ಮೈಸೂರು : ಕುಂಭಮೇಳಕ್ಕೆ ಸೇನೆಯಿಂದ ಸೇತುವೆ ನಿರ್ಮಾಣ
ಮೈಸೂರು, ಫೆಬ್ರವರಿ 14 : ಮೈಸೂರಿನ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಭಾರತೀಯ ಸೇನೆ ಕುಂಭಮೇಳಕ್ಕಾಗಿ ತೇಲುವ ಸೇತುವೆಯನ್ನು ನಿರ್ಮಾಣ ಮಾಡಿದೆ.
ತಿ.ನರಸೀಪುರದಲ್ಲಿ ಫೆಬ್ರವರಿ 17, 18 ಮತ್ತು 19ರಂದು 11ನೇ ಕುಂಭಮೇಳ ನಡೆಯಲಿದೆ. ಸುಮಾರು 10 ಲಕ್ಷ ಭಕ್ತರು ಕುಂಭಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಿಲ್ಲಾಡಳಿತ ಸಿದ್ಧತೆಗಳನ್ನು ಚುರುಕುಗೊಳಿಸಿದೆ.
ಕುಂಭಮೇಳದಲ್ಲಿ ಭಕ್ತಾದಿಗಳಿಗೆ ನದಿಯ ದ್ವೀಪದ ಮಧ್ಯಕ್ಕೆ ತೆರಳಲು ಅನುಕೂಲವಾಗುವಂತೆ ಭಾರತೀಯ ಸೇನೆಪಡೆಯ ನೆರವಿನಿಂದ ಪ್ರಪ್ರಥಮ ಭಾರಿಗೆ ತೇಲುವ ಸೇತುವೆ ನಿರ್ಮಾಣಮಾಡಲಾಗಿದೆ.

ಸುಮಾರು 140 ಯೋಧರು ಕೇವಲ ಮೂರು ದಿನದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಸುಮಾರು 160 ಮೀಟರ್ ಉದ್ದದ ಮತ್ತು 3 ಮೀಟರ್ ಅಗಲದ ತೇಲುವೆ ಸೇತುವೆ ನಿರ್ಮಿಸಿದ್ದಾರೆ.
ಈ ಸೇತುವೆಯು ಗುಂಜಾ ನರಸಿಂಹಸ್ವಾಮಿ ದೇವಾಲಯ ಭಾಗದಿಂದ ನದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ಸಭಾ ಮಂಟಪ, ಯಾಗ ಮಂಟಪ ವೇದಿಕೆಗೆ ಸಂಪರ್ಕ ಕಲ್ಪಿಸುತ್ತದೆ.

ಸೇತುವೆ ನಿರ್ಮಾಣದಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಅಗಸ್ತ್ಯೇಶ್ವರ ಸ್ವಾಮಿ ದೇವಾಲಯಕ್ಕೂ ಹಾಗೂ ವಿವಿಧ ಬಗೆಯ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಹೋಗಲು ನೆರವಾಗಲಿದೆ.












Click it and Unblock the Notifications