ಒಡೆಯರ್ ಕುಟುಂಬಕ್ಕಿರುವ ಅಲಮೇಲಮ್ಮನ ಶಾಪವೇನು?
ಬೆಂಗಳೂರು, ಡಿ 10: ಮೈಸೂರು ರಾಜವಂಶಸ್ಥ, ಯದು ವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೃದಯಾಘಾತದಿಂದ ಮಂಗಳವಾರ (ಡಿ 10) ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2006ರಲ್ಲಿ ಒಡೆಯರ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಕುಟುಂಬಕ್ಕಿರುವ ಶಾಪದ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದರು.
ತಮ್ಮ ವಂಶಸ್ಥರಿಗೆ ಅಲಮೇಲಮ್ಮನ ಶಾಪವಿದೆ, ಅಲಮೇಲಮ್ಮನಿಗೆ ದೇವರ ಸ್ಥಾನ ಸಿಗದೇ ಇನ್ನೂ ಆಕೆ ಆತ್ಮವಾಗಿಯೇ ಉಳಿದಿದ್ದಾಳೆ. ಅಲಮೇಲಮ್ಮನ ಆತ್ಮದ ಜೊತೆ ನಾನು ಕೆಲವು ವರ್ಷಗಳಿಂದ ಸಂಪರ್ಕದಲ್ಲಿದ್ದೇನೆ ಮತ್ತು ನನಗೆ ಇಂದಿಗೂ ಆಕೆ ಅನೇಕ ಸೂಚನೆಗಳನ್ನು ನೀಡುತ್ತಾಳೆ ಎಂದಿದ್ದರು.
400 ವರ್ಷಗಳ ಹಿಂದೆ ತಲಕಾಡನ್ನು ಆಕ್ರಮಿಸಿದ ನಮ್ಮ ಯದು ವಂಶಸ್ಥರು, ಅಲಮೇಲಮ್ಮನ ಸಿಟ್ಟಿಗೆ ಗುರಿಯಾಗಿದ್ದರು. ತಲಕಾಡು ಮರಳಾಗಲಿ, ಮಾಲಿಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಆ ಸಂದರ್ಭದಲ್ಲಿ ಅಲಮೇಲಮ್ಮ ಶಾಪ ನೀಡಿದ್ದಳು. ಆ ಶಾಪದ ತೀವ್ರತೆ ಈಗ ಕಡಿಮೆಯಾಗುತ್ತಿದೆ ಎಂದು ಶ್ರೀಕಂಠದತ್ತ ಒಡೆಯರ್ ಹೇಳಿದ್ದರು. (ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ವಿಧಿವಶ)
ಅಲಮೇಲಮ್ಮ ತನ್ನಲ್ಲಿದ್ದ ಆಭರಣಗಳನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲಿ ದೇವರ ಅಲಂಕಾರಕ್ಕೆ ನೀಡಿ ನಂತರ ವಾಪಸ್ ಪಡೆಯುತ್ತಿದ್ದಳು. ಇದನ್ನರಿತ ಮೈಸೂರು ಒಡೆಯರ್ ಕುಟುಂಬ ಈ ಆಭರಣಗಳನ್ನು ತಮ್ಮದಾಗಿಸಿ ಕೊಳ್ಳಲು ಸಂಚು ರೂಪಿಸಿದ್ದರು.
ಆಭರಣವನ್ನು ತಮ್ಮ ಸುಪರ್ದಿಗೆ ನೀಡಲು ಒಡೆಯರ್ ಕುಟುಂಬ ಅಲಮೇಲಮ್ಮನಿಗೆ ರಾಜಾಜ್ಞೆ ಹೊರಡಿಸುತ್ತಾರೆ. ಆದರೆ ಆಭರಣಗಳನ್ನು ಮೈಸೂರು ಒಡೆಯರ್ ಕುಟುಂಬಕ್ಕೆ ನೀಡಲು ಒಪ್ಪದ ಅಲಮೇಲಮ್ಮ, ಮೂಗುತಿಯನ್ನು ಎಸೆದು "ತಲಕಾಡು ಮರಳಾಗಲಿ, ಮಾಲಿಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ' ಎಂದು ಶಾಪ ಹಾಕಿ ಕಾವೇರಿ ನದಿಗೆ ಹಾರಿ ಸಾವನ್ನಪ್ಪುತ್ತಾಳೆ ಎನ್ನುವುದು ಇತಿಹಾಸ.
ಅದಕ್ಕೆ ಪೂರಕ ಎನ್ನುವಂತೆ ಪಕ್ಕದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ ತಲಕಾಡು ಪಂಚಲಿಂಗೇಶ್ವರನ ಸನ್ನಿಧಿಯ ಸುತ್ತಮುತ್ತಲಿನ ಭಾಗ ಮರುಳಿನಿಂದ ಕೂಡಿದೆ. ಅಲಮೇಲಮ್ಮನ ಶಾಪದಿಂದಲೇ ಮೈಸೂರು ಅರಸರಿಗೆ ಮಕ್ಕಳಾಗಲಿಲ್ಲ ಎನ್ನುವುದು ಜನರ ನಂಬಿಕೆ. (ಶ್ರೀಕಂಠದತ್ತ ಒಡೆಯರ್ ಅವರಿಗೆ ಚಿತ್ರನಮನ)
ಇಂದು ನಿಧನ ಹೊಂದಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಲಮೇಲಮ್ಮನಿಗಾಗಿಯೇ ದೇವಸ್ಥಾನವನ್ನು ಕಟ್ಟಿಸಿದ್ದರು.