ಜಿಟಿ ದೇವೇಗೌಡರ ಮನೆ ಕಾಂಪೌಂಡ್ ಗೆ ಬೈಕ್ ಗುದ್ದಿ ಸವಾರ ಸಾವು
ಮೈಸೂರು, ಜನವರಿ 28: ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ಯುವಕನೊಬ್ಬ ನಿಯಂತ್ರಣ ತಪ್ಪಿ ಕಾಂಪೌಂಡ್ ಗೆ ಗುದ್ದಿದ್ದು, ಕಾಂಪೌಂಡ್ ಗೆ ಅಳವಡಿಸಲಾದ ಕಬ್ಬಿಣದ ಸರಳುಗಳಿಗೆ ಸಿಲುಕಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ವಿಜಯಶ್ರೀಪುರ ನಿವಾಸಿ ರಾಖಿ (20) ಎಂದು ಗುರುತಿಸಲಾಗಿದೆ. ಈತ ನಿನ್ನೆ ರಾತ್ರಿ ಮದ್ಯಪಾನ ಮಾಡಿ ಸ್ಪ್ಲೆಂಡರ್ ಬೈಕ್ ಚಲಾಯಿಸುತ್ತಿದ್ದ. ವಿಜಯ ನಗರ ಟ್ಯಾಂಕ್ ಕಡೆ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್, ಶಾಸಕ ಜಿ.ಟಿ.ದೇವೇಗೌಡರ ಮನೆಯ ಕಾಂಪೌಂಡ್ ಗೆ ಗುದ್ದಿದ್ದು, ಕಾಂಪೌಂಡ್ ಗೆ ಅಳವಡಿಸಲಾದ ಕಬ್ಬಿಣದ ಸರಳು ಯುವಕನ ಕತ್ತಿನೊಳಗೆ ಹೊಕ್ಕಿದೆ. ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಕೆ.ಆರ್.ಶವಾಗಾರಕ್ಕೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications