ಮಕ್ಕಳ ಭಿಕ್ಷಾಟನೆ ನಿಯಂತ್ರಣಕ್ಕೆ 17 ಸಾವಿರ ಕಿ.ಮೀ ಎಂಜಿನಿಯರ್ ಪಾದಯಾತ್ರೆ
ಮೈಸೂರು, ಜನವರಿ 12 : ಭಿಕ್ಷೆ ಬೇಡ, ಅನ್ನ ನೀಡಿ... ಭಿಕ್ಷಾಟನೆ ತೊಲಗಿಸಿ' ಎಂಬ ಸಂದೇಶ ಹೊತ್ತು ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ನವದೆಹಲಿಯಿಂದ 17, 000 ಕಿ.ಮೀ ಕಾಲ್ನಡಿಗೆ ಸಂಚಾರ ಕೈಗೊಂಡಿದ್ದಾರೆ.
ಜಮ್ಮು-ಕಾಶ್ಮೀರದಿಂದ ಹೊರಟಿರುವ ಮೆಕ್ಯಾನಿಕಲ್ ಎಂಜಿನಿಯರ್ ಆಶಿಶ್ ಶರ್ಮಾ ಮಕ್ಕಳನ್ನು ಭಿಕ್ಷಾಟನೆಯಿಂದ ಮುಕ್ತಿಗೊಳಿಸಿ ಎಂಬ ಸಂದೇಶ ಹೊತ್ತು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಜಮ್ಮುವಿನಿಂದ ಮೈಸೂರಿನವರೆಗೆ ಬರೋಬ್ಬರಿ 504 ದಿನಗಳ ಪಯಣದಲ್ಲಿ 14,300 ಕಿ.ಮೀ ಪ್ರಯಾಣ ಬೆಳೆಸಿರುವ ಇವರು ಸಿಕ್ಕ ಜಿಲ್ಲೆ, ಊರುಗಳಲ್ಲಿ ಭಿಕ್ಷಾಟನೆ ವಿರುದ್ಧ ದನಿ ಎತ್ತುತ್ತಾ ಬಂದಿರು ವುದು ವಿಶೇಷ.
ಇದುವರೆವಿಗೂ ಸಾಕಷ್ಟು ಕಡೆಗಳಿಂದ ಪ್ರಯಾಣ ಬೆಳೆಸಿ ಮೈಸೂರಿಗೆ ಆಗಮಿಸಿದ್ದೇನೆ. ಕೆಲವೆಡೆ ಭಿಕ್ಷಾಟನೆಯಲ್ಲಿ ಮಕ್ಕಳನ್ನು ತೊಡಗಿಸದಂತೆ ಅರಿವು ಮೂಡಿಸಿರುವುದಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಇನ್ನೂ ಕೆಲವೆಡೆ ಮಕ್ಕಳನ್ನು ಭಿಕ್ಷಾಟನೆಗೆ ಒಯ್ಯುವ ಮಂದಿ ನನ್ನನ್ನು ಅಪಹರಿಸಿ ನನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಕಸಿದುಕೊಂಡ ಘಟನೆಯೂ ನಡೆದಿದೆ. ಆದರೆ ಯಾವುದಕ್ಕೂ ಹೆದರದೇ 17 ಸಾವಿರ ಕಿ.ಮೀ ಕ್ರಮಿಸಿಯೇ ತೀರುತ್ತೇನೆ ಎಂದು ಅವರು ದಿಟವಾಗಿ ಹೇಳಿದರು.
ಆಶಿಶ್ ಪ್ರೇರಣೆ ಹೇಗೆ ?
ಖಾಸಗಿ ಕಂಪನೆಯಿಲ್ಲಿ ಉದ್ಯೋಗ ಮುಗಿಸಿ ಮನೆಗೆ ಹೋಗುತ್ತಿದ್ದಾಗ ರಸ್ತೆ ಬದಿ ಬಾಲಕನೊಬ್ಬ ರಕ್ತಸ್ರಾವದಿಂದ ಬಳಲುತ್ತ ಭಿಕ್ಷೆ ಬೀಡುತ್ತಿರುವುದನ್ನು ಆಶಿಶ್ ಗಮನಿಸುತ್ತಾರೆ. ಬಾಲಕನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಎನ್ ಜಿ ಓ ನಲ್ಲಿ ಪುನರ್ವಸತಿ ಕೊಡಿಸುತ್ತಾರೆ. ಹೀಗೆ 9 ಮಕ್ಕಳಿಗೆ ವಸತಿ ಹಾಗೂ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಾರೆ. ಭಿಕ್ಷಾಟನೆ ಸುಳಿಯಲ್ಲಿ ಸಿಲುಕಿಕೊಂಡ ಮಕ್ಕಳ ರಕ್ಷಣೆ ಮಾಡಬೇಕೆನ್ನುವ ಪರಿಕಲ್ಪನೆಯಿಂದ ಸಂಚರಿಸುತ್ತಿದ್ದಾರೆ. ಶಾಲಾ ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ ಸೇರಿ ಜನರಿರುವ ಪ್ರದೇಶಗಳಲ್ಲಿ ಭಿಕ್ಷಾಟನೆ ಮುಕ್ತ ಸಮಾಜದ ಪರಿಕಲ್ಪನೆ ಬೆಳೆಸುತ್ತಿದ್ದಾರೆ. ಸರ್ಕಾರಿ ಯೋಜನೆ ಫಲಾನುಭವಿಗಳ ತಲುಪದ ಪರಿಣಾಮ ಭಿಕ್ಷಾಟನೆ ಪ್ರವೃತ್ತಿ ಹೆಚ್ಚಿದೆ. ಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಪಾದಯಾತ್ರೆ ಕೈಗೊಂಡಿದ್ದಾರೆ ಇವರು.
ಪಯಣ ಆರಂಭಿಸಿದ್ದು ಎಲ್ಲಿ ?
ಜಮ್ಮು ಕಾಶ್ಮೀರದ ಉದಯ್ ಪುರ್ ನಿಂದ 2017ರ ಅ.22ರಂದು ಪ್ರಯಾಣ ಆರಂಭಿಸಿದ ಅಜೀತ್, 5 ಕೇಂದ್ರಾಡಳಿತ ಪ್ರದೇಶ ಹಾಗೂ 26 ರಾಜ್ಯ ಸುತ್ತಿದ್ದಾರೆ. 9 ರಾಜ್ಯಗಳ ಸಿಎಂ, 11 ಗವರ್ನರ್ ಗಳನ್ನು ಭೇಟಿ ಮಾಡಿದ್ದಾರೆ. ಪ್ರತಿನಿತ್ಯ 30 - 40 ಕಿ. ಮೀ ಸಂಚಿರಿಸುತ್ತಾರೆ. ಕೈಯಲ್ಲಿ ರಾಷ್ಟ್ರ ಧ್ವಜ, ಬೆನ್ನ ಮೇಲೆ ಒಂದು ಬ್ಯಾಗ್ ಹಿಡಿಕೊಂಡು ನಡೆಯುತ್ತ ದಾರಿಯಲ್ಲಿ ಸಿಗುವ ಮಕ್ಕಳು ಹಾಗೂ ಜನರೊಂದಿಗೆ ಸಮಾಲೋಚಿಸುತ್ತ ಸಾಗುತ್ತಾರೆ ಆಶೀಶ್ ಶರ್ಮಾ..
ಮಕ್ಕಳ ಭಿಕ್ಷಾಟನೆ ಬಹುದೊಡ್ಡ ಜಾಲ :
ದೇಶದಲ್ಲಿ ಮಕ್ಕಳ ಕಳ್ಳರ ವ್ಯಾಪಕ ಜಾಲ ಹರಡಿದ್ದು, ಅದರಲ್ಲಿ 4 ಬಗೆ ಇದೆ. ಹುಟ್ಟಿದ ಮಕ್ಕಳನ್ನು ಕದ್ದು, ಆ ಮಗುವನ್ನು ತೋರಿಸಿ ಭಿಕ್ಷೆ ಬೇಡುತ್ತಾರೆ. 3ರಿಂದ 6ನೇ ವಯಸ್ಸಿನ ಮಕ್ಕಳನ್ನು ಅಪಹರಿಸಿ ಅವರಿಗೆ ಭಿಕ್ಷೆ ಬೇಡುವ ತರಬೇತಿ ನೀಡಿ ಬಳಸಿಕೊಳ್ಳುತ್ತಿದ್ದಾರೆ. 6ರಿಂದ 9ನೇ ವಯಸ್ಸಿನ ಮಕ್ಕಳಿಗೆ ಡ್ರಗ್ಸ್ ಮಾರಾಟ ಮಾಡುವ ತರಬೇತಿ ನೀಡುತ್ತಿದ್ದಾರೆ. 14 ವರ್ಷದ ಮೇಲ್ಪಟ್ಟ ಹೆಣ್ಣುಮಕ್ಕಳನ್ನು ಅಪಹರಿಸಿ ಅವರನ್ನು ಬೆದರಿಸಿ ವೇಶ್ಯಾವಾಟಿಕೆಗೆ ದೂಡುವ ಮಾಫಿಯಾ ಇದೆ. ಕಣ್ಣಿಗೆ ಬಿದ್ದ ಮಾದಕ ವ್ಯಸನಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿದ್ದೇನೆ ಎನ್ನುತ್ತಾರೆ ಆಶಿಶ್.
ಐ ಎ ಎಸ್ – ಐಪಿಎಸ್ ಅಧಿಕಾರಿಗಳ ನಿರಂತರ ಸಂಪರ್ಕ :
ನನ್ನ ಈ ಜಾಗೃತಿ ಯಾತ್ರೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 140ಕ್ಕೂ ಹೆಚ್ಚು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಹಾಯಹಸ್ತ ಚಾಚಿದ್ದಾರೆ. ಹಲವಾರು ಶಾಲಾ ಕಾಲೇಜುಗಳು ಮತ್ತು ರಂಗಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನಾ ವಿರೋಧಿ ಅಭಿಯಾನದ ಬಗ್ಗೆ ತಿಳಿಸಿ, ಮಕ್ಕಳ ಹಕ್ಕಿನ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ಸಾಮಾಜಿಕ ಪಿಡುಗುಗಳ ನಿವಾರಣೆ ನನ್ನ ಧ್ಯೇಯವಾಗಿದ್ದು, 2019ರ ಜೂ.14ರಂದು ದೆಹಲಿಯಲ್ಲಿ ದೊಡ್ಡ ಮಟ್ಟದ ಮ್ಯಾರಥಾನ್ ಓಟವನ್ನು ಆಯೋಜಿಸಿದ್ದೇನೆ. ಯಾತ್ರೆಯ ನಡುವೆ ಎರಡು ಬಾರಿ ಜಾಂಡೀಸ್ ಆಗಿದೆ. ಆದರೂ ಸಾರ್ವಜನಿಕರು ಹಾಗೂ ದೇವರ ದಯೆಯಿಂದ ನನ್ನ ಈ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ. ನನ್ನ ತಂದೆ ಸುರೇಶ್ ಶರ್ಮಾ ಕೃಷಿಕರು ಮತ್ತು ತಾಯಿ ನೀಲಮ್ ಹಾಗೂ ಸಹೋದರ ಹಿಮಾಂಶು ಹೈಕೋರ್ಟ್ನಲ್ಲಿ ವಕೀಲರಾಗಿದ್ದು, ನನ್ನ ಅಭಿಯಾನಕ್ಕೆ ಸ್ಫೂರ್ತಿ ನೀಡಿದ್ದಾರೆ ಎಂದು ಮುಗುಳ್ನಕ್ಕರು ಆಶೀಶ್.
ಕೈ ತುಂಬಾ ಸಂಬಳ ಬಂದರೆ ಸಾಕು ಮನೆ ಹಾಗೂ ಮೋಜು ಎನ್ನುವ ಮಂದಿಗಳ ನಡುವೆ ಆಶೀಶ್ ಶರ್ಮಾ ಅವರು ನಡೆಸಿರುವ ವಿಶಿಷ್ಟ ಜಾಗೃತಿಯ ಪ್ರಯತ್ನಕ್ಕೆ ಮೈಸೂರಿಗರು ಸಲಾಮ್ ಹೇಳಿದ್ದು, ಇವರ ಆಶಯಕ್ಕೆ ಪೂರಕ ವಾದ ವಾತಾವರಣ ನಿರ್ಮಾಣವಾಗಲಿದೆ ಎಂಬುದೇ ಎಲ್ಲರ ಆಶಯ