮೋರ್ಚಾ ಅಧ್ಯಕ್ಷನಾದ ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಅದರ ಋಣ ನನ್ನ ಮೇಲೆ ಇದೆ. ಅದಕ್ಕಾಗಿ ಪಕ್ಷ ಯಾವುದೇ ತೀರ್ಮಾನ ಮಾಡಿದರೆ ಅದನ್ನು ನಾನು ಪಾಲಿಸುತ್ತೇನೆ" ಎಂದು ರಾಮದಾಸ್ ಹೇಳಿದರು.
"ನಾನು ಭಾರತೀಯ ಜನತಾ ಪಕ್ಷದಲ್ಲಿ ಯಾವತ್ತೂ ಟಿಕೆಟ್ ಕೊಡಿ. ಸಂಪುಟದಲ್ಲಿ ಸ್ಥಾನ ಕೊಡಿ ಎಂದು ಕೇಳಿಲ್ಲ. ಈಗಲೂ ನನ್ನಲ್ಲಿ ಯಾವ ಪ್ರಶ್ನೆಯೂ ಇಲ್ಲ. ಆದರೆ ಮೈಸೂರಿನ ಜನರು ಕೇಳುತ್ತಾರೆ ಕಾಂಗ್ರೆಸ್ ಸರ್ಕಾರವಿದ್ದಾಗ 5 ಜನ ಸಚಿವರಿದ್ದರು. ಜೆಡಿಎಸ್ ಸರ್ಕಾರವಿದ್ದಾಗ 5 ಜನ ಸಚಿವರಿದ್ದರು. ಈಗ ಏಕಿಲ್ಲ? ಎಂದು" ರಾಮದಾಸ್ ತಿಳಿಸಿದರು.
"ಯಡಿಯೂರಪ್ಪ ಅವರು ನನಗೆ ಆಶೀರ್ವಾದ ಮಾಡಿದ್ದರು. ಈ ಬಾರಿ ನಿನಗೆ ಮಂತ್ರಿ ಸ್ಥಾನ ಕೊಟ್ಟಿದ್ದೇವೆ. 2023ರಲ್ಲಿ ರಾಜ್ಯದಲ್ಲಿ ಪಕ್ಷ ಗೆದ್ದು ಬರಲು ಬೇಕಾದ ಕೆಲಸ ಮಾಡು ಎಂದು ಹೇಳಿದ್ದರು. ಪಕ್ಷದ ಅಧ್ಯಕ್ಷರು ಸಹ ಮಂತ್ರಿ ಸ್ಥಾನಕ್ಕೆ ಸೂಚನೆ ಮಾಡಿದ್ದೇವೆ ಎಂದು ಹೇಳಿದ್ದರು" ಎಂದು ರಾಮದಾಸ್ ಹೇಳಿದರು.
"ನಾನೊಬ್ಬರ ಸ್ವಯಂ ಸೇವಕ, ಸಂಘದ ಹಿರಿಯರು ಸಹ ನನಗೆ ಮಂತ್ರಿಯಾಗುತ್ತೇನೆ ಎಂದು ಹೇಳಿದ್ದರು. ಕೊನೆ ಕ್ಷಣದಲ್ಲಿ ಕೈಬಿಟ್ಟಾಗ ನಾನು ಅವರಿಗೆ ಫೋನ್ ಮಾಡಿ ಹೇಳಿದೆ. ಯಾಕೆ ಕೈಬಿಟ್ಟಿರಿ, ಅದರಿಂದ ಏನಾದರೂ ಸಂತೋಷ ಆಯಿತಾ? ಎಂದು. ಅದರಲ್ಲಿ ತಪ್ಪೇನಿಲ್ಲ. ದುಃಖದಲ್ಲಿ ಅಲ್ಲ ಸಂತೋಷದಿಂದಲೇ ಕೇಳಿದ್ದೇನೆ" ಎಂದರು.
ಯಾರಿಗೆ ಫೋನ್ ಮಾಡಿದ್ದೀರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಮದಾಸ್, "ಹೇಳುವ ಹಾಗಿಲ್ಲ ಅದು ನನಗೆ ಅವರಿಗೆ ಮಾತ್ರ ಸೇರಿದ ಪ್ರೇಮ. ಮುಂದೆ ನನಗೆ ನಿರೀಕ್ಷೆ ಸಹ ಇಲ್ಲ. ಯಾರ ಬಗ್ಗೆಯೂ ನನಗೆ ಬೇಜಾರು ಇಲ್ಲ. ಅದಕ್ಕೆ ಹೇಳಿದ್ದು ಅವರು ನನ್ನ ಲವರ್ ಎಂದು" ರಾಮದಾಸ್ ಪ್ರತಿಕ್ರಿಯೆ ನೀಡಿದರು.
ಕಾರ್ಯಕ್ರಮಗಳಿಂದ ದೂರ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಎಸ್. ಎ. ರಾಮದಾಸ್ಗೆ ಸಚಿವ ಸ್ಥಾನ ಕೈತಪ್ಪಿದೆ. ಸೋಮವಾರ ಬಸವರಾಜ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿದ್ದರು.
ಮುಖ್ಯಮಂತ್ರಿಗಳ ಎಲ್ಲಾ ಕಾರ್ಯಕ್ರಮಗಳಿಂದ ಎಸ್. ಎ. ರಾಮದಾಸ್ ದೂರ ಉಳಿದಿದ್ದರು. ಮುಖ್ಯಮಂತ್ರಿಗಳು ಬಿಜೆಪಿ ಕಚೇರಿಗೆ ಭೇಟಿ ನೀಡಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಆ ಕಾರ್ಯಕ್ರಮಕ್ಕೂ ರಾಮದಾಸ್ ಗೈರಾಗಿದ್ದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಕೋವಿಡ್ ಪರಿಸ್ಥಿತಿ ಬಗ್ಗೆ ಸಭೆ ನಡೆಸಿದರು. ಜೆಡಿಎಸ್ ಪಕ್ಷದ ಶಾಸಕರು ಸಭೆಗೆ ಬಂದಿದ್ದರು. ಆದರೆ ರಾಮದಾಸ್ ಆಗಮಿಸಿರಲಿಲ್ಲ. ತಮ್ಮ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.











Click it and Unblock the Notifications