ಜೋರಾಯ್ತು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ವಿಶೇಷ ಪೂಜೆ ಪುನಸ್ಕಾರಗಳು
ಮೈಸೂರು, ಮೇ 19 : ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಧಿಸಲೆಂದು ಹರಕೆ ಹೊತ್ತಿದ್ದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಜೆಡಿಎಸ್ ಕಾರ್ಯಕರ್ತರು ಹರಕೆ ಹೊತ್ತಿದ್ದಾರೆ.
ಇನ್ನೇನು ಕೆಲವೇ ಸಮಯದಲ್ಲಿ ವಿಶ್ವಾಸ ಮತ ಯಾರು ಗೆಲ್ಲಲಿದ್ದಾರೆ ಎಂದು ತಿಳಿಯಲಿದೆ. ಇದೆಲ್ಲದರ ನಡುವೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ತಮ್ಮ ನಾಯಕ ಗೆಲ್ಲಲೆಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು
ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ವಿಧಾನಸಭೆಯಲ್ಲಿ ಬಿಜೆಪಿ ಬಹುಮತವನ್ನು ನಿರ್ವಿಘ್ನವಾಗಿ ಯಾವುದೇ ಅಡೆತಡೆಗಳಿಲ್ಲದೆ ಸಾಬೀತುಪಡಿಸಲಿ ಎಂದು ಮೆಟ್ಟಿಲು ಹತ್ತುವ ಹರಕೆಯನ್ನು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದಾರೆ.
ದುಷ್ಟ ಶಕ್ತಿಯನ್ನು ನಾಶ ಮಾಡಲೆಂದು ಹರಕೆ ಹೊತ್ತ ಕಾರ್ಯಕರ್ತರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾಣದ ಬಹುಮತ : ರಾಜೀನಾಮೆಗೆ ಯಡಿಯೂರಪ್ಪ ಸಿದ್ಧತೆ?
ಇತ್ತ ಎಚ್ ಡಿಕೆ ಹಾಗೂ ಜಿಟಿಡಿ ಅಭಿಮಾನಿಗಳು ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರದ ಕೋಟೆ ಆಂಜನೇಯ ದೇವಾಲಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜಿ.ಟಿ. ದೇವೇಗೌಡ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮತ್ತೊಮ್ಮೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು. ಪ್ರಸ್ತುತ ನಡೆಯುತ್ತಿರುವ ರಾಜಕೀಯ ದೊಂಬರಾಟಗಳು ನಿಲ್ಲಬೇಕೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.