ಮೈಸೂರಿನಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಪೋಸ್ಟರ್ ಬಿಡುಗಡೆ
ಮೈಸೂರು, ಜನವರಿ 29: ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ "ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2020-ಗಾಂಧಿ ಪಥ" ಪೋಸ್ಟರ್ ಅನ್ನು ಹಿರಿಯ ರಂಗಕರ್ಮಿ, ಪ್ರಶಸ್ತಿ ಪುರಸ್ಕೃತ ಎಚ್.ಕೆ.ರಾಮನಾಥ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, "ಬಹುರೂಪಿಗೆ 19 ವರ್ಷ ತುಂಬಿದೆ. ಪ್ರಸನ್ನರವರು ಬಹುರೂಪಿ ಆರಂಭ ಮಾಡಿದ್ದು, ಮೈಸೂರಿಗೆ ಬಂದಿದ್ದು ಒಂದು ಕಳೆ ತಂದಿದೆ. ರಂಗಭೂಮಿಯ 64 ಕಲೆಗಳಲ್ಲಿ ಇದೂ ಒಂದು. ಈ ಮೂಲಕ ಹೆಚ್ಚು ಹೆಚ್ಚು ಕಲೆ ಅಭಿವೃದ್ಧಿಯಾಗಬೇಕು. ನಾನು ಈ ವರ್ಷದ ಬಹುರೂಪಿ 2020ರ ಪೋಸ್ಟರ್ ಅನ್ನು ಬಹಳ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ. ಇದು ಯಶಸ್ವಿಯಾಗಿ ನಡೆಯಲಿ" ಎಂದು ಹಾರೈಸಿದರು.
ರಂಗಾಯಣ ನಿರ್ದೇಶಕ ಅಡ್ಡಂಡ.ಸಿ.ಕಾರ್ಯಪ್ಪ ಮಾತನಾಡಿ, "ಮಹಾತ್ಮ ಗಾಂಧಿ ಅವರ ಜನ್ಮದಿನದ 150ನೇ ವರ್ಷದ ನೆನಪಿಗಾಗಿ ಗಾಂಧಿ ಪಥ ಎಂಬ ಶೀರ್ಷಿಕೆಯಲ್ಲಿ ಮೈಸೂರಿನಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2020 ಅನಾವರಣಗೊಳ್ಳಲಿದೆ. ಫೆ.14 ರಿಂದ 19ರವರೆಗೆ ಬಹುರೂಪಿ ನಾಟಕೋತ್ಸವ ನಡೆಯಲಿದೆ. ಫೆ.14 ರಂದು ಸಂಜೆ 5.30ಕ್ಕೆ ರಂಗಾಯಣದ ವನರಂಗದಲ್ಲಿ ಖ್ಯಾತ ರಂಗಭೂಮಿ, ಚಲನಚಿತ್ರ ನಟ ಅನಂತ್ ನಾಗ್ ಬಹುರೂಪಿಗೆ ಚಾಲನೆ ನೀಡಲಿದ್ದಾರೆ" ಎಂದರು.

ಈ ಭಾರಿಯ ವಿಶೇಷಗಳಲ್ಲಿ ಕನ್ನಡ ಆಧುನಿಕ ರಂಗಭೂಮಿಯಲ್ಲಿ "ಮುಖ್ಯಮಂತ್ರಿ" ನಾಟಕ ಐತಿಹಾಸಿಕ ದಾಖಲೆ ಮಾಡಿದ್ದು, ಈ ನಾಟಕ ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿದೆ. 700ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ಕಂಡಿರುವ ಈ ನಾಟಕ ಇತಿಹಾಸದಲ್ಲಿ ಗಮನ ಸೆಳೆದಿದೆ. ವೃತ್ತಿ ರಂಗಭೂಮಿಯನ್ನು ಗೌರವಿಸುವ ದೃಷ್ಟಿಯಿಂದ ಸಿದ್ಧಗೊಳಿಸಿದ ಮೈಸೂರಿನ ನಟನ ರಂಗಶಾಲೆಯ ಸುಭದ್ರ ಕಲ್ಯಾಣ ನಾಟಕ ಪ್ರದರ್ಶನಗೊಳ್ಳಲಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ಸಂಗೀತಗಾರ ಪರಮಶಿವಯ್ಯನವರನ್ನು ಈ ಸಂದರ್ಭದಲ್ಲಿ "ಗಾಂಧಿ ಪಥ-ರಂಗಗೌರವ' ನೀಡಿ ಗೌರವಿಸಲಾಗುವುದು ಎಂದರು.
ಪಾಪು ಗಾಂಧಿ ಗಾಂಧಿ ಬಾಪು, ಗಾಂಧಿ ಪಥಕ್ಕೆ ಸಂಬಂಧಿಸಿದ 7 ಚಲನಚಿತ್ರ, 10 ಸಾಕ್ಷ್ಯಚಿತ್ರ ಸೇರಿದಂತೆ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕಗಳ ಜೊತೆಗೆ ಕನ್ನಡ ನಾಡಿನ ದೇಸಿಯ ಆಹಾರ ಮಳಿಗೆ ಮಾಡುವ ಉದ್ದೇಶದಿಂದ 10 ದೇಸಿ ಆಹಾರ ಮಳಿಗೆಗಳಲ್ಲಿ ಮಲೆನಾಡು, ಕರಾವಳಿ, ಉತ್ತರ ಕನ್ನಡ, ಕೊಡವ, ಕಲ್ಯಾಣ ಕರ್ನಾಟಕ ವಿಶೇಷ ದೇಶಿ ಆಹಾರ ಹಾಗೂ ಕರಕುಶಲ ಮಳಿಗೆ, ಗಾಂಧಿ ಪ್ರತಿಮೆ, ಸರಕು, ಪುರಾತನ ನಾಣ್ಯ, ನೋಟು ಸಂಗ್ರಹ ಪ್ರದರ್ಶನ, ಪುಸ್ತಕ ಮಳಿಗೆಗಳಿರುತ್ತದೆ ಎಂದು ಮಾಹಿತಿ ನೀಡಿದರು.












Click it and Unblock the Notifications