ಮೈಸೂರು; ದೇವರಾಜ ಪೊಲೀಸ್ ಠಾಣೆಯಲ್ಲಿ ಸೀಮಂತ ಕಾರ್ಯ
ಮೈಸೂರು, ಮಾರ್ಚ್ 07: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಮಯದ ಪರಿವೇ ಇಲ್ಲದೆ ಕೆಲಸ ಮಾಡುತ್ತಾರೆ. ನಿತ್ಯ ಪೊಲೀಸ್ ಠಾಣೆಗೆ ದೂರುಗಳನ್ನು ಹೊತ್ತು ಜನರು ಆಗಮಿಸುತ್ತಾರೆ. ಆರೋಪಿಗಳ ವಿಚಾರಣೆಯಲ್ಲಿ ಠಾಣೆಯಲ್ಲಿ ನಡೆಸಲಾಗುತ್ತದೆ.
ಭಾನುವಾರ ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಹಬ್ಬದ ಸಂಭ್ರಮ ಠಾಣೆಯಲ್ಲಿ ಮನೆ ಮಾಡಿತ್ತು. ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ರೇಖಾ ಅವರ ಸೀಮಂತ ಕಾರ್ಯವನ್ನು ಸಿಬ್ಬಂದಿಗಳು ಮಾಡಿ ಸಂಭ್ರಮಪಟ್ಟರು.
ಸದಾ ಜನರ ದೂರುಗಳ ಬಗ್ಗೆಯೇ ಚಿಂತಿಸುವ ಠಾಣೆಯ ಸಿಬ್ಬಂದಿಗಳು ಭಾನುವಾರ ಸಹೋದ್ಯೋಗಿಯ ಸೀಮಂತ ಕಾರ್ಯದಲ್ಲಿ ಸಂಭ್ರಮಿಸಿದರು. ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿಗಳು ಸೀಮಂತ ಕಾರ್ಯದಲ್ಲಿ ತೊಡಗಿ ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಶುಭ ಹಾರೈಸಿದರು.

ರೇಖಾ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿ. ಕಳೆದ 4 ವರ್ಷಗಳಿಂದ ದೇವರಾಜ ಪೊಲೀಸ್ ಠಾಣೆಯಲ್ಲಿ ರೇಖಾ ಕಾರ್ಯ ನಿರ್ವಹಿಸುತ್ತಿದ್ದಾರೆ. ರೇಖಾ ಪತಿ ರಾಜೇಶ್ ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಸಬ್ ಇನ್ಸ್ಪೆಕ್ಟರ್ ದಿವಾಕರ್, ಪಿಎಸ್ಐಗಳಾದ ರಾಜು, ಲೀಲಾವತಿ ನೇತೃತ್ವದಲ್ಲಿ ಸೀಮಂತ ಕಾರ್ಯ ನಡೆಯಿತು. ಬಳೆ ತೊಡಿಸಿ, ಹೂವು ಮೂಡಿಸಿ ಸಂಪ್ರದಾಯದಂತೆ ಸೀಮಂತ ಕಾರ್ಯ ಮಾಡಲಾಯಿತು.

ಠಾಣೆಯ ಸಿಬ್ಬಂದಿಗಳ ಶುಭ ಹಾರೈಕೆ ಕಂಡು ರೇಖಾ ಭಾವುಕರಾದರು. ಮನೆಯಲ್ಲಿ ಸಿಗುವಂತೆ ಆತ್ಮೀಯತೆ ಠಾಣೆಯಲ್ಲಿ ಸಿಕ್ಕಿದೆ ಎಂದು ಸಂತಸಪಟ್ಟರು. ಪೊಲೀಸ್ ಠಾಣೆಗಳು ಜನಸ್ನೇಹಿ ಮಾತ್ರವಲ್ಲ, ಸಿಬ್ಬಂದಿ ನಡುವಿನ ಸ್ನೇಹ, ಬಾಂಧವ್ಯಕ್ಕೂ ಸಾಕ್ಷಿಯಾಗುತ್ತವೆ ಎಂಬುದು ಸಾಬೀತಾಯಿತು.












Click it and Unblock the Notifications