ವಿಧಾನಸಭೆ ಚುನಾವಣೆ 2023; ವರುಣಾ ಕ್ಷೇತ್ರದ ಟಿಕೆಟ್ಗೆ ಮುಗಿಬಿದ್ದ ಬಿಜೆಪಿ ನಾಯಕರು
ಮೈಸೂರು, ಡಿಸೆಂಬರ್, 18: ಸಿದ್ದರಾಮಯ್ಯ ಅವರ ಗೆಲುವಿನ ಕ್ಷೇತ್ರ ಮತ್ತು ಪುತ್ರ ಯತೀಂದ್ರ ಅವರಿಗೆ ರಾಜಕೀಯ ಬದುಕಿನ ಹಾದಿ ತೋರಿಸಿಕೊಟ್ಟ ಮೈಸೂರಿನ ವರುಣಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ಆದರೂ ಕೂಡ ಈ ಬಾರಿ ಇಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿರುವುದು ಅಚ್ಚರಿ ಮೂಡಿಸಿದೆ.
ಈ ಬಾರಿ ಯತೀಂದ್ರ ಸಿದ್ದರಾಮಯ್ಯ ಅವರೇ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರಿಗೆ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಲು ಬಿಜೆಪಿಯಲ್ಲಿ ಹತ್ತಾರು ಮಂದಿ ಆಕಾಂಕ್ಷಿಗಳಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇವರ ಪೈಕಿ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ ಪಕ್ಷದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಬಯಕೆಗಳಿರುವುದು ಸಹಜ. ಆದರೆ ಕ್ಷೇತ್ರದಲ್ಲಿ ಮತವನ್ನು ಪಡೆಯುವ, ವರ್ಚಸ್ಸು ಹೊಂದಿರುವ ನಾಯಕನ ಅಗತ್ಯತೆ ಇರುವುದರಿಂದ ಗೆಲುವಿನ ಕುದುರೆಯನ್ನು ಪಕ್ಷ ಬಯಸುತ್ತದೆ.
ಚುನಾವಣೆಗೆ ಅಂದ್ಮೇಲೆ ಪಕ್ಷ ಹಣ ಕೊಡುವುದು ಸಹಜ: ಲೆಕ್ಕ ಕೇಳಲು ಶ್ರೀನಿವಾಸ ಪ್ರಸಾದ್ ಯಾರು? ಎಚ್.ವಿಶ್ವನಾಥ್ ಪ್ರಶ್ನೆ
ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಿದ್ದು, ಬಿಜೆಪಿಯಲ್ಲಿ ಮಾತ್ರ ಹೆಚ್ಚಿನ ನಾಯಕರು ನನಗೆ ಟಿಕೆಟ್ ಕೊಡಿ, ನಾನು ಸ್ಪರ್ಧಿಸುತ್ತೇನೆ ಎಂಬ ಬಯಕೆಯನ್ನು ಮುಂದಿಟ್ಟಿರುವುದು ಎದ್ದು ಕಾಣಿಸುತ್ತಿದೆ. ಈ ಪೈಕಿ 2008ರಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋಲು ಕಂಡ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ ಪ್ರಮುಖರಾಗಿದ್ದಾರೆ. ಇದೀಗ ಅವರು ನನಗೆ ಮತ್ತೊಮ್ಮೆ ಟಿಕೆಟ್ ಕೊಡಿ ಎಂದು ನಾಯಕರ ಮುಂದೆ ಬೇಡಿಕೆ ಇಟ್ಟಿರುವುದು ಗಮನ ಸೆಳೆದಿದೆ.
ಕುತೂಹಲಕ್ಕೆ ಕಾರಣವಾದ ನಾಯಕರ ನಡೆ
ಇನ್ನು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರುಸ್ವಾಮಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮೈಸೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಶರತ್ ಪುಟ್ಟಬುದ್ಧಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರ ನಡುವೆ ಒಬ್ಬರನ್ನು ಆಯ್ಕೆ ಮಾಡುತ್ತಾರಾ? ಅಥವಾ ಗೆಲ್ಲುವ ಕುದುರೆಯನ್ನು ತಂದು ಇಲ್ಲಿ ನಿಲ್ಲಿಸುತ್ತಾರಾ? ಎಂಬುದು ಬಿಜೆಪಿಯಲ್ಲಿ ಆಗುವ ಕೊನೆಯ ಬದಲಾವಣೆ ಬಳಿಕ ಗೊತ್ತಾಗಲಿದೆ.
ಸಿದ್ದರಾಮಯ್ಯರಿಂದ ಗೆಲುವಿನ ಕ್ಷೇತ್ರದ ಹುಡುಕಾಟ
ಕಾಂಗ್ರೆಸ್ನಲ್ಲಿಯೂ ಈ ಬಗ್ಗೆ ಗೊಂದಲವಿದೆ. ಈಗಾಗಲೇ ಗೆಲುವಿನ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವ ಸಿದ್ದರಾಮಯ್ಯ ಅಂತಿಮವಾಗಿ ವರುಣಾದಿಂದಲೇ ಸ್ಪರ್ಧಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಒಂದು ವೇಳೆ ಅವರು ಕ್ಷೇತ್ರದತ್ತ ಒಲವು ತೋರದೆ ಹೋದರೆ ಪುತ್ರ ಯತೀಂದ್ರ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಜೆಡಿಎಸ್ನಲ್ಲಿ ಕ್ಷೇತ್ರದತ್ತ ಯಾರೂ ಹೆಚ್ಚಿನ ಗಮನಹರಿಸಿದಂತೆ ಕಾಣಿಸುತ್ತಿಲ್ಲ. ಆದರೆ ಅಭಿಷೇಕ್ ಮಣಿಗಾರ್ ಈ ಬಾರಿಯೂ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಯತೀಂದ್ರ ಅವರ ಬದಲಿಗೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸಿದರೆ ರಾಜಕೀಯ ಲೆಕ್ಕಾಚಾರಗಳು ಬದಲಾಗಲಿವೆ. ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. ಆ ಸಂದರ್ಭ ಏನಾದರೂ ಎದುರಾದರೆ ವರುಣಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಪುತ್ರ ಯತೀಂದ್ರಗೆ ಕ್ಷೇತ್ರ ಬಿಟ್ಟುಕೊಟ್ಟ ಸಿದ್ದು
ಒಂದು ವೇಳೆ ತಾವು ಪ್ರತಿನಿಧಿಸಿ ಮುಖ್ಯಮಂತ್ರಿಯೂ ಆದ ತವರು ಕ್ಷೇತ್ರ ವರುಣಾವನ್ನು ಪುತ್ರ ಯತೀಂದ್ರ ಅವರಿಗೆ ಬಿಟ್ಟುಕೊಡದಿದ್ದರೆ ಇವತ್ತು ಸಿದ್ದರಾಮಯ್ಯ ಅವರು ಗೆಲುವಿನ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುವ ಪ್ರಮೇಯ ಬರುತ್ತಿರಲಿಲ್ಲವೇನೋ? ಜೊತೆಗೆ ಅವರಿಗೆ ಸ್ಪರ್ಧೆ ನೀಡಿ ಗೆಲ್ಲುವ ಅಭ್ಯರ್ಥಿಯನ್ನು ತಯಾರು ಮಾಡುವುದು ಬಿಜೆಪಿ ಮತ್ತು ಜೆಡಿಎಸ್ಗೆ ಕಷ್ಟವಾಗುತ್ತಿತ್ತು. ಅದು ಏನೇ ಇರಲಿ ಈಗಿನ ಪರಿಸ್ಥಿತಿಯಲ್ಲಿ ಪುತ್ರ ಯತೀಂದ್ರ ತನ್ನ ಕ್ಷೇತ್ರ ವರುಣಾವನ್ನು ಭದ್ರಗೊಳಿಸಿಕೊಂಡಿದ್ದಾರೆ. ಹಾಗೂ ಸ್ಥಳೀಯ ನಾಯಕರ ನಡುವೆ ಗೆಲುವಿನ ಕುದುರೆಯಾಗಿಯೇ ಗಮನಸೆಳೆಯುತ್ತಿದ್ದಾರೆ.
ಪುತ್ರನ ರಾಜಕೀಯ ಭವಿಷ್ಯ ಬಯಸುತ್ತಿರುವ ಸಿದ್ದು
ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸಲಿ, ನಾನೇ ಕ್ಷೇತ್ರ ಬಿಟ್ಟುಕೊಡುವುದಾಗಿ ಯತೀಂದ್ರ ಅವರು ಹೇಳುತ್ತಾ ಬರುತ್ತಿದ್ದಾರೆ. ಆದರೆ ಪುತ್ರನ ರಾಜಕೀಯ ಭವಿಷ್ಯ ಬಯಸುವ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರಕ್ಕೆ ಬರುತ್ತಾರಾ? ಇದೇ ಕ್ಷೇತ್ರದಿಂದ ಕೊನೆಯ ಚುನಾವಣೆಯನ್ನು ಎದುರಿಸುತ್ತಾರಾ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರಗಳು ಸಿಗುವ ಲಕ್ಷಣಗಳಿಲ್ಲ. ಈಗಾಗಲೇ ಸಿದ್ದರಾಮಯ್ಯರಿಗೆ ಶತ್ರುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವರನ್ನು ಸೋಲಿಸಲು ತಂತ್ರಗಳು ನಡೆಯುತ್ತಿವೆ. ಹೀಗಾಗಿ ಗೆಲುವು ತಂದುಕೊಡುವ ಕ್ಷೇತ್ರವಾದ ವರುಣಾದಲ್ಲಿ ಸ್ಪರ್ಧಿಸಲಿ ಎಂಬುದು ಅವರ ಬೆಂಬಲಿಗರು, ಅಭಿಮಾನಿಗಳ ಬಯಕೆಯಾಗಿದೆ.
ಹೈವೋಲ್ಟೇಜ್ ಕ್ಷೇತ್ರವಾಗಲಿದೆಯಾ ವರುಣಾ?
ಈಗ ಪುತ್ರ ಯತೀಂದ್ರ ಅವರ ಹಿಡಿತದಲ್ಲಿ ಕ್ಷೇತ್ರವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ಯಾವುದೇ ರೀತಿಯ ಹೈವೋಲ್ಟೇಜ್ ಬಂದಂತೆ ಕಾಣುತ್ತಿಲ್ಲ. ಆದರೆ ಮೂರು ಪಕ್ಷಗಳಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಆಗಲಿವೆ. ಕ್ಷೇತ್ರದ ಬಗ್ಗೆ ಹೇಳುವುದಾದರೆ 2008ರಲ್ಲಿ ವರುಣಾ ಕ್ಷೇತ್ರ ರಚನೆಯಾಗಿದೆ. ಕ್ಷೇತ್ರದಲ್ಲಿ ಮೂರು ಚುನಾವಣೆಗಳನ್ನು ಕಂಡಿದ್ದು, ಅದರಲ್ಲಿ ಎರಡು ಬಾರಿ 2008, 2013ರಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರೆ. 2018ರಲ್ಲಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಕ್ಷೇತ್ರ ಕಾಂಗ್ರೆಸ್ನ ಭದ್ರ ಕೋಟೆಯಾಗಿದೆ.
ಸಮುದಾಯವಾರು ಮತಗಳ ವಿವರ ಇಲ್ಲಿದೆ
ಕ್ಷೇತ್ರಕ್ಕೆ ಮೈಸೂರು ತಾಲೂಕಿನ ಮೆಲ್ಲಹಳ್ಳಿ, ವರುಣ ಹೋಬಳಿ, ನಂಜನಗೂಡು ತಾಲೂಕಿನ ತಾಂಡವಪುರ, ತಗಡೂರು, ಹದಿನಾರು, ಚಿಕ್ಕಕವಲಂದೆ (ಭಾಗಶಃ) ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಒಳಗೊಳ್ಳುತ್ತವೆ. ಮತ್ತು ತಿ.ನರಸೀಪುರದ ಗರ್ಗೇಶ್ವರಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಗೆ ಒಳಗೊಂಡಿದೆ. ವೀರಶೈವ ಲಿಂಗಾಯತರು, ದಲಿತ ಸಮುದಾಯದ ಮತ ಹೆಚ್ಚಿನ ಸಂಖ್ಯೆಯಲ್ಲಿದೆ. ನಂತರ ಸ್ಥಾನದಲ್ಲಿ ಕುರುಬ, ನಾಯಕ, ಉಪ್ಪಾರ, ಒಕ್ಕಲಿಗ, ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಹಿಂದುಳಿದ ಮತಗಳು ಕೈಹಿಡಿಯುವ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಾರೆ ಎಂಬುದು ಈ ಕ್ಷೇತ್ರದ ರಾಜಕೀಯ ಲೆಕ್ಕಾಚಾರವಾಗಿದೆ.