ಬೆಂಗಳೂರಿನಲ್ಲಿ ಹಕ್ಕಿಜ್ವರ: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಮೈಸೂರು, ಜನವರಿ, 4 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆ ಮೈಸೂರಿನಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ವೈರಾಣು ಹರಡದಂತೆ ಇಡೀ ಮೃಗಾಲಯಕ್ಕೆ ಔಷಧ ಸಿಂಪಡಣೆ ಮಾಡಲಾಗಿದೆ.
ಎಚ್ಚರ! ಬೆಂಗಳೂರಿಗೆ ಮತ್ತೆ ಬಂದಿದೆ ಹಕ್ಕಿ ಜ್ವರ
ಮೃಗಾಲಯದ ಪಕ್ಷಿಗಳಲ್ಲಿ ರೋಗ ಕಾಣಿಸಿಕೊಳ್ಳುವ ಆತಂಕ ನಿವಾರಿಸಲು ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಿಸಲಾಗುತ್ತಿದೆ. ದೇಶ ವಿದೇಶಗಳಿಂದಲೂ ಹಕ್ಕಿಗಳು ಆಗಮಿಸುವ ಹಿನ್ನೆಲೆಯಲ್ಲಿ ಮೃಗಾಲಯದ ಪೂರ್ತಿ ಔಷಧಿ ಸಿಂಪಡಣೆ ನಡೆಯುತ್ತಿದೆ. ವಿರ್ಕೋನ್ಸ್ ಎಂಬ ಔಷಧಿ ಸಿಂಪಡಣೆ ಮಾಡಲಾಗಿದೆ. ಕಳೆದ ವರ್ಷ ಹಕ್ಕಿ ಜ್ವರ ಭೀತಿಯಿಂದಾಗಿ ಒಂದು ತಿಂಗಳುಗಳ ಕಾಲ ಮೃಗಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅದಕ್ಕಾಗಿ ಈ ಬಾರಿ ಮುಂಜಾಗ್ರತೆಯಾಗಿ ಔಷಧಿ ಸಿಂಪಡಿಸಲಾಗುತ್ತಿದೆ.
ಹಕ್ಕಿಜ್ವರ ಕುರಿತು ಪ್ರತಿಕ್ರಿಯಿಸಿರುವ ಮೃಗಾಲಯ ನಿರ್ದೇಶಕ ರವಿಕುಮಾರ್ , ಮೃಗಾಲಯದಲ್ಲಿ 104 ಬಗೆಯ ಹಕ್ಕಿ ಪಕ್ಷಿಗಳಿವೆ. ಅಧಿಕಾರಿಗಳು ಮೃಗಾಲಯದಲ್ಲಿ ಅನುಮಾನ ಬಂದ ಹಕ್ಕಿಗಳ ಮಾದರಿ ಕಲೆ ಹಾಕಿ ಸಂಗ್ರಹಿಸಿದ ಮಾದರಿಯನ್ನು ಲ್ಯಾಬ್ ನಲ್ಲಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿಯಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಡ್ಯದಲ್ಲೂ ಶುರುವಾಯ್ತು ಹಕ್ಕಿಜ್ವರದ ಆತಂಕ
ಅಷ್ಟೇ ಅಲ್ಲದೇ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ನಗರಪಾಲಿಕೆಯ ಅಧಿಕಾರಿಗಳು ಕೂಡ ಜಾಗೃತರಾಗಿದ್ದಾರೆ. ನಗರ ವ್ಯಾಪ್ತಿಯ ಚಿಕನ್ ಕೇಂದ್ರಗಳು ಹಾಗೂ ಕೋಳಿ ಸಾಗಣೆ ಸ್ಥಳಗಳಿಗೆ ತೆರಳಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಖುದ್ದು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಜೊತೆಗೆ ಹೊರ ರಾಜ್ಯಗಳಿಂದ ಬರುವ ಕೋಳಿಗಳ ಆರೋಗ್ಯದ ಮೇಲೆ ನಿಗಾ ವಹಿಸುವಂತೆಯೂ ಸೂಚಿಸಲಾಗಿದೆ ಎಂದಿದ್ದಾರೆ. ನಗರ ಪಾಲಿಕೆ ಆಯುಕ್ತ ಜಗದೀಶ್ ಒಟ್ಟಿನಲ್ಲಿ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕೆ ವಹಿಸಲಾಗಿದ್ದು ಹಕ್ಕಿ ಜ್ವರದ ಭೀತಿಯಿಂದ ಕೊಂಚ ನಿರಾಳರಾದಂತಾಗಿದ್ದಾರೆ.