ಕೇಂದ್ರ ಬಜೆಟ್ 2022: ಮೈಸೂರಿನ ಕೃಷಿಕರು, ಉದ್ಯಮಿಗಳು, ಜನರ ನಿರೀಕ್ಷೆಗಳೇನು?
ಮೈಸೂರು, ಜನವರಿ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ಸೃಷ್ಟಿಯಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ 2022-23ನೇ ಸಾಲಿನ ಬಜೆಟ್ ಮಂಡನೆಗೆ ತಯಾರಿ ಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಯವ್ಯಯದ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದೆ. ಅದೇ ರೀತಿ ಮೈಸೂರಿನ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಸಾಂಸ್ಕೃತಿಕ ನಗರಿ ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿನ ಬಹುಪಾಲು ಉದ್ಯಮಗಳು ಪ್ರವಾಸೋದ್ಯಮವನ್ನೇ ಅವಲಂಬಿತವಾಗಿವೆ. ಈ ಹಿನ್ನೆಲೆ ಕೇಂದ್ರ ಬಜೆಟ್ ನಲ್ಲಿ ಮೈಸೂರಿಗೆ ಹೆಚ್ಚಿನ ಆದ್ಯತೆ ಸಿಗಬೇಕೆಂದು ವಿವಿಧ ಕ್ಷೇತ್ರಗಳ ಪ್ರಮುಖರು ನಿರೀಕ್ಷೆ ಹೊಂದಿದ್ದಾರೆ.
ನಾಗರಹೊಳೆಯಲ್ಲಿ ಹುಲಿಗಳ ಗಣತಿ ಕಾರ್ಯಕ್ಕೆ ಸಜ್ಜಾದ ಅರಣ್ಯ ಸಿಬ್ಬಂದಿ
ಕೃಷಿ, ಕೈಗಾರಿಕೆ, ಹೋಟೆಲ್ ಉದ್ದಿಮೆಗಳ ಜೊತೆಗೆ ಕೊರೊನಾವೈರಸ್ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನ ಘೋಷಣೆ ಮಾಡಬೇಕೆಂಬ ಒತ್ತಾಯದ ಜೊತೆಗೆ ನಿರೀಕ್ಷೆಯೂ ಹೆಚ್ಚಾಗಿದೆ.
ಕೊವಿಡ್-19 ಕಾಲದಲ್ಲಿ ಶೇ.20ರಷ್ಟು ಕೈಗಾರಿಕೆ ಬಂದ್
ಕೊರೊನಾವೈರಸ್ ಎಂಬುದು ಮೈಸೂರಿನ ಕೈಗಾರಿಕೆಗಳ ಬೆನ್ನು ಬಿಡದೆ ಕಾಡುತ್ತಿದ್ದು, ಮಹಾಮಾರಿ ಹೊಡೆತಕ್ಕೆ ಸಿಲುಕಿ ಈಗಾಗಲೇ ಶೇ.20ರಷ್ಟು ಕೈಗಾರಿಕೆಗಳು ಮುಚ್ಚಿಹೋಗಿದೆ. ಮುಂಬರುವ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಶೇ.50 ಕೈಗಾರಿಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ. ಹೀಗಾಗಿ ವಿವಿಧ ಹಂತದ ಉದ್ದಿಮೆಗಳ ಮುಖ್ಯಸ್ಥರು ಲಾಕ್ ಡೌನ್ ಹಾಗೂ ವೀಕೆಂಡ್ ಕರ್ಫ್ಯೂ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 26 ಸಾವಿರ ಸಣ್ಣ ಕೈಗಾರಿಕೆಗಳಿದ್ದು, 150ಕ್ಕೂ ಹೆಚ್ಚು ಬೃಹತ್ ಕೈಗಾರಿಕೆಗಳು ಹಾಗೂ 130ಕ್ಕೂ ಹೆಚ್ಚು ರಫ್ತು ಕೈಗಾರಿಕೆಗಳಿವೆ. ಈ ಎಲ್ಲಾ ಉದ್ದಿಮೆಗಳು ಕೊರೊನಾವೈರಸ್ ಸಂಕಷ್ಟಕ್ಕೆ ಸಿಲುಕಿದರೆ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗುತ್ತಾರೆ ಎಂದು ಮೈಸೂರು ಜಿಲ್ಲಾ ಕೈಗಾರಿಕಾ ಒಕ್ಕೂಟದ ಸುರೇಶ್ ಕುಮಾರ್ ಜೈನ್ ಬೇಸರ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರಗಳಿಂದ ನೆರವು ಸಿಕ್ಕಿಲ್ಲ
ಕಳೆದ ಎರಡು ಕೊವಿಡ್-19 ಅಲೆಯಲ್ಲಿ ನಷ್ಟ ಅನುಭವಿಸಿರುವ ಉದ್ಯಮಗಳಿಗೆ ಸರ್ಕಾರಗಳ ನೆರವು ಇನ್ನು ಸಿಕ್ಕಿಲ್ಲ. ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನೀಡಲು ನಿರ್ಧರಿಸಿದ್ದರೂ ಆ ಸಾಲ ಸೌಲಭ್ಯ ಎಲ್ಲಾ ಉದ್ದಿಮೆದಾರರಿಗೆ ಗಗನ ಕುಸುಮವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಬೆಲೆ ಏರಿಕೆ ಶಾಕ್ ನೀಡಿದೆ. ಇದೇ ಕಾರಣಕ್ಕೆ ಆರ್ಥಿಕ ಮುಗ್ಗಟ್ಟು ಎದುರಿಸಿರುವ ಉದ್ಯಮಿಗಳು ಈಗ ಸರ್ಕಾರದ ಕಠಿಣ ನೀತಿಗಳಿಗೆ ಧಿಕ್ಕಾರ ಹೇಳಿದ್ದಾರೆ. ಕೈಗಾರಿಕೋದ್ಯಮಿಗಳ ಅಳಲು ಕೇಳಬೇಕಿದ್ದ ಸಚಿವರು ಕೈಗಾರಿಕಾ ಅದಾಲತ್ ನಡೆಸದೆ ಇರುವುದರಿಂದಲೂ ಉದ್ಯಮಿಗಳು ತೊಂದರೆ ಅನುಭವಿಸುವಂತಾಗಿದೆ ಎಂದರು.
ಬಡ್ಡಿರಹಿತ ಸಾಲ ಸೌಲಭ್ಯದ ನಿರೀಕ್ಷೆ
ಕೊರೊನಾವೈರಸ್ ಹಿನ್ನೆಲೆ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್ ಜೈನ್, "ಉದ್ದಿಮೆದಾರರಿಗೆ ಸುಲಭವಾಗಿ ಆರ್ಥಿಕ ನೆರವು ದೊರೆಯಬೇಕಿದ್ದು, ಸಬ್ಸಿಡಿ ಬಡ್ಡಿ ದರದಲ್ಲಿ ಈ ಸೌಲಭ್ಯ ದೊರೆಯುವಂತಾಗಬೇಕು. ಮೈಸೂರಿನಲ್ಲಿ ಉತ್ಪಾದನಾ ವಿಭಾಗದಲ್ಲಿ ಎಲೆಕ್ಟ್ರಾನಿಕ್ ಕ್ಲಸ್ಟರ್ ಸೇರಿದಂತೆ ಯಾವುದೇ ಕ್ಲಸ್ಟರ್ ಗಳು ಈವರೆಗೂ ಬಂದಿಲ್ಲ. ಜೊತೆಗೆ ಮೈಸೂರು ಪ್ರಿಂಟಿಂಗ್ ಕ್ಲಸ್ಟರ್ ಯೋಜನೆ ಅನುಷ್ಠಾನಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ದೇಶಾಧ್ಯಂತ ಕಾರ್ಮಿಕರಿಗೆ ಯೂನಿಕ್ ಐಡಿ ಕಾರ್ಡ್ ಅನ್ನು ಕಡ್ಡಾಯವಾಗಿ ವಿತರಣೆಯಾಗಬೇಕಿದೆ," ಎಂದು ಸುರೇಶ್ ಕುಮಾರ್ ಜೈನ್ ಒತ್ತಾಯಿಸಿದ್ದಾರೆ.
ವ್ಯವಸಾಯ ವಲಯಕ್ಕೆ ಆಸರೆ
ಪ್ರತಿಬಾರಿ ಕೇಂದ್ರ ಹಾಗೂ ರಾಜ್ಯ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ನಿರೀಕ್ಷೆ ಹೊಂದಲಾಗುತ್ತದೆ. ಹೀಗಾಗಿ ಈ ಬಾರಿ ಸಹ ರೈತರು ಹಾಗೂ ಕೃಷಿಯನ್ನೇ ಅವಲಂಬಿಸಿರುವವರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ಕೊರೊನಾವೈರಸ್ ಬಂದು ರೈತರೆಲ್ಲಾ ಸಂಕಷ್ಟದಲ್ಲಿದ್ದು, ಸಾಲ ನೀತಿ ಬದಲಾಗಬೇಕಿದೆ. ಪ್ರಸ್ತುತ ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ ಶೇ.45ರಷ್ಟು ರೈತರಿಗೆ ಮಾತ್ರವೇ ಸಾಲ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕಿದ್ದು, ಮುಖ್ಯವಾಗಿ ಜಮೀನಿನ ಆರ್.ಟಿ.ಸಿ ಆಧಾರದಲ್ಲಿ ಬಡ್ಡಿರಹಿತವಾಗಿ ಮೂರು ಲಕ್ಷ ರೂ.ವರೆಗೆ ಸಾಲ ದೊರೆಯಬೇಕು.
ಕನಿಷ್ಠ ಬೆಂಬಲ ಬೆಲೆಯ ನಿರೀಕ್ಷೆ:
ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಸಿಗುವಂತಾಗಬೇಕು. ಬೆಲೆ ಕಡಿಮೆಯಾದ ವೇಳೆ ಸರ್ಕಾರಗಳೇ ಬೆಳೆಯನ್ನು ಖರೀದಿಸಿ ರೈತರಿಗೆ ನೆರವಾಗುವ ಯೋಜನೆ ಜಾರಿಗೊಳಿಸಬೇಕು. ಏಕೆಂದರೆ ಈ ಹಿಂದೆ 2018ರಲ್ಲಿ ರೈತರ ಆದಾಯ ದ್ವಿಗುಣ ಮಾಡುವುದಾಗಿ ಇದೇ ಮೋದಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲೇಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಇದರ ಜೊತೆ ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಕಬ್ಬಿನಿಂದ ತಯಾರಿಸಲ್ಪಡುವ ಎಥೆನಾಲ್ ಉತ್ಪಾದನೆಯ ಲಾಭವನ್ನು ರೈತರಿಗೆ ಹಂಚಿಕೆ ಮಾಡುವ ಕಾನೂನು ಜಾರಿಗೊಳಿಸಬೇಕಿದ್ದು, ಸದ್ಯ ರಾಜ್ಯದಲ್ಲಿ ಈವರೆಗೂ 36 ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿದ್ದು, ಇನ್ನೂ 60ಕ್ಕೂ ಹೆಚ್ಚು ಕಾರ್ಖಾನೆಗಳು ಇದಕ್ಕಾಗಿ ಲೈಸೆನ್ಸ್ ಕೇಳಿವೆ. ಈ ಹಿನ್ನೆಲೆ ಎಥೆನಾಲ್ ಉತ್ಪಾದನೆಯ ಲಾಭ ರೈತರಿಗೆ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಮೂಗಿಸೆ ತುಪ್ಪ ಸವರುವ ಕೆಲಸ ಸಲ್ಲದು
ಎಪಿಎಂಸಿಗಳಲ್ಲಿ ಇರುವ ಅಡಮಾನ ಸಾಲ ಸೌಲಭ್ಯ ಕೇವಲ ನಾಮಕಾವಸ್ತೆಗೆ ಮಾತ್ರವೇ ಇದ್ದು, ಈ ಯೋಜನೆಯಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು, ಇದನ್ನು ಸದೃಢಗೊಳಿಸಿ ರೈತರಿಗೆ ಮೂರು ತಿಂಗಳವರೆಗೂ ಬಡ್ಡಿರಹಿತ ಅಡಮಾನ ಸಾಲ ಸೌಲಭ್ಯ ನೀಡಬೇಕಿದೆ. ಇದರ ಜೊತೆಗೆ ವಿಶ್ವ ರೈತ ದಿನಾಚರಣೆಯನ್ನು ಭಾರತ್ ಕಿಸಾನ್ ದಿನವನ್ನಾಗಿ ಮಾಡಲಾಗುತ್ತಿದೆ. ಇದರ ಬದಲಾಗಿ ದೇಶಾಧ್ಯಂತ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಾಡಲಾಗುವ ಕೃಷಿ ಮೇಳವನ್ನು ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಮಾಡಬೇಕು. ಇದರಿಂದ ಸರ್ಕಾರಕ್ಕೆ ಹೊರೆಯು ಆಗುವುದಿಲ್ಲ ಮತ್ತು ರೈತರಿಗೆ ಗೌರವ ನೀಡಿದಂತೆ ಆಗಲಿದೆ ಎಂದು ಹೇಳಿದರು.