ಎಲ್ಲಾ ಪಕ್ಷದ ಅಭ್ಯರ್ಥಿಗಳು ಒಂದೆಡೆ ಸೇರಿ ಪ್ರಚಾರ ಮಾಡಲು ಸಾಧ್ಯವೇ ? ಇದು ಮೈಸೂರಲ್ಲಿ ನಡೀತು
ಮೈಸೂರು, ಏಪ್ರಿಲ್ 6 : ಇದುವರೆಗೂ ಅನೇಕ ಲೋಕಸಭಾ ಚುನಾವಣೆಗಳು ನಡೆದಿವೆ. ಅದಕ್ಕೆ ತಕ್ಕಂತೆ ಬೇರೆ- ಬೇರೆ ಪಕ್ಷದ ಅಭ್ಯರ್ಥಿಗಳು ಪ್ರಚಾರವನ್ನೇನೋ ಭರದಿಂದ ಮಾಡುತ್ತಾರೆ. ಆದರೆ ಒಂದೇ ವೇದಿಕೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಒಟ್ಟಿಗೆ ಪ್ರಚಾರ ಮಾಡಿದ್ದನ್ನು ನೋಡಿದ್ದೀರಾ ? ಅದು ಮೈಸೂರಿನಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ಮೊದಲ ಲೋಕಸಭಾ ಚುನಾವಣೆಯಲ್ಲಿ ಅಪರೂಪದ ಪ್ರಸಂಗಗಳು ನಡೆಯುವ ಮೂಲಕ ಇಡೀ ದೇಶದ ಗಮನವನ್ನು ಮೈಸೂರು ತನ್ನತ್ತ ಸೆಳೆದಿತ್ತು. ಒಂದೇ ವೇದಿಕೆಯಲ್ಲಿ ಎಲ್ಲ ಪಕ್ಷದ ಹುರಿಯಾಳುಗಳು ಒಬ್ಬರ ನಂತರ ಒಬ್ಬರಂತೆ ತಮ್ಮ ತಮ್ಮ ಪ್ರಚಾರ ಭಾಷಣವನ್ನು ಮಾಡುವ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು.
1951ರ ಡಿಸೆಂಬರ್ನಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಲಾಯಿತು. 1952ರ ಜನವರಿ 2ರಿಂದ 19ರವರೆಗೆ ದೇಶದಲ್ಲಿ ಚುನಾವಣೆ ನಡೆಯಿತು. ಈ ವೇಳೆ ಮೊದಲ ಚುನಾವಣೆಯಲ್ಲಿ ಸಾರ್ವಜನಿಕರು ಮತದಾನ ಮಾಡಲು ಪ್ರೇರೇಪಣೆ ನೀಡಲು ವೋಟುದಾರರ ಸಂಘವೊಂದನ್ನು ರಚಿಸಲಾಗಿತ್ತು.

ಈ ಸಂಘವು ಒಂದೇ ವೇದಿಕೆಯಲ್ಲಿ ಎಲ್ಲ ಪಕ್ಷದ ಹುರಿಯಾಳುಗಳನ್ನು ಸೇರಿಸಿ ದೊಡ್ಡದೊಂದು ಪ್ರಚಾರ ಸಭೆಯನ್ನು ಏರ್ಪಡಿಸಿತು. ಘನತೆ, ಗಾಂಭೀರ್ಯಗಳಿಂದ ಬಂದಿದ್ದ ಆ ಕಾಲದ ಪ್ರಮುಖ ಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷದ ಎಚ್.ಸಿ.ದಾಸಪ್ಪ, ಎನ್.ರಾಚಯ್ಯ, ಕಿಸಾನ್ ಮಜ್ದೂರ್ ಪ್ರಜಾ ಪಕ್ಷದ ಎಂ.ಎಸ್.ಗುರುಪಾದಸ್ವಾಮಿ ಮತ್ತು ಎಂ.ಎಸ್.ಸಿದ್ದಯ್ಯ ಒಬ್ಬರ ನಂತರ ಒಬ್ಬರು ಚುನಾವಣಾ ಭಾಷಣ ಮಾಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರೂ ಅವರ ಭಾಷಣವನ್ನು ಅಷ್ಟೇ ಗಾಂಭೀರ್ಯದಿಂದ ಆಲಿಸಿದರು. ಈ ಮೂಲಕ ಒಂದು ಅಪರೂಪದ ವಿದ್ಯಮಾನಕ್ಕೆ ಮೈಸೂರು ಸಾಕ್ಷಿಯಾಗಿತ್ತು.
ಮೊದಲ ಲೋಕಸಭಾ ಚುನಾವಣೆಯ ಮಹತ್ವ ಎಷ್ಟು ಹೇಳಿದರೂ ಮುಗಿಯದು. ಕೊನೆಯ ಮಹಾರಾಜ ಎನಿಸಿದ ಜಯಚಾಮರಾಜ ಒಡೆಯರ್ ಅವರು ಮತಗಟ್ಟೆಯಲ್ಲಿ ಸಾಮಾನ್ಯರಂತೆ ನಿಂತು ಮತ ಚಲಾವಣೆ ಮಾಡಿದ ವಿದ್ಯಮಾನವೂ ಇಲ್ಲೇ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಎಚ್.ಸಿ.ದಾಸಪ್ಪ ಹಾಗೂ ರಾಚಯ್ಯ ಅವರ ಚುನಾವಣಾ ಪ್ರಚಾರ ವೈಖರಿ ಇನ್ನಿತರ ಪಕ್ಷದ ಅಭ್ಯರ್ಥಿಗಳಿಗಿಂತ ಬಲು ಜೋರಾಗಿ ನಡೆಯಿತು. ಇದಕ್ಕೆ 9 ಜೋಡಿ ಎತ್ತುಗಳ ಗಾಡಿಗಳನ್ನು ಬಳಸಲಾಗಿತ್ತು. ಈ ಒಂಬತ್ತು ಗಾಡಿಗಳ ಮೆರವಣಿಗೆಯೂ ಆ ಕಾಲದ ಬಲು ದೊಡ್ಡ ಪ್ರಚಾರ ಮೆರವಣಿಗೆ ಎಂದು ಹೆಸರು ಗಳಿಸಿತು. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದವರಲ್ಲಿ ರಾಚಯ್ಯ ಗೆದ್ದರೆ, ದಾಸಪ್ಪ ಸೋತರು. ರಾಜ್ಯದಲ್ಲೇ ಗೆಲುವು ಸಾಧಿಸಿದ ಏಕೈಕ ಕಾಂಗ್ರೆಸ್ಸೇತರ ಅಭ್ಯರ್ಥಿ ಎಂಬ ಹೆಸರನ್ನು ಕೆ.ಎಂ.ಗುರುಪಾದಸ್ವಾಮಿ ತನ್ನದಾಗಿಸಿಕೊಂಡರು.
ಪ್ರಜಾಪ್ರಭುತ್ವದ ಮೊದಲ ಚುನಾವಣೆ ಎನಿಸಿದ ಇದರಲ್ಲಿ ಜಯಚಾಮರಾಜ ಒಡೆಯರ್ ಭಾಗವಹಿಸಿದ್ದರು. ಸಂಸ್ಥಾನದ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಕೆ.ಪಿ.ರಾಮನಾಥಯ್ಯ ಅವರು ಅತ್ಯಂತ ಸ್ಪಷ್ಟವಾಗಿ ಹೇಳಿಕೆಯೊಂದನ್ನು ನೀಡುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿದರು. ರಾಜರು ಮತ್ತು ಅವರ ವಂಶಸ್ಥರಿಗೆ ಮತ ಚಲಾವಣೆ ಮಾಡಲು ಯಾವುದೇ ವಿಶೇಷ ಸೌಲಭ್ಯವನ್ನು ಒದಗಿಸಿಲ್ಲ. ಅವರು ಸಾಮಾನ್ಯರಂತೆ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಬೇಕು' ಎಂದು ಹೇಳಿದರು. ಈ ಹೇಳಿಕೆ ಪ್ರಜಾಪ್ರಭುತ್ವದ ಆರಂಭದ ಕಾಲದ ಗಾಂಭೀರ್ಯ ಮತ್ತು ಘನತೆಯನ್ನು ತೋರಿಸುತ್ತದೆ.
ಇದಕ್ಕೆ ಯಾವುದೇ ವಿಧವಾದ ಆಕ್ಷೇಪವನ್ನು ವ್ಯಕ್ತಪಡಿಸದ ಜಯಚಾಮರಾಜ ಒಡೆಯರ್ ಅವರು ಮತಗಟ್ಟೆ ಸಂಖ್ಯೆ 1ರಲ್ಲಿ ಸಾಮಾನ್ಯ ಪ್ರಜೆಯಂತೆ ಬಂದು ಮತ ಚಲಾಯಿಸಿದರು. ದ್ವಿಸದಸ್ಯ ಕ್ಷೇತ್ರವಾಗಿದ್ದ ಮೈಸೂರಿನಿಂದ ಕಾಂಗ್ರೆಸ್ನಿಂದ ರಾಚಯ್ಯ ಆಯ್ಕೆಯಾದರೆ ಕಿಸಾನ್ ಮಜ್ದೂರ್ ಪ್ರಜಾ ಪಕ್ಷದಿಂದ ಎಂ.ಎಸ್.ಗುರುಪಾದಸ್ವಾಮಿ ಚುನಾಯಿತರಾದರು.












Click it and Unblock the Notifications