ಬಿಜೆಪಿಯವರು ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ:ಸಚಿವ ಜಿಟಿ ದೇವೇಗೌಡ
ಮೈಸೂರು, ಫೆಬ್ರವರಿ 5: 40, 50 ಕೋಟಿ ಕೊಟ್ಟು ನಮ್ಮ ನಾಯಕರನ್ನು ಬಿಡ್ ಮಾಡುವ ಮೂಲಕ ಬಿಜೆಪಿಯವರು ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಸಚಿವ ಜಿಟಿ ದೇವೇಗೌಡ ಕಮಲ ಪಾಳಯದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಿ. ನರಸೀಪುರದಲ್ಲಿ ನಡೆಯುತ್ತಿರುವ ಕುಂಭಮೇಳದ ಸಿದ್ಧತೆ ವೀಕ್ಷಣೆಗಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಯವರು ಇಂದು ಪಕ್ಷದ ಸಭೆ ನಡೆಸುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಧ್ಯಮದವರೇ ಅವರ ಬೆನ್ನ ಹತ್ತಿದ್ದಾರೆ. ಆ ಸುದ್ದಿಗಳು ಮಾಧ್ಯಮಗಳಲ್ಲಿ ಬರಲೆಂದು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ರಾಜ್ಯದ ಜನ ಏನು ಮೂರ್ಖರಲ್ಲ. ನಾವು ಯಾವುದೇ ಕಾರಣಕ್ಕೂ ಆಪರೇಷನ್ ಗೆ ಮುಂದಾಗುವುದಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ ಎಂದರು.
ಹಿಂದೆ ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಹರಾಜು ನಡೆಸುತ್ತಿದ್ದ ಹಾಗೆ, ಶಾಸಕರನ್ನು 40-50 ಕೋಟಿ ಅಂತ ಬಿಜೆಪಿ ಹರಾಜು ಮಾಡುತ್ತಿದೆ. ಈ ನಿರ್ಧಾರಕ್ಕೆ ಜನರೇ ಬುದ್ಧಿ ಕಲಿಸಲಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿ ಅವರೇ ಬಜೆಟ್ ಮಂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ವಿಶ್ವಪ್ರಸಿದ್ಧ ಕುಂಭಮೇಳದ ಮಾದರಿಯಲ್ಲೇ ಟಿ ನರಸೀಪುರದಲ್ಲಿ ನಡೆಯಲಿರುವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ನಡೆಸಿದರು.
ಸಚಿವರಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ಮತ್ತು ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದರು. "ಉತ್ತರ ಭಾರತದಲ್ಲಿ ನಡೆಯುವ ಕುಂಭಮೇಳ ಮಾದರಿಯಲ್ಲೇ ಇಲ್ಲಿಯೂ ನಡೆಯಲಿದೆ. ಕಾವೇರಿ, ಕಪಿಲ, ನದಿಗಳು ಸಂಗಮಿಸುವ ಪುಣ್ಯ ಕ್ಷೇತ್ರದಲ್ಲಿ ನಡೆಯುವುದರಿಂದ ನಾವೇ ಧನ್ಯರು. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು" ಜಿಟಿಡಿ ತಿಳಿಸಿದರು.












Click it and Unblock the Notifications