ಖೇಣಿ ಸೇರ್ಪಡೆ ಮೂಲಕ ಸಿದ್ದರಾಮಯ್ಯ ಏನು ಅಂತ ಗೊತ್ತಾಗಿದೆ: ಯಡಿಯೂರಪ್ಪ
Recommended Video
ಮೈಸೂರು, ಮಾರ್ಚ್ 6 : ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ರಾಜ್ಯದ ಜನತೆಯ ನಂಬಿಕೆ- ವಿಶ್ವಾಸ ಕಳೆದುಕೊಂಡಿದ್ದೀರಿ. ರಾಜ್ಯದ ಇತಿಹಾಸದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ ಎಂಬುದನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು. ಸಿದ್ದರಾಮಯ್ಯ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಿದ ಲೂಟಿಕೋರ ಸಿದ್ದರಾಮಯ್ಯ ಎಂದು ಆರೋಪ ಮಾಡಿದರು.
ಸಿದ್ದರಾಮಯ್ಯನವರಿಗೆ ನೇಗಿಲು ಹಿಡಿಯುವ ಸವಾಲು ಹಾಕಿದ ಯಡಿಯೂರಪ್ಪ
ಈ ಕುರಿತು ತನಿಖೆಯಾಗಬೇಕು ಎಂದು ದೇವೇಗೌಡರು ಹೇಳಿದ್ದರು. ಅಷ್ಟೇ ಅಲ್ಲ, ಲೂಟಿಕೋರ ಹಾಗೂ ದರೋಡೆಕೋರ ಅಶೋಕ್ ಖೇಣಿಯನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಅವರನ್ನು ಮೈಸೂರು- ಚಾಮರಾಜನಗರ ಜಿಲ್ಲೆಗಳಿಗೆ ಕರೆದುಕೊಂಡು ಬನ್ನಿ. ನಮಗೂ ಒಳ್ಳೆಯದು. ಏಕೆಂದರೆ ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ನಿಮ್ಮ ಪಕ್ಷ ಸೋಲುತ್ತದೆ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಲ್ಲ
ಭ್ರಷ್ಟರು ಯಾರು ಅಂತ ಬಹಿರಂಗ ಚರ್ಚೆಗೆ ಕರೆ ನೀಡಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ನಾನು ಅವರ ಬಳಿ ಯಾವುದೇ ಬಹಿರಂಗ ಚರ್ಚೆಗೆ ಹೋಗುವುದಿಲ್ಲ. ಅವರಿಗೆ ನನ್ನ ಬಳಿ ಮಾತನಾಡುವ ನೈತಿಕತೆಯಿಲ್ಲ. ಅವರು ಮಾಡಿದ ಹಗರಣಗಳ ಬಗ್ಗೆ ಈಗಾಗಲೇ ಚಾರ್ಜ್ ಶೀಟ್ ಪ್ರಿಂಟ್ ಮಾಡಿ ಹಂಚುತ್ತಿದ್ದೇವೆ. ಸಿದ್ದರಾಮಯ್ಯ ಕಾಂಗ್ರೆಸ್ ನ ಮುಳುಗಿಸಿ ಹೋಗುತ್ತಾರೆ ಎಂದರು.
ನಾವು ಅಧಿಕಾರಕ್ಕೆ ಬರ್ತೀವಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಕಾಂಗ್ರೆಸ್ ಮುಕ್ತ ಭಾರತ ನಮ್ಮ ಧ್ಯೇಯ. ಅದನ್ನು ಮಾಡುತ್ತೇವೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇರೋದು. ಇಲ್ಲಿಯೂ ನಾವು ಈ ಬಾರಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಪೇಂದ್ರ ಸೇರ್ಪಡೆ ಬಗ್ಗೆ ಗೊತ್ತಿಲ್ಲ
ಇನ್ನು ಕೆಪಿಜೆಪಿಯಲ್ಲಿ ಎದ್ದಿರುವ ಭಿನ್ನಾಭಿಪ್ರಾಯ ಹಾಗೂ ಅಲ್ಲಿಂದ ಉಪೇಂದ್ರ ಹೊರಬಂದು, ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಯಡಿಯೂರಪ್ಪ ಉತ್ತರ ನೀಡಿದರು.
ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ
ಕಾಂಗ್ರೆಸ್ ಶಾಸಕರ ಅಸಮಾಧಾನ
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಸೋಮವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಅವರ ಮೇಲೆ ನಾನಾ ಆರೋಪಗಳಿವೆ. ಕಾಂಗ್ರೆಸ್ ಗೆ ಸೇರಿಸಿಕೊಂಡ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ರೈತ ಮುಖಂಡರು, ಕಾಂಗ್ರೆಸ್ ನ ಕೆಲ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.