ಆನೆ ಮರಿಗೆ 'ಪಾರ್ವತಿ' ಎಂದು ಹೆಸರಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 11 : 13 ವರ್ಷದ ಬಳಿಕ ಮೈಸೂರು ಮೃಗಾಲಯದಲ್ಲಿ ಆನೆ ಮರಿ ಜನನವಾಗಿದ್ದು, ಅದಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರ್ವತಿ ಎಂದು ನಾಮಕರಣ ಮಾಡಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ಬಹಿರಂಗವಾಗಿ ತಮ್ಮ ಪತ್ನಿ ಮೇಲೆ ಪ್ರೀತಿ ತೋರ್ಪಡಿಸಿಲ್ಲ. ಅಷ್ಟೆ ಅಲ್ಲ, ಪತ್ನಿ ವಿಚಾರವನ್ನು ಅಷ್ಟಾಗಿ ಮಾತನಾಡಿಲ್ಲ. ಆದರೆ ಮೈಸೂರು ಮೃಗಾಲಯದಲ್ಲಿನ ಹೆಣ್ಣು ಆನೆ ಮರಿಗೆ ಕಾಕತಾಳೀಯ ಎಂಬಂತೆ ತಮ್ಮ ಪತ್ನಿಯ ಹೆಸರಾದ 'ಪಾರ್ವತಿ' ಎಂದು ನಾಮಕರಣ ಮಾಡಿದ್ದಾರೆ.

ಮೃಗಾಲಯ ಅಧಿಕಾರಿಗಳು ನೀಡಿದ ಹೆಸರನ್ನು ಸಿದ್ದರಾಮಯ್ಯ ಮೈಕ್ ಮೂಲಕ ಘೋಷಿಸಿದರು. ಆದರೆ ಕಾಕಾತಾಳೀಯ ಎಂಬಂತೆ 'ಪಾರ್ವತಿ' ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹೆಸರು ಕೂಡ ಹೌದು. ಇದೇ ಸಂದರ್ಭದಲ್ಲಿ ಬ್ಯಾಟರಿ ಚಾಲಿತ ವಾಹನದಲ್ಲಿ ಮೃಗಾಲಯವನ್ನು ಒಂದು ಸುತ್ತು ಹಾಕಿ ಬಾಲ್ಯವನ್ನು ನೆನಪಿಸಿಕೊಂಡರು.
ಸಿಎಂ ಪತ್ನಿ ಹೆಸರಾಗಿರುವ ಕಾರಣ ಇದೇ ಹೆಸರು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಐರಾವತಿ ಹಾಗೂ ಅಭಿಮನ್ಯು ಎಂಬ ಆನೆಗಳಿಗೆ ಜನಿಸಿದ್ದ ಹೆಣ್ಣು ಮರಿ ಆನೆ ಇದು. ಮೈಸೂರು ಮೃಗಾಲಯದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ನಾಮಕರಣ ಮಾಡಿದರು.

ಮೃಗಾಲಯ ಜನಾಕರ್ಷಣೀಯವಾಗಬೇಕು
ಮೈಸೂರು ಮೃಗಾಲಯ ವಿಶ್ವದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿದ್ದು, ನೂರಾ ಇಪ್ಪತ್ತೈದನೇ ವರ್ಷಕ್ಕೆ ಕಾಲಿಟ್ಟಿದೆ. ಚಾಮರಾಜೇಂದ್ರ ಒಡೆಯರ್ ಅವರು 1892ರಲ್ಲಿ ನಿರ್ಮಿಸಿದ್ದರಿಂದ ಅವರ ಹೆಸರನ್ನೇ ಮೃಗಾಲಯಕ್ಕಿಡಲಾಗಿದೆ.
ಮೈಸೂರು ನಗರಕ್ಕೆ ಮೃಗಾಲಯವು ಭೂಷಣದಂತಿದ್ದು, ಮತ್ತಷ್ಟು ಜನಾಕರ್ಷಣೀಯಗೊಳಿಸಲು ಜಗತ್ತಿನ ಎಲ್ಲ ಪ್ರಾಣಿಗಳು ಮೃಗಾಲಯದಲ್ಲಿರಬೇಕು. ಮೃಗಾಲಯಕ್ಕೆ ವಿಶ್ವದ ಎಲ್ಲ ಪ್ರಾಣಿಗಳನ್ನು ತಂದು ಮತ್ತಷ್ಟು ಆಕರ್ಷಣೀಯಗೊಳಿಸಬೇಕು ಹಾಗೂ ರಾತ್ರಿ ಸಫಾರಿ ಕೂಡ ಆರಂಭಿಸಬೇಕು. ಆಗ ವಿಶ್ವದ ಪ್ರಮುಖ ಮೃಗಾಲಯಗಳ ಸಾಲಿನಲ್ಲಿ ನಿಲ್ಲುತ್ತದೆ. ಜನಾಕರ್ಷಣೆಗೆ ಒಳಗಾಗಲಿದೆ ಎಂದು ಹೇಳಿದರು.
ಮತ್ತೆ ಸಂಧಿ ಬಗ್ಗೆ ಪಾಠ ಮಾಡಿದ ಮುಖ್ಯಮಂತ್ರಿ
ಮೈಸೂರಿನ ಮೃಗಾಲಯದಲ್ಲಿ ಸಿಎಂ ಸಂಧಿ ಪಾಠ ಮಾಡಿದ್ದಾರೆ. ಮೃಗ + ಆಲಯ ಇದು ಸವರ್ಣದೀರ್ಘ ಸಂಧಿ. ಗುಣಸಂಧಿ ಅಂದರೆ ಏನು ಗೊತ್ತಾ ಎಂದು ಸಿಎಂ ಸಭಿಕರನ್ನು ಪ್ರಶ್ನೆ ಮಾಡಿದರು.












Click it and Unblock the Notifications