ಮೈಸೂರು : ರಶ್ಮಿ ಮಹೇಶ್ ಮೇಲಿನ ಹಲ್ಲೆ ಪೂರ್ವನಿಯೋಜಿತ
ಮೈಸೂರು, ಮಾ.3 : ಮೈಸೂರಿನಲ್ಲಿ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಮೇಲೆ ನಡೆದ ಹಲ್ಲೆ ಆಕಸ್ಮಿಕವಲ್ಲ, ಅದೊಂದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿದಂತೆ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಕೆ ಮಾಡಲಾಗಿದೆ.
2014ರ ಅಕ್ಟೋಬರ್ 15ರಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಮಹಾ ನಿರ್ದೇಶಕಿ ರಶ್ಮಿ ಮಹೇಶ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿದಂತೆ 58 ಆರೋಪಿಗಳ ವಿರುದ್ಧ ಪೊಲೀಸರು, ಮೂರನೇ ಜೆಎಂಎಫ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 58 ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಭರಣಿ ಕ್ಯಾಟರಿಂಗ್ನ 33 ಮಂದಿ, ಮೃತ ವೆಂಕಟೇಶ್ ಅವರ ಸಂಬಂಧಿಕರು 14 ಮಂದಿ, ಎಟಿಐ ಹಾಲಿ ಹಾಗೂ ಮಾಜಿ ಸಿಬ್ಬಂದಿಗಳ ಹೆಸರು ಚಾರ್ಚ್ ಶೀಟ್ನಲ್ಲಿದೆ. [ರಶ್ಮಿ ಮಹೇಶ್ ಮೇಲೆ ಹಲ್ಲೆ]
114 ಸಾಕ್ಷಿಗಳು : ಪೊಲೀಸರು ಸಲ್ಲಿಸಿರುವ ಸುಮಾರು 250 ಪುಟದ ಚಾರ್ಚ್ ಶೀಟ್ನಲ್ಲಿ 114 ಸಾಕ್ಷಿಗಳ ಹೆಸರು ಸೇರಿಸಲಾಗಿದೆ. ಎಟಿಐ ಕಚೇರಿ ಆವರಣದ ಸಿಸಿಟಿವಿ ದೃಶ್ಯಾವಳಿಗಳು, ಘಟನೆ ಕುರಿತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ವಿಡಿಯೋ ತುಣುಕುಗಳನ್ನು ಸಲ್ಲಿಕೆ ಮಾಡಲಾಗಿದೆ. [ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಪತ್ರಿಕಾಗೋಷ್ಠಿ]
ಪೂರ್ವನಿಯೋಜಿತ ಕೃತ್ಯ : ಎಟಿಐನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿ ಕೆಲಸ ಕಳೆದುಕೊಂಡವರು ಮತ್ತು ಕ್ಯಾಟರಿಂಗ್ ಗುತ್ತಿಗೆದಾರರು ಈ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ, ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದಾರೆ.
ಘಟನೆಯ ಹಿನ್ನಲೆ : 2014ರ ಅಕ್ಟೋಬರ್ 15ರಂದು ರಶ್ಮಿ ಮಹೇಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಎಟಿಐ ಸಂಸ್ಥೆಯ ಮೇಲ್ವಿಚಾರಕ ವೆಂಕಟೇಶ್ ಶವ ಅಂದು ಬೆಳಗ್ಗೆ ಕಚೇರಿ ಆವರಣದ ನೀರಿನ ಸಂಪ್ನಲ್ಲಿ ಪತ್ತೆಯಾಗಿತ್ತು. ಸಂಜೆ ಆತನ ಶವವನನ್ನು ಅಂತಿಮ ದರ್ಶನಕ್ಕಾಗಿ ಕಚೇರಿ ಆವರಣಕ್ಕೆ ತರಲಾಗಿತ್ತು.
ಈ ಸಂದರ್ಭದಲ್ಲಿ ಶವದ ಅಂತಿಮ ದರ್ಶನಕ್ಕೆ ಆಗಮಿಸಿದ್ದ ರಶ್ಮಿ ಮಹೇಶ್ ಮೇಲೆ ಮೃತ ವೆಂಕಟೇಶ್ ಸಂಬಂಧಿಕರು ಹಲ್ಲೆ ನಡೆಸಿದ್ದರು. ವೆಂಕಟೇಶ್ ಸಾವಿಗೆ ರಶ್ಮಿ ಅವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು. ಅಧಿಕಾರಿ ಮೇಲಿನ ಹಲ್ಲೆ ಕುರಿತು ನಜಾರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications