ಮೈಸೂರಲ್ಲಿ ಗೆಲ್ಲಲು ದೇವೇಗೌಡ, ಎಚ್ಡಿಕೆ ಮಾಸ್ಟರ್ ಪ್ಲಾನ್!
Recommended Video

ಮೈಸೂರು, ಡಿಸೆಂಬರ್ 28 : 2018ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ಪರ್ಧೆಯೊಡ್ಡಲು ಜೆಡಿಎಸ್ ನಿರ್ಧರಿಸಿದೆ. ಇದಕ್ಕಾಗಿ ಪಕ್ಷ ರಣತಂತ್ರವನ್ನು ರೂಪಿಸುತ್ತಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವರುಣಾದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಇವೆರಡು ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಜೆಡಿಎಸ್ ತಂತ್ರ ಹಣೆಯಲಿದೆ.
ಚಿತ್ರಗಳು : ಕುಮಾರಸ್ವಾಮಿಯ ವಿಕಾಸ ವಾಹಿನಿ ಯಾತ್ರೆ ಆರಂಭ
ಸಂಕ್ರಾಂತಿ ಬಳಿಕ ರಾಜ್ಯದ ರಾಜಕೀಯ ವಿದ್ಯಮಾನಗಳು ಗರಿಗೆದರಲಿವೆ. ಸತತ ಮೂರು ತಿಂಗಳ ಕಾಲ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ವಾರ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದು, ಪಕ್ಷ ಗೆಲುವಿಗೆ ಬೇಕಾದ ತಂತ್ರ, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಮುಂತಾದ ಯೋಜನೆಗಳನ್ನು ರೂಪಿಸಲಿದ್ದಾರೆ.
ಜೆಡಿಎಸ್ ಮೈಸೂರು ವ್ಯಾಪ್ತಿಗೆ ಸೇರುವ ಚಾಮುಂಡೇಶ್ವರಿ, ವರುಣಾ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಟಿ.ನರಸೀಪುರ, ಎಚ್.ಡಿ.ಕೋಟೆ, ನಂಜನಗೂಡು, ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ನೀಡಲು ಮೂರು ದಿನ ಕ್ಷೇತ್ರವಾರು ನಿರಂತರ ಸಭೆಯನ್ನು ಆಯೋಜನೆ ಮಾಡಿದೆ.

ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ
ಚಾಮುಂಡೇಶ್ವರಿಗೆ ಜಿ.ಟಿ.ದೇವೇಗೌಡ, ಕೆ.ಆರ್.ನಗರಕ್ಕೆ ಸಾ.ರಾ.ಮಹೇಶ್, ಹುಣಸೂರು ಕ್ಷೇತ್ರಕ್ಕೆ ಎಚ್.ವಿಶ್ವನಾಥ್, ಪಿರಿಯಾಪಟ್ಟಣಕ್ಕೆ ಮಹದೇವ್, ಚಾಮರಾಜಕ್ಕೆ ಪ್ರೊ.ರಂಗಪ್ಪ, ನರಸಿಂಹರಾಜ ಕ್ಷೇತ್ರದಿಂದ ಸಂದೇಶ್ಸ್ವಾಮಿ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.

ಜನವರಿ ಅಂತ್ಯಕ್ಕೆ ಪ್ರಚಾರ ಆರಂಭ
ಉಳಿದ ಕ್ಷೇತ್ರಗಳಿಗೆ ಜನವರಿ ಅತ್ಯಂದ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿ, ಪ್ರಚಾರ ಪ್ರಾರಂಭಿಸುವಂತೆ ಸೂಚನೆ ನೀಡಲು ಪಕ್ಷ ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯದ ಮತಗಳ ಕ್ರೊಢೀಕರಣಕ್ಕೆ ಪಕ್ಷ ಆದ್ಯತೆ ನೀಡಲಿದೆ.

ಕುಮಾರಸ್ವಾಮಿ ಹೇಳುವುದೇನು?
'ಮುಂದಿನ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಗುರಿ. ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರಗಳಂತೂ ಜೆಡಿಎಸ್ಗೆ ಪ್ರತಿಷ್ಠೆಯಾಗಿದೆ' ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಂಡಾಯದ ಬಿಸಿಯೂ ಇದೆ
ಜೆಡಿಎಸ್ ಪಕ್ಷಕ್ಕೆ ಬಂಡಾಯದ ಬಿಸಿಯೂ ತಟ್ಟಲಿದೆ. ಚಾಮರಾಜ ಕ್ಷೇತ್ರದಲ್ಲಿ 2018ರ ಚುನಾವಣೆ ಅಭ್ಯರ್ಥಿಯಾಗಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಘೋಷಣೆ ಮಾಡಲಾಗಿದೆ. ಇದರಿಂದ ಕೆ.ಹರೀಶ್ ಗೌಡ ಅವರು ಅಸಮಾಧಾನಗೊಂಡಿದ್ದಾರೆ. ಹರೀಶ್ ಗೌಡ ಅವರನ್ನು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಸ್ಥಾನದಿಂದಲೂ ಪಕ್ಷ ವಜಾ ಮಾಡಿದ್ದು ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.

ಕುಮಾರಪರ್ವ ಸಮಾವೇಶ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ತಮ್ಮ ಕುಮಾರಪರ್ವ ಸಮಾವೇಶಕ್ಕೆ ಚಾಲನೆ ನೀಡಿದ್ದರು. ಮೈಸೂರಿನಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ಈ ತಂತ್ರ ಅನುಸರಿಸಲಾಗಿತ್ತು.












Click it and Unblock the Notifications