ಮಾದರಿಯಾದ ಮೈಸೂರು ಜಿಲ್ಲಾಧಿಕಾರಿಗಳ ನಡೆ!
ಮೈಸೂರು, ಜೂನ್ 14; ಅಧಿಕಾರದ ಅಹಂನಲ್ಲಿ ದರ್ಪ ತೋರುವ ಅಧಿಕಾರಿಗಳ ನಡುವೆ ಮೈಸೂರಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಇತರರಿಗೆ ಮಾದರಿಯಾಗಿದ್ದಾರೆ. ಸರಳತೆ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಗಾದಿ ಗೌತಮ್, "ತಾವೊಬ್ಬ ಲೋಪ್ರೊಫೈಲ್ ಅಧಿಕಾರಿ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದರು. ಈ ಮಾತಿಗೆ ಪೂರಕ ಎಂಬಂತೆ ಅವರು ನಡೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳು ಸೋಮವಾರ ಕರ್ತವ್ಯದ ಮೇಲೆ ನಂಜನಗೂಡಿಗೆ ಭೇಟಿ ನೀಡಿದ್ದರು. ಈ ವೇಳೆ ನಂಜನಗೂಡಿನ ನಂಜುಂಡೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಆದರೆ ಅವರು ದೇವಾಲಯದ ಒಳಗೆ ಹೋಗಲಿಲ್ಲ. ಬದಲಾಗಿ ಹೊರಗಿನಿಂದಲೇ ಶ್ರೀಕಂಠೇಶ್ವರಸ್ವಾಮಿಗೆ ಕೈಮುಗಿದು ನಮಸ್ಕಾರ ಮಾಡಿದರು.

ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರ ಭೇಟಿಗೆ ಅವಕಾಶ ನಿರ್ಬಂಧಿಸಲಾಗಿದೆ. ಆದರೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ದೇವಾಲಯಕ್ಕೆ ಭೇಟಿ ನೀಡಲು ಕಾನೂನಿನಲ್ಲಿ ಅವಕಾಶವಿದ್ದರೂ, ಈ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದ ಬಗಾದಿ ಗೌತಮ್ ಹೊರಗಿನಿಂದಲೇ ನಮಸ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆಗಿದ್ದ ಸ್ಥಳೀಯ ಶಾಸಕ ಹರ್ಷವರ್ಧನ್ ಸೇರಿದಂತೆ ಹಲವು ಅಧಿಕಾರಿಗಳು ಸಹ ಕೋವಿಡ್-19 ನಿಯಮವನ್ನು ಮೀರಿ ದೇವಾಲಯದ ಒಳಗೆ ಹೋಗುವ ಮನಸ್ಸು ಮಾಡಲಿಲ್ಲ.
ಒಟ್ಟಾರೆ ಅಧಿಕಾರಕ್ಕೆ ಅಂಟಿಕೊಂಡು ತಮ್ಮದೇ ಹಾದಿಯಲ್ಲಿ ನಡೆಯುವ ಅಧಿಕಾರಿಗಳ ನಡುವೆ ಡಾ. ಬಗಾದಿ ಗೌತಮ್ ಸರಳತೆ ನಿಜಕ್ಕೂ ಮಾದರಿಯಾಗಿದೆ. ಜನರು ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications