ಭಾರತ್ ಜೋಡೋ ಯಾತ್ರೆ: ನಂಜನಗೂಡಿನ ಬದನವಾಳುಗೆ ಬಂದ ರಾಹುಲ್ ಗಾಂಧಿ ಪಾದಯಾತ್ರೆ
ಮೈಸೂರು, ಅಕ್ಟೋಬರ್, 02: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಭಾನುವಾರ ಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಭಾಗವಹಿಸಿ ಮಹಾತ್ಮ ಗಾಂಧಿ ಪುತ್ಥಳಿಗೆ ಗೌರವ ಸಲ್ಲಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಹಾತ್ಮ ಗಾಂಧಿಯವರು 1927ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಚಾಲನೆ ನೀಡಿದ್ದರು. ಇಲ್ಲಿಗೆ ಇದೀಗ ರಾಹುಲ್ ಗಾಂಧಿಯೊಂದಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಲ್ಲಿಯ ನೇಕಾರರೊಂದಿಗೆ ಮಾತುಕತೆ ನಡೆಸಿದರು. ಭಾರತ ಐಕ್ಯತಾ ಯಾತ್ರೆ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸಿರುವ ರಾಹುಲ್ ಗಾಂಧಿ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಶ್ರಮದಾನದಲ್ಲಿ ಭಾಗಿ ಆಗಿದ್ದಾರೆ.
ಗುಡಿ ಕೈಗಾರಿಕೆ ಮಹತ್ವ ಸಾರಿದ್ದ ಗಾಂಧೀಜಿ; ಮೈಸೂರು ನಗರದಿಂದ 34 ಹಾಗೂ ನಂಜನಗೂಡು ನಗರದಿಂದ 11 ಕಿಲೋ ಮೀಟರ್ ದೂರದಲ್ಲಿ ಚಾಮರಾಜನಗರಕ್ಕೆ ತೆರಳುವ ಮಾರ್ಗದಲ್ಲಿರುವ ಬದನವಾಳು ಗ್ರಾಮ ಹಲವು ಇತಿಹಾಸ ಹಿನ್ನೆಲೆ ಹೊಂದಿದೆ. ದೇಶವಾಸಿಗಳಿಗೆ ಗುಡಿ ಕೈಗಾರಿಕೆ ಮಹತ್ವ ಸಾರಿದ್ದ ಗಾಂಧೀಜಿ 1927ರಲ್ಲಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದರು. ಜನರಿಗೆ ಗುಡಿ ಕೈಗಾರಿಕೆ ಆರಂಭಿಸಲು ಪ್ರೇರಣೆ ನೀಡಿದ್ದರು. ಪರಿಣಾಮ ಇಂದಿಗೂ ಈ ಗ್ರಾಮದಲ್ಲಿ ನೂಲು ಉತ್ಪಾದನೆ ಮತ್ತು ಖಾದಿ ಬಟ್ಟೆ ತಯಾರಿಕೆ ನಡೆಯುತ್ತಿದ್ದು, 80ಕ್ಕೂ ಹೆಚ್ಚು ಜನ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಲ್ಲಿನ ಖಾದಿ ಕೇಂದ್ರ ಪುನಶ್ವೇತನಕ್ಕೆ ಬಹು ಹಿಂದಿನಿಂದಲೂ ಸ್ಥಳೀಯರು ಒತ್ತಡ ಹೇರಿದ್ದರು.

ಬದನವಾಳು ಗ್ರಾಮದ ಇತಿಹಾಸ; ಖಾದಿ ಕೇಂದ್ರದ ಭೇಟಿ ಆವರಣದಲ್ಲಿ 1927ರಲ್ಲಿ 'ಬದನವಾಳು ನೂಲುವ ಪ್ರಾಂತ್ಯ' ಎಂಬ ಕಲ್ಲನ್ನು ಗಾಂಧಿ ಶಿಲಾನ್ಯಾಸ ಮಾಡಿರುವ ಕುರುಹು ಈಗಲೂ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಖಾದಿ ಕೇಂದ್ರದಲ್ಲಿ ಬಟ್ಟೆ, ಅವಲಕ್ಕಿ, ಎಣ್ಣೆ, ಬೆಂಕಿಪಟ್ಟಣ, ಕಾಗದ ಸೇರಿದಂತೆ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಹೀಗಾಗಿ 1932ರಲ್ಲಿ ಮತ್ತೊಮ್ಮೆ ಗಾಂಧೀಜಿ ಇಲ್ಲಿ ಚಟುವಟಿಕೆಗಳನ್ನು ಪರಿಶೀಲಿಸಿದ್ದರು. ಇದೀಗ ಇಲ್ಲಿ ಖಾದಿ ಬಟ್ಟೆ ತಯಾರಿಕೆ ಮಾತ್ರ ನಡೆಯುತ್ತಿದೆ.
ಚಾಮರಾಜನಗರದಲ್ಲಿ "ಭಾರತ್ ಜೋಡೋ" ಯಾತ್ರೆ; ಈಗಾಗಲೇ ಭಾರತ್ ಜೋಡೋ ಯಾತ್ರೆ ವಿರುದ್ದ ಮುಗಿಬಿದ್ದಿರುವ ಬಿಜೆಪಿಗರು ಈಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿರುದ್ದ ಬಂಡೀಪುರ ಕಾಡಿನಲ್ಲಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಗುಂಡ್ಲುಪೇಟೆ ಬಿಜೆಪಿ ಮಂಡಲ ಆರೋಪಿಸಿದೆ.
ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸುವಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಣಸೆಮರದ ರಸ್ತೆಯ ಬಳಿ ರಾಹುಲ್ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ. ಜೆ. ಜಾರ್ಜ್, ಎಚ್.ಸಿ ಮಹದೇವಪ್ಪ ಅರಣ್ಯ ನಿಯಮವನ್ನು ಗಾಳಿಗೆ ತೂರಿ ವಾಹನಗಳನ್ನು ನಿಲ್ಲಿಸಿ ಅವರನ್ನು ಸ್ವಾಗತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ ಅರಣ್ಯದ ನಡುವೆ ವಾಹನಗಳನ್ನು ಪಾರ್ಕ್ ಮಾಡಿದ್ದಾರೆ. ಇದು ಕಾಯ್ದೆಯಡಿ ಅಪರಾಧವಾಗಿದೆ, ಸಾಮಾನ್ಯ ಪ್ರವಾಸಿಗರು ಕಾಡಿನ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿದರೆ ದಂಡ ವಿಧಿಸಲಾಗುತ್ತದೆ. ಕಾಂಗ್ರೆಸ್ ನಾಯಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗೆ ಬಿಜೆಪಿ ಮುಖಂಡರು ಮನವಿಮನವಿ ಸಲ್ಲಿಸಿದ್ದರು.












Click it and Unblock the Notifications