ಎಸಿಬಿ ದಾಳಿ: ಮೈಸೂರು ಸರ್ಕಲ್ ಇನ್ಸ್ಪೆಕ್ಟರ್ ಬಾಲಕೃಷ್ಣ ವಶಕ್ಕೆ
ಮೈಸೂರು, ಮಾರ್ಚ್ 16: ಮೈಸೂರಿನಲ್ಲಿ ಎಸಿಬಿ ಅಧಿಕಾರಿಗಳು ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ವಿಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಾಲಕೃಷ್ಣ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇನ್ಸ್ಪೆಕ್ಟರ್ ಬಾಲಕೃಷ್ಣರ ವಿಜಯನಗರದ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪ್ರಭಾವಿ ವ್ಯಕ್ತಿಗಳ ಸಹಕಾರದಿಂದ ಕಳೆದ ಮೂರು ವರ್ಷದಿಂದ ಒಂದೇ ಠಾಣೆಯಲ್ಲಿ ಮುಂದುವರೆದಿದ್ದಾರೆ ಎಂಬ ಆರೋಪವೂ ಬಾಲಕೃಷ್ಣ ಅವರ ಮೇಲಿದೆ.
ಸದ್ಯ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಬಾಲಕೃಷ್ಣರನ್ನು ಕರೆದೊಯ್ದಿರುವ ಅಧಿಕಾರಿಗಳು, ಮನೆಯಲ್ಲೇ ಉಳಿದ ಮತ್ತಷ್ಟು ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರಿದಿದೆ.

ಮೈಸೂರಿನ ವಿಜಯನಗರ ಮೊದಲನೇ ಹಂತದ 16ನೇ ಕ್ರಾಸ್ನಲ್ಲಿರುವ ಬಾಲಕೃಷ್ಣ ಮನೆಗೆ ಬೆಳಿಗ್ಗೆ 7 ಗಂಟೆಗೆ ಆಗಮಿಸಿದ ಎಸಿಬಿ ಅಧಿಕಾರಿಗಳು, 10ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ಬಾಲಕೃಷ್ಣ ಮನೆ ಪರಿಶೀಲನೆ ನಡೆಸಿದರು.
ಹಾಸನದಲ್ಲಿರುವ ಬಾಲಕೃಷ್ಣ ಸಂಬಂಧಿ ನಿವಾಸದ ಮೇಲೂ ಎಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ರಾಜ್ಯದಾದ್ಯಂತ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಾಸನ ಜಿಲ್ಲೆಯ ಬಾಲಕೃಷ್ಣ ಸಂಬಂಧಿಕರ ಮನೆ ಮೇಲೆ ಎಸಿಬಿ ದಾಳಿ
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಎರಡು ಕಡೆ ಎಸಿಬಿ ದಾಳಿ ನಡೆಸಿದ್ದು, ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಬಾಲಕೃಷ್ಣ ಸಂಬಂಧಿಕರ ಮನೆಗಳ ಮೇಲೆ ಎರಡು ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಬಾಲಕೃಷ್ಣ ಮಾವ ಚಂದ್ರೇಗೌಡರ ಮನೆ ಹಾಗೂ ಬಾಲಕೃಷ್ಣ ಅವರ ಮತ್ತೊಂದು ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಹೊಳೆನರಸೀಪುರ ರಸ್ತೆಯಲ್ಲಿರುವ ಮನೆ ಹಾಗೂ ಪಟ್ಟಣದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದು, ಸದ್ಯ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಾಸನ ಮತ್ತು ಮಂಡ್ಯ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದ್ದು, ಬಾಲಕೃಷ್ಣ ಮೈಸೂರಿನ ವಿಜಯನಗರದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದು, ಬಾಲಕೃಷ್ಣ ಮಾವ ಚಂದ್ರೇಗೌಡರು ಕಾಂಗ್ರೆಸ್ ಮುಖಂಡ ಹಾಗೂ ನಿವೃತ ಆರ್ಟಿಓ ಅಧಿಕಾರಿ ಬಾಗೂರು ಮಂಜೇಗೌಡರ ಸಂಬಂಧಿಕರಾಗಿದ್ದಾರೆ.











Click it and Unblock the Notifications